ಕೆನಡಾದಿಂದ ಹಿಂಪಡೆದ ಅನ್ನಪೂರ್ಣೇಶ್ವರಿ ವಿಗ್ರಹ ವಾರಣಾಸಿಯ ಕಾಶಿವಿಶ್ವನಾಥ ದೇವಾಲಯಕ್ಕೆ…..
ವಾರಣಾಸಿ : ಪ್ರದೇಶದಲ್ಲಿರುವ, ದೇವರ ನಾಡೆಂದೇ ಪ್ರಸಿದ್ಧಿ ಪಡೆದಿರುವ ತೀರ್ಥ ಸ್ಥಳಗಳ ತಾಣ ವಾರಣಾಸಿ… ಇದು ಪವಿತ್ರ ಸ್ಥಳವಾಗಿದ್ದು , ತೀರ್ಥ ಯಾತ್ರೆಗೂ ಹೆಸರುವಾಸಿ.. ಅನೇಕಾದಿ ದೇವಾಲಯಗಳು ಈ ನೆಲದಲ್ಲಿವೆ. ಇಲ್ಲಿರುವ ಕಾಶಿ ವಿಶ್ವನಾಥ ಮಂದಿರ ಜಗತ್ ಪ್ರಸಿದ್ಧಿ ಪಡೆದಿದೆ. ಇದೀಗ ಕೆನಡಾದಿಂದ ಹಿಂಪಡೆಯಲಾಗಿರುವ ಅನ್ನಪೂರ್ಣೇಶ್ವರಿ ದೇವಿಯ ವಿಗ್ರಹವನ್ನು ಇದೇ ದೇವಾಲಯದಲ್ಲಿ ಇರಿಸಲು ಸರ್ಕಾರ ನಿರ್ಧಾರ ಮಾಡಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಕಟಿಸಿದೆ.
ನವೆಂಬರ್ 11 ರಂದು ದೆಹಲಿಯಿಂದ ಅಲೀಗಡಕ್ಕೆ ಅನ್ನಪೂರ್ಣ ದೇವಿಯ ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗುತ್ತದೆ.ಬಳಿಕ ನವೆಂಬರ್ 12 ರಂದು ಕನೌಜ್ಗೆ ಕೊಂಡೊಯ್ಯಲಾಗುತ್ತದೆ. ನಂತರ ನವೆಂಬರ್ 14 ರಂದು ಅಯೋಧ್ಯೆ ತಲುಪಲಿದೆ ಎಂದು ಸಚಿವಾಲಯ ತಿಳಿಸಿದೆ. ಅಂತಿಮವಾಗಿ ನವೆಂಬರ್ 15 ರಂದು ವಾರಾಣಸಿ ತಲುಪಲಿರುವ ಅನ್ನಪೂರ್ಣ ದೇವಿ ವಿಗ್ರಹವನ್ನು ಸೂಕ್ತ ಧಾರ್ಮಿಕ ವಿಧಿ ವಿಧಾನಗಳ ನಂತರ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಇರಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಡಿಒಎನ್ಇಆರ್ ಸಚಿವ ಜಿ.ಕಿಶನ್ ರೆಡ್ಡಿ ಅವರು ಬುಧವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ, ವಿಗ್ರಹವನ್ನು ಹಿಂಪಡೆದು, ದೇಶಕ್ಕೆ ತಂದ ಪ್ರಕ್ರಿಯೆ ಮತ್ತು ವಿವಿಧ ದೇಶಗಳಲ್ಲಿರುವ ವಿಗ್ರಹಗಳು ಮತ್ತು ಪುರಾತನ ವಸ್ತುಗಳನ್ನು ವಾಪಸ್ ನಮ್ಮ ದೇಶಕ್ಕೆ ತಂದಿರುವ ಕುರಿತು ಮಾಹಿತಿ ನೀಡಿದರು. 1976ರಿಂದ ಇಲ್ಲಿವರೆಗೆ ಸುಮಾರು 55 ವಿಗ್ರಹಗಳನ್ನು ವಿದೇಶಗಳಿಂದ ಭಾರತಕ್ಕೆ ಹಿಂತಿರುಗಿಸಲಾಗಿದೆ. ಇದರಲ್ಲಿ ಶೇ 75ರಷ್ಟು ವಿಗ್ರಹಗಳು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ದೇಶಕ್ಕೆ ಮರಳಿವೆ ಎಂದು ಸಚಿವಾಲಯ ತಿಳಿಸಿದೆ.