ಕೊರೊನಾ ಭೀತಿ ನಡುವೆ ಸಂಸತ್ ಅಧಿವೇಶನ ನಡೆಸುವ ಬಗ್ಗೆ ಆಡಳಿತ-ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. ಒಂದು ಕಡೆ ಬಿಜೆಪಿ ಸಂಸದರು ಅಧಿವೇಶನ ನಡೆಯಲೇಬೇಕು ಎನ್ನುತ್ತಿದ್ದರೇ, ಕಾಂಗ್ರೆಸ್ ಸಂಸದರು ಬೇಡ ಎನ್ನುತ್ತಿದ್ದಾರೆ. ಈ ಮಧ್ಯೆ ಇದೇ ವಿಚಾರವಾಗಿ ಸಂಸದರಾದ ತೇಜಸ್ವಿ ಸೂರ್ಯ, ಕಾರ್ತಿ ಚಿದಂಬರಂ ನಡುವೆ ಟ್ವೀಟ್ ವಾರ್ ನಡೆದಿದೆ.
ಜನರಿಂದ ಕೊರೊನಾ ಭೀತಿ ಹೋಗಲಾಡಿಸಲು ಸಂಸದರು ವೈದ್ಯರು ಹಾಗೂ ಸೈನಿಕರಂತೆ ಕೆಲಸ ಮಾಡಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ಆದರೆ ತೇಜಸ್ವಿ ಅವರ ವಾದವನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, “ಕೊರೊನಾ ಸೋಲಿಸಲು ನಮ್ಮ ದೇಶದ ವೈದ್ಯ ಸಿಬ್ಬಂದಿ ಮಾಡುತ್ತಿರುವ ಕೆಲಸಕ್ಕೆ ನನ್ನ ಸಲಾಂ. ಅಂತೆಯೇ ಗಡಿ ಕಾಯುತ್ತಿರುವ ಯೋಧರ ಮೇಲೂ ಅಪಾರ ಗೌರವವಿದೆ. ಆದರೆ ಸಂಸದರನ್ನು ವೈದ್ಯರಿಗೆ ಹಾಗೂ ಸೈನಿಕರಿಗೇಕೆ ಹೋಲಿಕೆ ಮಾಡಬೇಕು” ಎಂದು ಕಾರ್ತಿ ಪ್ರಶ್ನಿಸಿದ್ದಾರೆ.
ಅಲ್ಲದೆ ಸಂಸದರಿಗೂ ಕೊರೊನಾ ತಗುಲುವ ಭೀತಿ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಸಂಸದರನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಕಾರ್ತಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.