ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವ ಸಿದ್ಧತೆ ಮತ್ತು ನಿಖರ ಅಂಕಿಅಂಶಗಳಿಲ್ಲದೆ ಸಭೆಗೆ ಬಂದಿದ್ದ ಅಧಿಕಾರಿಗಳ ನಡೆ ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ.
ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು! ಅಧಿಕಾರಿಗಳ ಲೆಕ್ಕಕ್ಕೆ ಸಚಿವರು ಶಾಕ್
ಕಳೆದ 20 ವರ್ಷಗಳಿಂದ ಸಾವಿರಾರು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಬೀದಿ ನಾಯಿಗಳ ಸಂಖ್ಯೆ ಮಾತ್ರ ಕಿಂಚಿತ್ತೂ ಕಡಿಮೆಯಾಗುತ್ತಿಲ್ಲ. ಅಧಿಕಾರಿಗಳು ನೀಡಿದ ಅಂಕಿಅಂಶಗಳ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ಲಕ್ಷಾಂತರ ನಾಯಿಗಳಿಗೆ ಆಪರೇಷನ್ ಮಾಡಲಾಗಿದೆ. 2016 ರಿಂದ 2023ರ ಅವಧಿಯಲ್ಲೇ 3.33 ಲಕ್ಷ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ 2023ರ ಸರ್ವೆ ಪ್ರಕಾರ ನಗರದಲ್ಲಿ ಇರುವುದೇ 2.79 ಲಕ್ಷ ನಾಯಿಗಳು!
ಇರುವ ನಾಯಿಗಳ ಸಂಖ್ಯೆಗಿಂತ ಮಾಡಿರುವ ಚಿಕಿತ್ಸೆಗಳ ಸಂಖ್ಯೆಯೇ ಹೆಚ್ಚಿದೆ ಎನ್ನುವ ಅಧಿಕಾರಿಗಳ ಅಸಂಬದ್ಧ ಲೆಕ್ಕಾಚಾರ ಕೇಳಿ ಸಚಿವರು ದಂಗಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ 42 ಕೋಟಿ ರೂಪಾಯಿ ಜನರ ತೆರಿಗೆ ಹಣ ಈ ಯೋಜನೆಗಾಗಿ ಖರ್ಚಾಗಿದೆ. ಹಣ ವ್ಯಯವಾಗುತ್ತಿದ್ದರೂ ನಾಯಿಗಳ ಸಂತಾನ ಮಾತ್ರ ವೃದ್ಧಿಯಾಗುತ್ತಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಕಿವಿಯಲ್ಲಿ ದಾಸವಾಳ ಇದೆಯೇ?
ಅಧಿಕಾರಿಗಳು ನೀಡಿದ ತರ್ಕವಿಲ್ಲದ ಮತ್ತು ಗೊಂದಲದ ಉತ್ತರಗಳನ್ನು ಕೇಳಿ ಸಿಟ್ಟಾದ ಸಚಿವರು, ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕುಳಿತಿದ್ದೇನಾ? ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಹಿರಿಯ ಅಧಿಕಾರಿಗಳಿದ್ದರೂ ಸಚಿವರ ಸಭೆಗೆ ಬರುವಾಗ ಕನಿಷ್ಠ ಡಾಟಾ ಇಲ್ಲದೆ ಬರಿಗೈನಲ್ಲಿ ಬಂದಿರುವುದು ಎಷ್ಟು ಸರಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಟ್ಟ ಗಿಡಗಳು ಎಲ್ಲಿ ಹೋದವು? 20 ಲಕ್ಷ ನೆಟ್ಟರೆ ಇರುವುದು ಕೇವಲ 9 ಲಕ್ಷ!
ಕೇವಲ ನಾಯಿಗಳ ವಿಚಾರ ಮಾತ್ರವಲ್ಲದೆ, ನಗರದಲ್ಲಿ ಗಿಡ ನೆಡುವ ಯೋಜನೆಯಲ್ಲೂ ಭಾರೀ ವ್ಯತ್ಯಾಸ ಕಂಡುಬಂದಿದೆ. 2008 ರಿಂದ ಈವರೆಗೆ 20 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಆದರೆ ಮರಗಣತಿಯಲ್ಲಿ ಕೇವಲ 9 ಲಕ್ಷ ಮರಗಳು ಮಾತ್ರ ಇವೆ ಎಂದು ಅವರೇ ಹೇಳುತ್ತಿದ್ದಾರೆ. ಹಾಗಾದರೆ ಬಾಕಿ 11 ಲಕ್ಷ ಗಿಡಗಳು ಏನಾದವು? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಒಂದು ಗಿಡ ನೆಟ್ಟು ಅದನ್ನು ಬೆಳೆಸಲು 2,300 ರಿಂದ 3,300 ರೂಪಾಯಿಗಳವರೆಗೆ ಖರ್ಚು ಮಾಡಲಾಗುತ್ತಿದೆ. ಗುಂಡಿ ತೆಗೆಯಲು, ನೀರು ಹಾಕಲು ಮತ್ತು ಟ್ರೀ ಗಾರ್ಡ್ ಹಾಕಲು ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದ್ದರೂ, ಕಣ್ಣಿಗೆ ಕಾಣುವಂತೆ ಗಿಡಗಳು ಬೆಳೆಯದಿರುವುದು ಭ್ರಷ್ಟಾಚಾರದ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ನನ್ನ ಸ್ವಂತ ಕ್ಷೇತ್ರದಲ್ಲಿಯೇ ಇಂತಹ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾರ್ಯವೈಖರಿ ಬದಲಿಸಿಕೊಳ್ಳಲು ಖಡಕ್ ಎಚ್ಚರಿಕೆ
ಸಂತಾನಹರಣ ಚಿಕಿತ್ಸೆಯ ವೇಗವನ್ನು ಕೂಡಲೇ ದ್ವಿಗುಣಗೊಳಿಸಬೇಕು ಮತ್ತು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಚಿವರು ಆದೇಶಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದರೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿ ಅಥವಾ ನುರಿತ ಸಂಸ್ಥೆಗಳ ನೆರವು ಪಡೆಯಿರಿ ಎಂದು ಸೂಚಿಸಿದ್ದಾರೆ. ಜನರ ತೆರಿಗೆ ಹಣ ಪೋಲಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ಅವರು ಅಂತಿಮ ಎಚ್ಚರಿಕೆ ನೀಡಿದ್ದಾರೆ.








