ಕಾರ್ತಿಕ ಮಾಸದ ಮಲೆನಾಡಿನ ವ್ರತಾಚರಣೆ, ಲಕ್ಷ ದೀಪೋತ್ಸವದ ಹಿನ್ನೆಲೆ ಮತ್ತು ಕೆಳದಿಯ ಹಿರಿಯ ವೆಂಕಟಪ್ಪ ನಾಯಕರ ಧರ್ಮಾಚರಣೆ: Saakshatv Naavu kelada charitre episode8
ನಮ್ಮ ರಾಜ್ಯದ ಅತಿ ಸೂಕ್ಷ್ಮ ಹಾಗೂ ಅವಿಭಾಜ್ಯ ಅಂಗವಾಗಿರುವ ಸಹ್ಯಾದ್ರಿ ಶ್ರೇಣಿ ಅಥವಾ ಪಶ್ಚಿಮ ಘಟ್ಟಗಳು ಘಟ್ಟದ ಮೇಲಿನ ಪ್ರದೇಶವಾಗಿರುವ ಮಲೆನಾಡು ಮತ್ತು ಘಟ್ಟದ ಕೆಳಗಿನ ಪ್ರದೇಶವಾಗಿರುವ ಕರಾವಳಿ ಪ್ರದೇಶದ ಸಂಸ್ಕೃತಿ, ಪರಂಪರೆ ಮತ್ತು ಆಚರಣೆಯ ಮೇಲೆ ಬಲವಾಗಿ ಪ್ರಭಾವ ಬೀರಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಅದೆಷ್ಟೋ ಹಬ್ಬ, ನೃತ್ಯ, ಜಾನಪದ ಕಲೆ, ಪಾರಂಪರಿಕ ಕೃಷಿ ಪದ್ದತಿ, ಪಾರಂಪರಿಕ ಬೆಳೆಗಳು, ಪಾರಂಪರಿಕ ಆಹಾರ ಪದ್ಧತಿ, ಸಾಹಿತ್ಯ, ಜೀವನ ಪದ್ದತಿ ಮತ್ತು ಕಟ್ಟಡ ವಾಸ್ತುಶಿಲ್ಪದಲ್ಲಿ ಸಮಾನತೆಯನ್ನು ಕಾಣಲು ಪ್ರಮುಖ ಕಾರಣ – “ಪಶ್ಚಿಮ ಘಟ್ಟಗಳು”. Saakshatv Naavu kelada charitre episode8

ಮಲೆನಾಡು ಮತ್ತು ಕರಾವಳಿಯಲ್ಲಿ ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಅದೆಷ್ಟೋ ಆಚರಣೆಗಳು ನೇರವಾಗಿ ಪಶ್ಚಿಮ ಘಟ್ಟ ಮತ್ತು ಅದರ ಪರಿಸರಕ್ಕೆ ಸಂಬಂಧಿಸಿದ್ದು ಇವೆಲ್ಲವೂ ಪರಿಸರ ಪೂರಕವಾದ ಆಚರಣೆ ಮತ್ತು ಪರಂಪರೆ ಆಗಿದೆ. ಇನ್ನೂ ದೀಪದ ಹಬ್ಬದ ಜೊತೆಗೆ ಶುರುವಾಗುವ ಕಾರ್ತಿಕ ಮಾಸ ನಮ್ಮ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಬಹಳ ವಿಶೇಷವಾಗಿದ್ದು ಈ ಮಾಸದಲ್ಲಿ ಕೈಗೊಳ್ಳುವ ಪೂಜೆ, ವ್ರತ, ತೇರು, ಜಾತ್ರೆ, ಆಚರಣೆ, ಪುಣ್ಯಕ್ಷೇತ್ರ ಮತ್ತು ದೇವಾಲಯಗಳ ದರ್ಶನ ಒಂದು ಕಡೆ ಆದರೆ ಮತ್ತೊಂದು ಕಡೆ ಕಾರ್ತಿಕ ಮಾಸದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಭಾಗಷಃ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ನಡೆಯುವ ಲಕ್ಷ ದೀಪಾರಾಧನೇ ಅಥವಾ ಲಕ್ಷ ದೀಪೋತ್ಸವ ಇಂದು ಜಗತ್ಪ್ರಸಿದ್ಧ ಆಗಿದೆ. ಈ ಲಕ್ಷ ದೀಪೋತ್ಸವ ಎಷ್ಟರಮಟ್ಟಿಗೆ ಜಗತ್ಪ್ರಸಿದ್ಧ ಆಗಿದೆ ಅಂದರೆ ಇಂದು ಕರ್ನಾಟಕದ ಹಳೆಯ ಮೈಸೂರು, ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಭಾಗದಲ್ಲೂ ಸಹಾ ಇದು ಪ್ರಚಲಿತವಾಗಿದೆ.
ಇಂದು ಕಾರ್ತಿಕ ಮಾಸ ಬಂದರೆ ಸಾಕು ಜನರು ಯಾವ ದೇವಾಲಯಕ್ಕೆ ಹೋಗಿ ಲಕ್ಷ ದೀಪೋತ್ಸವವನ್ನು ಆಚರಿಸೋಣ ಎಂದು ಯೋಚಿಸುತ್ತಾರೆ ಹೊರೆತು ಈ ಆಚರಣೆಯನ್ನು ಯಾಕೆ ಮಾಡುತ್ತಾರೆ, ಇದನ್ನು ಯಾರು ಆರಂಭಿಸಿದರು ಮತ್ತು ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಲಕ್ಷ ದೀಪೋತ್ಸವ ನಡೆದಿದ್ದು ಯಾವ ದೇವಾಲಯದಲ್ಲಿ ಎಂದು ಯಾರಿಗೂ ತಿಳಿದಿಲ್ಲ. ಕೇವಲ ನಾನೂರ ಹತ್ತು (410) ವರ್ಷಗಳ ಇತಿಹಾಸ ಇರುವ ಈ ಆಚರಣೆಗೆ ಮತ್ತು ಮಲೆನಾಡಿನ ಶಿವಮೊಗ್ಗಕ್ಕೂ ಅವಿನಾಭಾವ ಸಂಬಂಧ ಇದೆ ಏಕೆಂದರೆ ಈ ಆಚರಣೆ ಮೊಟ್ಟಮೊದಲ ಬಾರಿಗೆ ಪ್ರಾರಂಭವಾಗಿದ್ದು ಈ ಜಿಲ್ಲೆಯಲ್ಲೇ ಮತ್ತು ಇದಕ್ಕೆ ಕಾರಣಕರ್ತೃ ಸಹಾ ನಮ್ಮ ಶಿವಮೊಗ್ಗದವರೆ.

ದೀಪಾವಳಿಯ ನಂತರ ಕಾರ್ತಿಕ ಮಾಸವು (ನವೆಂಬರ್ – ಡಿಸೆಂಬರ್) ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ ಒಟ್ಟಾರೆ ಹೇಳಬೇಕು ಅಂದರೆ ಚಾಂದ್ರಮಾನದ ಎಂಟನೇ ಮಾಸದಲ್ಲಿ ಕಾರ್ತಿಕ ಎಂಬ ನಕ್ಷತ್ರ ಚಂದ್ರನಿಗೆ ಸಮೀಪಿಸುವ ಪರಿಣಾಮವಾಗಿ ಹುಣ್ಣಿಮೆಯ ಚಂದ್ರನು ಪ್ರಕಾಶಮಾನವಾಗಿ ಬೆಳಗುತ್ತಾನೆ. ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ ಅವುಗಳಲ್ಲಿ ಸೂರ್ಯ ದೇವನಿಗೆ ಪೂಜೆ, ಶಿವ ಹಾಗೂ ವಿಷ್ಣುವಿನ ಪೂಜೆ, ದೇವರ ಆರಾಧನೆಗಳು, ದಿನಕ್ಕೆ ಮೂರು ಹೊತ್ತು ಸ್ನಾನ ಮತ್ತು ಮನೆ ಹಾಗೂ ದೇವಾಲಯಗಳಲ್ಲಿ ದೀಪವನ್ನು ಬೆಳಗಿಸುವುದು ಪ್ರಮುಖವಾಗಿದೆ.
ನಮ್ಮ ಮಲೆನಾಡು ಮತ್ತು ಕರಾವಳಿಯಲ್ಲಿ ಆಚರಿಸುವ ಎಲ್ಲಾ ಹಬ್ಬ ಮತ್ತು ಆಚರಣೆಗಳು ನೇರವಾಗಿ ಸಹ್ಯಾದ್ರಿ ಶ್ರೇಣಿ ಅಥವಾ ಪಶ್ಚಿಮ ಘಟ್ಟದ ಪರಿಸರಕ್ಕೆ ಪೂರಕವಾಗಿದ್ದು ಇದಕ್ಕೆ ವೈಜ್ಞಾನಿಕ ನೆಲೆಗಟ್ಟಿನಲ್ಲೂ ಸಾಬೀತು ಪಡಿಸ ಬಹುದು. ಆದರೆ ಹದಿನೇಳನೆಯ ಶತಮಾನದ ಆದಿಯಲ್ಲಿ ಅಂದರೆ 1610ರ ಆಸುಪಾಸಿನಲ್ಲಿ ಮಲೆನಾಡು ಮತ್ತು ಕರಾವಳಿಯ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಹಚ್ಚುತ್ತಿದ್ದ ದೀಪಗಳು ಹೇಗೆ ಹೊಸ ರೂಪವನ್ನು ಪಡೆದು “ಲಕ್ಷ ದೀಪಾರಾಧನೆ” ಅಥವಾ “ಲಕ್ಷ ದೀಪೋತ್ಸವ” ಎಂಬ ಆಚರಣೆಗೆ ನಾಂದಿ ಹಾಡಿತು ಎನ್ನುವುದೇ ರೋಚಕವಾದ ವಿಷಯ.
1610 ರಲ್ಲಿ ನಮ್ಮ ಮಲೆನಾಡು ಮತ್ತು ಕರಾವಳಿಯಲ್ಲಿ ವರ್ಷದ ನಾಲ್ಕರಿಂದ ಆರು ತಿಂಗಳುಗಳ ಕಾಲ ಮಳೆಯದೇ ಆರ್ಭಟ ಆಗಿತ್ತು. ಇನ್ನೂ ದೀಪಾವಳಿಯ ಹಬ್ಬದ ಜೊತೆಗೆ ಪ್ರಾರಂಭವಾಗುವಾ ಕಾರ್ತಿಕ ಮಾಸ ಪಶ್ಚಿಮ ಘಟ್ಟದ ಮಲೆನಾಡಿನ ಚಳಿಗಾಲದ ಪ್ರಾರಂಭಕ್ಕೆ ಸೂಚಕ. ಅಂದಿನ ಕಾಲದಲ್ಲಿ ದಿನದ ಇಪ್ಪತ್ತು ನಾಲ್ಕು ಗಂಟೆಗಳು ಸಹಾ ಚಳಿ ಇರುತ್ತಿತ್ತು ಹಾಗಾಗಿ ಸ್ವಾಭಾವಿಕವಾಗಿ ಈ ಪಶ್ಚಿಮ ಘಟ್ಟದ ಮೇಲೆ ಮತ್ತು ಕೆಳಗೆ ವಾಸಿಸುವ ಜನರಿಗೆ ಅತಿಯಾದ ಚಳಿಯಿಂದ ಚರ್ಮ ಸಂಬಂಧಿತ ಕಾಯಿಲೆ ಆವರಿಸುತ್ತಿತ್ತು. ಇನ್ನೂ ಈ ಚಳಿಗಾಲದ ಚರ್ಮ ಸಮಸ್ಯೆಯನ್ನು ನಿವಾರಣೆ ಮಾಡಲು ನಮ್ಮ ಪೂರ್ವಜರು ಪ್ರಾರಂಭಿಸಿದ ದೀಪಾವಳಿ ಹಬ್ಬದ ಪ್ರಯುಕ್ತ ಮಾಡುವ ಅಭ್ಯಂಗ ಸ್ನಾನವೇ ಸರ್ವಶ್ರೇಷ್ಠ ಮದ್ದು. ಇನ್ನೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಮಲೆನಾಡಿನ ಎಲ್ಲಾ ಮನೆಗಳಲ್ಲಿ ಹಂಡೆಯನ್ನು ಹುಣಸೆ ಹಣ್ಣಿನಲ್ಲಿ ತೊಳೆದು ಅದಕ್ಕೆ ಹಿಂಡ್ಲಚ್ಚಿ ಕಾಯಿ, ಅರಿಶಿನ ಕುಂಕುಮ ಮತ್ತು ಸ್ಥಳೀಯ ಹೂವುಗಳಿಂದ ಅಲಂಕರಿಸಿ ನೀರು ತುಂಬುವ ಹಬ್ಬವನ್ನು ಆಚರಿಸಲಾಗುತ್ತದೆ. ಇದರ ಮಾರನೆ ದಿನ ಬೆಳಗ್ಗೆ ಹರಳೆಣ್ಣೆ ಮತ್ತು ಸೀಗೆಕಾಯಿ ಅನ್ನು ಉಪಯೋಗಿಸಿ ಮಾಡುವ ಅಭ್ಯಂಗ ಅಥವಾ ತೈಲಾಭ್ಯಂಜನ ಕೇವಲ ಆಚರಣೆ ಆಗದೆ ಇದೊಂದು ಆಯುರ್ವೇದ ಚಿಕಿತ್ಸಾ ಪದ್ಧತಿಯಾಗಿದೆ. ಅಭ್ಯಂಗ ಸ್ನಾನದ ಪರಿಣಾಮವಾಗಿ ಮಲೆನಾಡಿನ ಜನರು ಚಳಿಗಾಲದ ಚಳಿಯಿಂದ ತಮ್ಮ ಚರ್ಮವನ್ನು ರಕ್ಷಿಸಿ ಕೊಳ್ಳುತ್ತಾರೆ. ಅದೇ ರೀತಿ ಚಳಿಗಾಲದಲ್ಲಿ ತಾಗಬಹುದಾದ ಕಾಯಿಲೆಗಳಿಂದ ದೂರ ಮಾಡಲು ಋಷಿಗಳು ಕಾರ್ತಿಕ ಮಾಸದಲ್ಲಿ ಪವಿತ್ರ ಸಸ್ಯಗಳಾದ ತುಳಸಿ ಮತ್ತು ಆಲದ ಮರಗಳನ್ನು ಪೂಜಿಸಲು ಸೂಚಿಸಿದರು. ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಈ ಸಸ್ಯದಿಂದ ಬೀಸುವ ಗಾಳಿಗಳು ಎಲ್ಲಾ ಬಗೆಯ ವಿಷಕಾರಿ ರಾಸಾಯನಿಕ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಮತ್ತು ಈ ಗಿಡ ಮತ್ತು ಮರದ ಗಾಳಿ ಹಾಗೂ ಔಷಧೀಯ ಗುಣಗಳಿಂದ ವ್ಯಕ್ತಿಗೆ ಬರುವ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು.

ಇನ್ನೂ ಮಲೆನಾಡಿನ ಚಳಿಗಾಲದಲ್ಲಿ ಜನರು ನಿದ್ರೆಗೆ ಜಾರ ಬಾರದು ಮತ್ತು ಸೋಮಾರಿ ಆಗಬಾರದು ಎಂದು ನಮ್ಮ ಋಷಿಗಳು ಕಾರ್ತಿಕ ಮಾಸದಲ್ಲಿ ಮೂರು ಹೊತ್ತು ಪವಿತ್ರ ಸ್ನಾನ ಮಾಡಲು ಸೂಚಿಸಿರುತ್ತಾರೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು, ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿರುತ್ತದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡು ಶುದ್ಧವಾಗುತ್ತದೆ. ಇನ್ನೂ ಮಲೆನಾಡಿನ ಚಳಿಗಾಲದಲ್ಲಿ ಮೂರು ಬಾರಿ ಸ್ನಾನ ಮಾಡಿದ ನಂತರ ಮನೆಯ ಒಳಗೆ ಮತ್ತು ಹೊರಗೆ (ಅಂಗಳದಲ್ಲಿ) ಹಾಗೂ ದೇವಾಲಯಗಳಲ್ಲಿ ದೀಪವನ್ನು ಬೆಳಗಿಸುವ ಸಂಪ್ರದಾಯ ಇರುತ್ತದೆ. ಶಿವ ಮತ್ತು ವಿಷ್ಣು ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗಿ ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ದೀಪಗಳು ಜನರ ಪಾಲಿಗೆ ಚಳಿಯಿಂದ ಸಂರಕ್ಷಿಸುವ ಕವಚ ಆಗಿತ್ತು.
ಇನ್ನೂ ಇದು ಸಾಲದು ಎಂಬಂತೆ ನಮ್ಮ ಋಷಿಗಳು ಪವಿತ್ರ ಕಾರ್ತಿಕ ಮಾಸದಲ್ಲಿ ಜನರು ಚಳಿಯ ಬಗ್ಗೆ ಯೋಚಿಸದಿರಲು ಹಲವಾರು ಆಚರಣೆಗಳಿಗೆ ಮತ್ತು ಪೂಜೆಗಳಿಗೆ ಉಪದೇಶಿಸುತ್ತಾರೆ. ಕಾರ್ತಿಕ ಮಾಸವು ಸೂರ್ಯ ದೇವನಿಗೆ ಸಮರ್ಪಿತವಾದ ಮಾಸ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಸೂರ್ಯನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಚಳಿಗಾಲದ ಆರಂಭವನ್ನು ಸೂಚಿಸುವ ಈ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪವನ್ನು ಬೆಳಗುವುದರ ಮೂಲಕ ಸೂರ್ಯನಿಗೆ ನಮಸ್ಕರಿಸಲಾಗುತ್ತದೆ. ಈ ಮೇಲ್ಕಂಡ ಎಲ್ಲಾ ಆಚರಣೆಯಲ್ಲಿ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಈ ರೀತಿಯಲ್ಲಿ ದೀಪಾರಾಧನೆಗೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುವ ಈ ಕಾರ್ತಿಕ ಮಾಸದಲ್ಲಿ ಮೊಟ್ಟಮೊದಲ ಬಾರಿಗೆ “ಲಕ್ಷ ದೀಪಾರಾಧನೆಗೆ” ಚಾಲನೆ ಕೊಟ್ಟಿದ್ದು ನಮ್ಮ ಮಲೆನಾಡು ಮತ್ತು ಕರಾವಳಿಯನ್ನು ಆಳಿದ ಇಕ್ಕೇರಿ ಹಿರಿಯ ವೆಂಕಟಪ್ಪ ನಾಯಕರು ಮತ್ತು ಇದಕ್ಕೆ ಸಾಕ್ಷಿ ಆಗಿದ್ದು ಇಕ್ಕೇರಿ ನಾಯಕರ ಇಷ್ಟದ ದೇವತೆ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿ.
ಇಕ್ಕೇರಿ ಸಾಮ್ರಾಜ್ಯವನ್ನು ಪಶ್ಚಿಮ ಘಟ್ಟದ ಮೇಲಿಂದ ಘಟ್ಟದ ಕೆಳಗಿನ ವರೆಗೂ ವಿಸ್ತರಿಸಿದ ಕೀರ್ತಿ ಹಿರಿಯ ವೆಂಕಟಪ್ಪ ನಾಯಕರಿಗೆ (1586 – 1628) ಸಲ್ಲುತ್ತದೆ. 1610ರ ಹೊತ್ತಿಗೆ ಮಲೆನಾಡು ಮತ್ತು ಕರಾವಳಿಯನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡು ಅದರ ಪ್ರಶ್ನಾತೀತ ನಾಯಕನಾದ ಹಿರಿಯ ವೆಂಕಟಪ್ಪ ನಾಯಕ ಧಾರ್ಮಿಕ ಸಂಸ್ಥೆಗಳಾದ ದೇವಾಲಯಗಳು, ಮಠಗಳು, ಚೈತ್ಯಾಲಯಗಳು, ಬಸದಿಗಳು ಮತ್ತು ಮಸೀದಿಗಳಿಗೆ ಅಪಾರ ಪ್ರಮಾಣದಲ್ಲಿ ದಾನದತ್ತಿಯನ್ನು ನೀಡುತ್ತಾನೆ. ಹಿರಿಯ ವೆಂಕಟಪ್ಪ ನಾಯಕರ ರಾಜಧಾನಿ ಇಕ್ಕೇರಿಯ ಕೋಟೆಯ ಒಳಗೆ ಶಿಖರೇಶ್ವರ, ವಿಶ್ವೇಶರ, ಲಕ್ಷ್ಮೀ ನಾರಾಯಣ ಮತ್ತು ಮೈಲಾರ ದೇವಾಲಯಗಳನ್ನು, ಸದಾಶಿವಸಾಗರದಲ್ಲಿ (ಇಂದಿನ ಸಾಗರದಲ್ಲಿ) ಮಹಾಗಣಪತಿ ದೇವಾಲಯ, ಭುವನಗಿರಿದುರ್ಗ (ಇಂದಿನ ಕವಲೇದುರ್ಗ) ಕೋಟೆಯಲ್ಲಿ ಕಾಶಿ ವಿಶ್ವನಾಥ, ಶಿಖರೇಶ್ವರ ಮತ್ತು ಲಕ್ಷ್ಮೀ ನಾರಾಯಣ ದೇವಾಲಯಗಳನ್ನು, ಬಾಣಾವರದ ಗಣಪತಿ ದೇವಾಲಯ, ವರದಾ ನದಿಯ ತಟದಲ್ಲಿ ಶ್ರೀ ವಿಶ್ವೇಶ್ವರ ಮತ್ತು ಅದೇ ರೀತಿ ಆನಂದಪುರದ ಕೋಟೆಯಲ್ಲಿ ತಾಂಡವೇಶ್ವರ ಹಾಗೂ ರಂಗನಾಥ ಸ್ವಾಮಿ ದೇವಾಲಯಗಳನ್ನು ಪ್ರತಿಷ್ಠಾಪಿಸುತ್ತಾನೆ.

ಇನ್ನೂ ಕರಾವಳಿ ಮತ್ತು ಮಲೆನಾಡಿನ ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರ, ಮರಾಮತ್ತು ಮತ್ತು ವಿಸ್ತರಣೆ ಮಾಡುತ್ತಾನೆ. ಅದರಲ್ಲಿ ಪ್ರಮುಖವಾಗಿದ್ದು ಕೆಳದಿಯ ಶ್ರೀ ರಾಮೇಶ್ವರ, ಇಕ್ಕೇರಿಯ ಅಘೋರೇಶ್ವರ, ಕೊಲ್ಲೂರು ಮೂಕಾಂಬಿಕಾ, ಬಿದನೂರಿನ ನೀಲಕಂಠೇಶ್ವರ ಮತ್ತು ಬಸುರೂರಿನ ಮಹಾಲಿಂಗೇಶ್ವರ. ಇನ್ನೂ ಕಳಸದ ಭೈರಸ ಒಡೆಯ ನನ್ನು ಸೋಲಿಸಿ ಅವನಿಂದ ಹಾನಿಯಾಗಿದ್ದ ಶೃಂಗೇರಿ ದೇವಾಲಯ ಮತ್ತು ಮಠವನ್ನು ದುರಸ್ತಿ ಮಾಡಿ ಅಂದಿನ ಶೃಂಗೇರಿಯ ಜಗದ್ಗುರುಗಳಾಗಿದ್ದ ಶ್ರೀ ಅಭಿನವ ನಾರಸಿಂಹ ಭಾರತೀ (ಮೊದಲನೆಯ) ಅವರಿಗೆ ಗುರು ನಿವಾಸವನ್ನು ಕಟ್ಟಿಸಿ ಅವರಿಂದ “ವಿಶುದ್ದ ವೈದಿಕ್ ಅದ್ವೈತ ಸಿದ್ದಾಂತ ಪ್ರತಿಷ್ಠಾಪಕ” (Re establisher of Sringeri) ಎಂಬ ಬಿರುದನ್ನು ಪಡೆದು ಕೊಳ್ಳುತ್ತಾರೆ. ಇನ್ನೂ ಹಿರಿಯ ವೆಂಕಟಪ್ಪ ನಾಯಕರ ಪಟ್ಟದ ರಾಣಿ ಅಭಿನವ ವೀರಾಂಭ (ವೀರಮ್ಮ) ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನಕ್ಕೆ ಎರಡು ದ್ವಾರಪಾಲಕರ ಪಂಚಲೋಹದ ಮೂರ್ತಿಗಳನ್ನು ಶಿವರಾತ್ರಿಯ ಶುಭ ಸಂದರ್ಭದಲ್ಲಿ ದಾನ ನೀಡುತ್ತಾಳೆ. ಈ ಮೂರ್ತಿಗಳ ತೂಕ ಸರಿಸುಮಾರು 17 ಮೌಂಡ್ (Mound) 13 ಸೀರ್ (Seer) ಮತ್ತು 16 ಮೌಂಡ್ 5.375 ಸೀರ್ ಆಗಿತ್ತು. ಹಿರಿಯ ವೆಂಕಟಪ್ಪ ನಾಯಕರು ಪವಿತ್ರ ಕಾರ್ತಿಕ ಮಾಸದಲ್ಲಿ ಮನೆ ಮತ್ತು ದೇವಾಲಯಗಳಲ್ಲಿ ಹಚ್ಚುವ ದೀಪಗಳಿಂದ ಪ್ರಭಾವಿತರಾಗಿ ಯಾಕೆ ಇದನ್ನು ದೊಡ್ಡ ಮಟ್ಟದಲ್ಲಿ ಆಚರಿಸ ಬಾರದು ಎಂದು ಯೋಚಿಸಿದ ಫಲಶೃತಿಯೇ “ಲಕ್ಷ ದೀಪಾರಾಧನೆಯ” ಆಚರಣೆಗೆ ನಾಂದಿಯಾಯಿತು.
ಪ್ರಪ್ರಥಮ ಬಾರಿಗೆ ಇದನ್ನು ಇಕ್ಕೇರಿ ನಾಯಕರ ಇಷ್ಟ ದೇವತೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತದನಂತರ ಹಿರಿಯ ವೆಂಕಟಪ್ಪ ನಾಯಕರು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅವರ ರಾಜ್ಯದ ಮಲೆನಾಡು ಮತ್ತು ಕರಾವಳಿಯಲ್ಲಿ ಇರುವ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ, ಮಠಗಳಲ್ಲಿ ಮತ್ತು ಬಸದಿಗಳಲ್ಲಿ ಲಕ್ಷ ದೀಪೋತ್ಸವವನ್ನು ಆಚರಿಸಲು ನಿರ್ದೇಶಿಸುತ್ತಾರೆ ಮತ್ತು ಇದನ್ನು ನಡೆಸಲು ರಾಜ್ಯದ ಬೊಕ್ಕಸದಿಂದ ಧನ ಸಹಾಯ ಮತ್ತು ದತ್ತಿಯನ್ನು ಸಹಾ ನೀಡುತ್ತಾರೆ. 1610ರಲ್ಲಿ ಇಕ್ಕೇರಿಯ ವೆಂಕಟಪ್ಪ ನಾಯಕರು ಪ್ರಾರಂಭಿಸಿದ ಲಕ್ಷ ದೀಪೋತ್ಸವ ಇಂದು ರಾಜ್ಯದ ಎಲ್ಲಾ ಕಡೆ ಪಸರಿಸಿದೆ ಆದರೆ ಇಂದು ಈ ಆಚರಣೆಗೆ ಮೂಲ ಕಾರಣ ಕರ್ತೃ ಆಗಿರುವ ಹಿರಿಯ ವೆಂಕಟಪ್ಪ ನಾಯಕರನ್ನು ನಾವೆಲ್ಲರೂ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ.

ಪವಿತ್ರ ಕಾರ್ತಿಕ ಮಾಸದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಒಂದು ಹೊಸ ಪರಂಪರೆಯನ್ನು ಶುರುಮಾಡಿದ ಹಿರಿಯ ವೆಂಕಟಪ್ಪ ನಾಯಕ 46 ವರ್ಷ 11 ತಿಂಗಳು ಮತ್ತು 26 ದಿನಗಳ ಕಾಲ ಆಳ್ವಿಕೆ ಮಾಡಿ ಕಾರ್ತಿಕ ಬಹುಳ ಶುದ್ಧ ಸಂವತ್ಸರದಂದು (1628) ಶಿವೈಕ್ಯ ಆಗುತ್ತಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದ ಕೊಲ್ಲೂರು ಇಂದು ರಾಜಕೀಯ ಲೆಕ್ಕಾಚಾರದಲ್ಲಿ ಉಡುಪಿ ಜಿಲ್ಲೆಗೆ ಸೇರಿದೆ. Saakshatv Naavu kelada charitre episode8
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1329830459920957440?s=19
https://twitter.com/SaakshaTv/status/1329830879460352001?s=19








