ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್-2. ಈ ಚಿತ್ರ ಇದೆ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಆಗುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಚಿತ್ರದ ರಿಲೀಸ್ ಮುಂದಕ್ಕೆ ಹೋಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಈಗಾಗಲೇ ಸಿನಿಮಾ ಚಿತ್ರೀಕರಣ ಭಾಗಶಃ ಮುಗಿದಿದ್ದು, ಇನ್ನೂ 25 ದಿನಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಈ ಕಾರಣ, ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಮಾಡಿ ಮುಗಿಸಿ ಅಂದುಕೊಂಡ ದಿನಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಇನ್ನು ಕೆಜಿಎಫ್ ಮೊದಲ ಭಾಗವನ್ನು ನೋಡಿದವರು ಚಿತ್ರದ ಮೇಕಿಂಗ್ ಫಿದಾ ಆಗಿದ್ದರು. ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿರಲಿದ್ದು, ಚಿತ್ರದಲ್ಲಿ ವಿಲನ್ ಆಗಿ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಅಧೀರನಾಗಿ ಸಂಜಯ್ ದತ್ ಅವರನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಅದರಲ್ಲೂ ಚಿತ್ರದಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಲುಕ್ ಹೇಗಿರಲಿದೆ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಆದರೀಗ ಸಂಜಯ್ ದತ್ ಅಧೀರ ಲುಕ್ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫೋಟೋ ಹೇಗಿದೆ..?
“ಉದ್ದವಾದ ವಿಚಿತ್ರ ಕೂದಲು ಜೊತೆಗೆ ತಲೆಯಲ್ಲಿ ಟ್ಯಾಟೂ, ಹಣ್ಣಾದ ಉದ್ದನೆಯ ದಾಡಿ ಇದು ಕೆಜಿಎಫ್-2 ಚಿತ್ರದಲ್ಲಿನ ಅಧೀರ ಲುಕ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಧೀರ ನ ಲುಕ್ ವೈರಲ್ ಆಗಿದ್ದು, ಅಧೀರನ ಭಯಾನಕ ನೋಟ ಎದುರಾಳಿಯನ್ನು ಬೆಚ್ಚಿಬೀಳಿಸುವಂತಿದೆ.
ಚಿತ್ರತಂಡಕ್ಕೆ ತಲೆ ನೋವು
ಸದ್ಯ ಲೀಕ್ ಆಗಿರುವ ಅಧೀರನ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೆ ಕೆಲವರು ಫೋಟೋ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಇದು ಅಧೀರನ ಲುಕ್ ಅಲ್ಲವೇ ಅಲ್ಲ ಎಂದು ವಾದಿಸುತ್ತಿದ್ದಾರೆ. ಇನ್ನು ಚಿತ್ರತಂಡ ಸಾಕಷ್ಟು ಎಚ್ಚರಿಕೆಯಿಂದ ಶೂಟಿಂಗ್ ಮಾಡುತ್ತಿದ್ದು, ಸಿನಿಮಾದ ಯಾವುದೇ ಲುಕ್ ಅಥವಾ ಚಿತ್ರೀಕರಣದ ಫೋಟೋಗಳು ಹೊರಬರಬಾರದು ಎಂದು ಮುತುವರ್ಜಿ ವಹಿಸಿದೆ. ಚಿತ್ರೀಕರಣ ಸಮಯದಲ್ಲಿ, ಅಥವಾ ಎಡಿಟಿಂಗ್ ಸಮಯದಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಸಹ ಈಗ ಚಿತ್ರದ ಪ್ರಮುಖ ಫೋಟೋ ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ.
ಭಯಂಕರ ವ್ಯಕ್ತಿ ಅಲ್ಲ, ಅತೀ ಭಯಂಕರ ವ್ಯಕ್ತಿ
ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕೆಜಿಎಫ್-2 ನಲ್ಲಿ ಕುತೂಹಲ ಮೂಡಿಸಿದ ಪಾತ್ರಗಳಲ್ಲಿ ಅಧೀರ ಪಾತ್ರ ಕೂಡ ಒಂದು. “ಮೊದಲ ಭಾಗದಲ್ಲಿ ಯಾರಿಗೂ ಕಾಣದೇ ಕಥೆ ನಡೆಸಿದ್ದ ಅಧೀರ, 2ನೇ ಭಾಗದಲ್ಲಿ ರಾಕಿಭಾಯ್ ಗೆ ಎದುರಾಗಲಿದ್ದಾನೆ. ಇದು ರಾಕಿಭಾಯ್ ಸಹ ಊಹಿಸಿರೋದಿಲ್ಲ. ಯಾಕೆಂದರೆ ರಾಕಿಭಾಯ್ ಗೆ ಅಧೀರನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಸದ್ಯ ನಾವೆಲ್ಲರೂ ನೋಡಿದ ಕೆಜಿಎಫ್-1 ಸಿನಿಮಾದಲ್ಲಿ ರಾಕಿಭಾಯ್ ಗರುಡನನ್ನೇ ಟಾರ್ಗೆಟ್ ಮಾಡಿದ್ದಾನೆಯೇ ಹೊರೆತು ಅಧೀರನ್ನಲ್ಲ. ಹೀಗಾಗಿ ಕೆಜಿಎಫ್ 2 ನಲ್ಲಿ ಅಧೀರನ ಪಾತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಅಧೀರನ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಸಹ ಇವೆ.
ಒಟ್ಟಾರೆ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಯಶ್ ಮುಂದೆ ತೊಡೆತಟ್ಟಿನಿಂತಿರುವ ಸಂಜಯ್ ದತ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಮೊದಲು ಸಂಜಯ್ ದತ್ ಹೇಳಿದ ಹಾಗೆ “ಅಧೀರ ನೀವು ಅಂದುಕೊಂಡ ಹಾಗೆ ಭಯಂಕರವಾದ ವ್ಯಕ್ತಿ ಅಲ್ಲ, ಅತೀ ಭಯಂಕರ ವ್ಯಕ್ತಿ” ಎಂದಿದ್ದರು.