ಬಳ್ಳಾರಿ ಮತ್ತು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕಿಚ್ಚು ಈಗ ಮತ್ತಷ್ಟು ಜೋರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ನಾಗೇಂದ್ರ ವಿರುದ್ಧ ಅತ್ಯಂತ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಇ.ಡಿ. ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ನಾಗೇಂದ್ರ ಅವರ ಭ್ರಷ್ಟಾಚಾರದ ಜಾತಕವನ್ನು ರೆಡ್ಡಿ ಬಿಚ್ಚಿಟ್ಟಿದ್ದಾರೆ.
ನಿನ್ನದು ಕರ್ಮದ ಕಣ್ಣೀರು, ಬಿಡದು ಚಂದ್ರಶೇಖರ್ ಆತ್ಮದ ಶಾಪ
ರಾಜೀನಾಮೆ ನೀಡುವ ಸಂದರ್ಭದಲ್ಲಿ ನಾಗೇಂದ್ರ ಕಣ್ಣೀರು ಸುರಿಸಿದ್ದನ್ನು ಕಂಡು ಕೆಂಡಾಮಂಡಲರಾದ ಜನಾರ್ದನ ರೆಡ್ಡಿ, ಏಯ್ ನಾಗೇಂದ್ರ, ನೀನು ಈಗ ಸುರಿಸುತ್ತಿರುವುದು ಪಶ್ಚಾತ್ತಾಪದ ಕಣ್ಣೀರಲ್ಲ, ಅದು ನಿನ್ನ ಕೆಟ್ಟ ಕರ್ಮದ ಕಣ್ಣೀರು ಎಂದು ಗುಡುಗಿದ್ದಾರೆ. ವಾಲ್ಮೀಕಿ ಸಮುದಾಯದ ಬಡ ಜನರಿಗೆ ಸೇರಬೇಕಾದ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಹೊಡೆದಿದ್ದೀಯಾ. ಈ ಹಗರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮ ನಿನಗೆ ಸುಮ್ಮನೆ ಬಿಡುವುದಿಲ್ಲ. ಆ ಸತ್ತ ವ್ಯಕ್ತಿಯ ಶಾಪ ನಿನ್ನನ್ನು ಸದಾ ಕಾಡಲಿದೆ ಎಂದು ಎಚ್ಚರಿಸಿದ್ದಾರೆ.
ಇಡಿ ಚಾರ್ಜ್ ಶೀಟ್ ಅನ್ನು ಮುಂದಿಟ್ಟುಕೊಂಡು ಮಾತನಾಡಿದ ರೆಡ್ಡಿ, ವಾಲ್ಮೀಕಿ ನಿಗಮದ ಹಣ ನೇರವಾಗಿ ಮುಂಬೈ ಮೂಲದ ಮೂವರ ಖಾತೆಗೆ ವರ್ಗಾವಣೆಯಾಗಿದೆ. ಆ ವ್ಯಕ್ತಿಗಳಿಗೂ ನಿನಗೂ ಏನು ಸಂಬಂಧ? ಬಳ್ಳಾರಿಯ ಜನರಿಗೆ ಮತ್ತು ಮುಸ್ಲಿಂ ಮುಖಂಡರಿಗೆ ಈ ಬಗ್ಗೆ ಸ್ಪಷ್ಟನೆ ನೀಡು ಎಂದು ಸವಾಲು ಹಾಕಿದರು. ಸುಮಾರು 600ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಡ್ರಾ ಮಾಡಲಾದ ಹಣದಲ್ಲಿ ನಾಗೇಂದ್ರ ಹೊಸ ಕಾರು, ಚಿನ್ನಾಭರಣ ಮತ್ತು ಬಂಗಲೆ ಖರೀದಿಸಿದ್ದಾನೆ. ಬಡವರ ಹಣದಲ್ಲಿ ನೀನು ಸುಖ ಅನುಭವಿಸುತ್ತಿದ್ದೀಯಾ ಎಂದು ಆಕ್ರೋಶ ಹೊರಹಾಕಿದರು.
ರಿಜಕ್ಟ್ ಪೀಸ್ ಎಂದು ಹೀಯಾಳಿಸಿದವರಿಗೆ ರೆಡ್ಡಿ ತಿರುಗೇಟು
ನನ್ನನ್ನು ಮತ್ತು ಶ್ರೀರಾಮುಲು ಅವರನ್ನು ಪದೇಪದೆ ರಿಜಕ್ಟ್ ಪೀಸ್ ಎಂದು ಅವಹೇಳನ ಮಾಡುತ್ತಿರುವ ನಾಗೇಂದ್ರನಿಗೆ ರೆಡ್ಡಿ ಖಡಕ್ ಉತ್ತರ ನೀಡಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಸಿದ್ದರಾಮಯ್ಯ, ಯಡಿಯೂರಪ್ಪ, ಎಸ್ಎಂ ಕೃಷ್ಣ ಅವರಂತಹ ದಿಗ್ಗಜರೇ ಸೋತಿದ್ದಾರೆ. ಹಾಗಾದರೆ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಸೋತಾಗ ಅವರು ರಿಜಕ್ಟ್ ಪೀಸ್ ಆಗಿದ್ದರೇ? ಸೋತ ಮೇಲೆ ಅವರು ಎಐಸಿಸಿ ಅಧ್ಯಕ್ಷರಾಗಲಿಲ್ಲವೇ? ಎಂದು ಪ್ರಶ್ನಿಸಿದರು. ಗೆದ್ದ ಮೇಲೆ ನೀನು ಮಾಡಿದ್ದೇನು? ವಾಲ್ಮೀಕಿ ಸಮುದಾಯದ ಹಣ ಲೂಟಿ ಮಾಡಿದ್ದೇ ನಿನ್ನ ದೊಡ್ಡ ಸಾಧನೆಯೇ ಎಂದು ಲೇವಡಿ ಮಾಡಿದರು.
ತಾಕತ್ತಿದ್ದರೆ 10 ಶಾಸಕರಿಂದ ರಾಜೀನಾಮೆ ಕೊಡಿಸು, ನಾನು ರೆಡಿ
ನನ್ನ ತಾಕತ್ತಿನ ಬಗ್ಗೆ ಮಾತನಾಡುವ ನಾಗೇಂದ್ರನಿಗೆ ಜನಾರ್ದನ ರೆಡ್ಡಿ ಓಪನ್ ಚಾಲೆಂಜ್ ಹಾಕಿದ್ದಾರೆ. ನಿನಗೆ ನಿಜಕ್ಕೂ ತಾಕತ್ತಿದ್ದರೆ, ಹಗರಣದ ಹಣದಿಂದ ಗೆದ್ದಿರುವ ಸಂಸದ ತುಕಾರಾಂ ಮತ್ತು ಬಳ್ಳಾರಿ ಜಿಲ್ಲೆಯ ಅಖಂಡ 10 ಶಾಸಕರಿಂದ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆಗೆ ಬನ್ನಿ. ನಾನು ಬಳ್ಳಾರಿಗೆ ಬಂದಿದ್ದೇನೆ, ಜನರ ಮುಂದೆ ತೀರ್ಮಾನವಾಗಲಿ. ಮುಂಬರುವ ಚುನಾವಣೆಯಲ್ಲಿ ಬಳ್ಳಾರಿಯ ಹತ್ತಕ್ಕೆ ಹತ್ತು ಕ್ಷೇತ್ರಗಳನ್ನು ಗೆದ್ದು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಹಗರಣದ ಹಣದಲ್ಲೇ ತುಕಾರಾಂ ಪತ್ನಿ ಶಾಸಕಿಯಾದರು
ವಾಲ್ಮೀಕಿ ನಿಗಮದ ಲೂಟಿ ಮಾಡಿದ ಹಣವನ್ನು ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ. ಇದೇ ಹಣದ ಬಲದಿಂದ ಸಂಸದ ತುಕಾರಾಂ ಅವರ ಪತ್ನಿ ಶಾಸಕಿಯಾಗಿದ್ದಾರೆ. ಇಂತಹ ಭ್ರಷ್ಟಾಚಾರದ ಹಿನ್ನೆಲೆ ಇರುವ ಕುಟುಂಬಕ್ಕೆ ಮತ್ತೆ ಮಂತ್ರಿ ಸ್ಥಾನ ನೀಡಿದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾಗೇಂದ್ರ ರಾಜೀನಾಮೆ ನೀಡಿದ ತಕ್ಷಣ ಹಗರಣ ಮುಗಿಯಿತು ಎಂದು ಭಾವಿಸಬೇಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವವರೆಗೂ ಬಿಜೆಪಿ ಮತ್ತು ನಮ್ಮ ನಾಯಕರಾದ ವಿಜಯೇಂದ್ರ ಹಾಗೂ ಆರ್. ಅಶೋಕ್ ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧವೂ ಟೀಕೆ
ಸದನದಲ್ಲೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡ ಸಿದ್ದರಾಮಯ್ಯ ಅವರು, ನಾಗೇಂದ್ರನಿಂದ ಯಾಕೆ ರಾಜೀನಾಮೆ ಪಡೆದರು? ತಪ್ಪೇ ಮಾಡದಿದ್ದರೆ ರಾಜೀನಾಮೆ ಪಡೆಯುವ ಅಗತ್ಯವಿರಲಿಲ್ಲ. ಈಗ ಡಿಕೆ ಶಿವಕುಮಾರ್ ಅವರೂ ಕೂಡ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ರಾಜೀನಾಮೆ ಕೊಡಿಸಿದ್ದಾರೆ. ಮನುಸ್ಮೃತಿ, ದಲಿತ ಎಂಬ ಪದಗಳನ್ನು ಬಳಸಿ ಜನರ ದಿಕ್ಕು ತಪ್ಪಿಸಲು ನೋಡಬೇಡ. ಜನರೇನು ಮೂರ್ಖರಲ್ಲ, ನಿನ್ನ ಪ್ರತಿಯೊಂದು ವಂಚನೆಯೂ ಈಗ ಬಯಲಾಗಿದೆ ಎಂದು ರೆಡ್ಡಿ ವಾಗ್ದಾಳಿ ನಡೆಸಿದರು.







