ಋಣಾನುಬಂಧ Saakshatv story episode 1
ಎರಡು ಗಂಡು ಮಕ್ಕಳ ನಂತರ ಹುಟ್ಟಿದವಳೇ ಲಲಿತ . ಮೊದಲೇ ಹೆಣ್ಣು ಮಗು ಬೇಕೆನ್ನುವ ತುಳುವರ ಮನೆಯಲ್ಲಿ ಹೆಣ್ಣು ಹುಟ್ಟಿದರೆ, ಸಂಭ್ರಮವಾಗದೆ ಇರುವುದೇ. Saakshatv story episode 1
ಆದರೆ ಕುಂಡಲಿ ಬರೆದ ಜ್ಯೋತಿಷಿ ಹೇಳಿದ ಮಾತು, ಮನಸ್ಸಿಗೆ ಅಶಾಂತಿ ಉಂಟು ಮಾಡಿತು. ಈ ಜಾತಕದವರಿಗೆ ಎರಡು ಮದುವೆ ಆಗುವುದು, ಎಂದು ಹೇಳಿದ ಮಾತು ತಂದೆ ರಾಮಣ್ಣನಿಗೆ ಸ್ವಲ್ಪ ದುಃಖ ಉಂಟು ಮಾಡಿತು. ಆದರೂ ಸಿರಿ ಸಂಪತ್ತು ತುಂಬಿದ ಮನೆಯಲ್ಲಿ ಸುಖವಾಗಿ ಬೆಳೆದು ದೊಡ್ಡವಳಾದಳು. ಈಗ ಮದುವೆಯ ಚಿಂತೆ, ಜಾತಕದಲ್ಲಿ ಬರೆದ ವಿಷಯವನ್ನು ಯಾರಿಗೂ ತಿಳಿಸದೇ, ಉತ್ತಮವಾದ ವರನನ್ನು ಹುಡುಕಲು ಪ್ರಾರಂಭಿಸಿದರು.
ವಧು ವರರ ಅನ್ವೇಷಣೆಯ ವೆಬ್ ಸೈಟ್ ನಲ್ಲೂ ಹುಡುಕಲು ಪ್ರಾರಂಭಿಸಿದರು. ಕಡೆಗೂ ಒಬ್ಬ ಹುಡುಗನ ಪ್ರೊಫೈಲ್ ಇವರಿಗೆ ಒಪ್ಪಿಗೆಯಾಯಿತು . ಕೇಂದ್ರ ಸರಕಾರದ ಹಣಕಾಸು ವಿಭಾಗದಲ್ಲಿ, ದೆಹಲಿಯಲ್ಲಿ ಕೆಲಸ. ಜ್ಯೋತಿಷಿಯ ಬಳಿ ಇಬ್ಬರ ಕುಂಡಲಿ ಹೊಂದಾಣಿಕೆ ಆಗುತ್ತದೆಯೇ ಎಂದು ಕೇಳಲು ಹೋದರು. ಅದೇ ಜ್ಯೋತಿಷಿ, ಎರಡೂ ಕುಂಡಲಿ ಉತ್ತಮವಾಗಿ ಹೊಂದಾಣಿಕೆ ಆಗಿದೆ , ನೂರಾರು ಕಾಲ ಸುಖವಾಗಿ ಬಾಳುತ್ತಾರೆ ಎಂದರು. ಆದರೆ ಮಗಳು ಮಾತ್ರಾ ನನ್ನೊಟ್ಟಿಗೆ ಕಲಿಯುತ್ತಿರುವ ರಮೇಶನನ್ನು ಮದುವೆಯಾಗುವುದಾಗಿ ಹಠ ಹಿಡಿದಳು .
ರಮೇಶ ಟ್ರಾಫಿಕ್ ಹವಾಲ್ದಾರನಾಗಿ ಸರಕಾರಿ ಕೆಲಸದಲ್ಲಿ ಇದ್ದನು.ಆದರೆ ರಾಮಣ್ಣ ಮಾತ್ರ ಮಗಳು ಲಲಿತಾಳ ಯಾವುದೇ ಮಾತಿಗೆ ಬೆಲೆ ಕೊಡದೆ, ದೆಹಲಿಯವನೊಟ್ಟಿಗೆ ಮಾತುಕಥೆ ಮುಂದುವರಿಸಿದರು. ಹುಡುಗ ಹುಡುಗಿ ನೋಡಲು ದೆಹಲಿಗೆ ಬರಲು ಹೇಳಿದರು. ಇವರು ಊರಿಗೆ ಬನ್ನಿ ಎನ್ನುತ್ತಾ, ಕಡೆಗೆ ಬೆಂಗಳೂರಲ್ಲಿ ಹೆಣ್ಣು ನೋಡುವ ಶಾಸ್ತ್ರ ಇಡಲಾಯಿತು. ಫೈವ್ ಸ್ಟಾರ್ ಹೋಟೆಲ್ ನಲ್ಲಿ ನೋಡಿ ಒಪ್ಪಿಗೆಯೂ ಆಯಿತು. ಆದರೆ ಅವರು ಮದುವೆ ಮಾತ್ರ ದೆಹಲಿಯಲ್ಲೇ ಆಗಬೇಕೆಂದರು. ಕಡೆಗೂ ಮದುವೆ ಮಂಗಳೂರಿನಲ್ಲಿ, ರಿಸೆಪ್ಶನ್ ದೆಹಲಿಯಲ್ಲಿ ಒಂದು ವಾರದ ನಂತರ ಮಾಡುವುದೆಂದು ನಿರ್ಧರಿಸಲಾಯಿತು.
ಕೊರೋನಾದಿಂದಾಗಿ ಹೆಚ್ಚು ಮಂದಿ ನಾವು ಬರುವುದಿಲ್ಲ, ಕೇವಲ ಮದುವೆಗೆ ಹತ್ತು ಮಂದಿ ಮಾತ್ರ ಬರುತ್ತೇವೆ.ಮತ್ತು ಕಡಿಮೆಯೆಂದರೂ ನೂರು ತೊಲ ಚಿನ್ನ ಹಾಕಬೇಕೆಂದರು. ಎಲ್ಲವನ್ನು ಒಪ್ಪಿದ ರಾಮಣ್ಣ ಬಹಳಷ್ಟು ಖುಷಿಯಲ್ಲಿದ್ದರು . ಅವರಿಗಾಗಿ ಎರಡು ದಿನ ಮೊದಲೇ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಇಡಲಾಯಿತು. ರಮೇಶನೂ ಲಲಿತಾಳನ್ನು ತನಗೆ ಕೊಡಿ ಎಂದು ಎರಡು ಮೂರು ಸಾರಿ ಬಂದು ಕೇಳಿದ. ಆದರೆ ಲಲಿತಾಳ ತಂದೆ ತಿರಸ್ಕರಿಸಿ, ಅವನನ್ನು ಮದುವೆಗೆ ಕರೆಯಬಾರದೆಂದು ಮಗಳಿಗೆ ಒತ್ತಿ ಹೇಳಿದರು.
ಲಲಿತಾಳ ಮದುವೆ ಮಾಧವನೊಟ್ಟಿಗೆ ವಿಜೃಂಭಣೆಯಿಂದ ಜರುಗಿತು. ಲಲಿತಾಳ ಬಹಳಷ್ಟು ಗೆಳತಿಯರು ಫೇಸ್ಬುಕ್ ಮತ್ತು ಇತರ ಸಾಮಾಜಿಕ ತಾಣಗಳಲ್ಲಿ ಮದುವೆಯ ಲೈವ್ ಕೊಟ್ಟರು. ಒಬ್ಬಳೇ ಮಗಳ ಮದುವೆಗೆ ಕೋಟಿ ಕೋಟಿ ಬೆಲೆಯ ಚಿನ್ನ ಹಾಕಿದ್ದರು. ಮದುವೆ ಮುಗಿದ ನಂತರ ಮಗಳನ್ನು ಅವರೊಟ್ಟಿಗೆ ಕಳುಹಿಸಿದರೂ, ಮನಸ್ಸಲ್ಲಿ ಮಾತ್ರ ಅವಳ ಜಾತಕದ ಬಗ್ಗೆ ಚಿಂತೆ ಇತ್ತು. ಮರುದಿನ ಮಗಳು ಅವರೊಟ್ಟಿಗೆ ದೆಹಲಿಗೆ ಹೋಗುವವಳಿದ್ದಳು .ರಾತ್ರಿ ಹೋಟೆಲಿಗೆ ಹೋಗಿ ಮಗಳನ್ನು ನೋಡುವುದೆಂದು, ಮನೆಯವರಿಗೆ ಹೇಳುತ್ತಾ ಮನೆಗೆ ಹಿಂತಿರುಗಿದರು.
ರಮೇಶ ದುಃಖದಿಂದ ಫೇಸ್ಬುಕ್ ನಲ್ಲಿ ತನ್ನ ಪ್ರಿಯತಮೆಯ ಮದುವೆ ನೋಡುತ್ತಾ ಡ್ಯೂಟಿ ಮಾಡುತಿದ್ದ. ಪೊಲೀಸರು ನಾಕಾಬಂದಿ ಮಾಡಿದ್ದರು. ಎಲ್ಲ ಗಾಡಿಯನ್ನು ಸರಿಯಾಗಿ ಪರಿಶೀಲಿಸಿ ಬಿಡಬೇಕೆಂದು, ಮೇಲಿನ ಅಧಿಕಾರಿಗಳ ಆಜ್ಞೆಯಾಗಿತ್ತು. ಆಗ ಒಂದು ಹೊಸ ಕಾರ್ ವೇಗಾವಾಗಿ ಬಂತು. ಹಾಗೆ ಮುಂದೆ ಬಿಡುವವನಿದ್ದ. ಆದರೂ ಡ್ರೈವಿಂಗ್ ಲೈಸನ್ಸ್ ಪರಿಶೀಲಿಸಲು ಅವನ ಡ್ರೈವಿಂಗ್ ಲೈಸನ್ಸ್ ತೆಗೆದು ಕೊಂಡ.
ಅವನು ಅದರೊಟ್ಟಿಗೆ ಎರಡು ಸಾವಿರದ ನೋಟು ಕೊಟ್ಟು ಬೇಗ ಬಿಡಲು ಹೇಳಿದ. ಇವನಿಗಂತೂ ವಿಸ್ಮಯ. ಎಲ್ಲವೂ ಸರಿಯಾಗಿದ್ದರೂ , ಇವನೇಕೆ ಹಣ ಕೊಡುತ್ತಿದ್ದಾನೆ. ಸರಿಯಾಗಿ ಅವನ ಮುಖ ನೋಡಿದ, ಎಲ್ಲೊ ನೋಡಿದ ಹಾಗಿದೆಯಲ್ಲ ಎಂದು ನೆನಪು ಮಾಡುತ್ತಾ ಮೇಲಧಿಕಾರಿಗಳ ಬಳಿಗೆ ಅವನು ಕೊಟ್ಟ ಪೇಪರ್ ಕೊಂಡು ಹೋದ. ಆಗ ವಾಟ್ಸಾಪ್ ನಲ್ಲಿ ಮೆಸೇಜ್ ಬಂತು. ಲಲಿತಾಳ ಮದುವೆಯ ಫೋಟೋವನ್ನು ಗೆಳೆಯ ಕಳುಹಿಸಿದ್ದ. ಅವನು ಖುಷಿಯಲ್ಲಿ ಕಳುಹಿಸಿದ್ದ ಅಥವಾ ದುಃಖದಲ್ಲಿ ಕಳುಹಿಸಿದ್ದ ಎಂದು ಗೊತ್ತಾಗಲಿಲ್ಲ. ಲಲಿತಾಳ ಒಟ್ಟಿಗೆ ಇದ್ದವನ ಫೋಟೋ ನೋಡಿದವನಿಗೆ ಆಶ್ವರ್ಯ .. ಕೈಯಲ್ಲಿ ಇರುವ ಡ್ರೈವಿಂಗ್ ಲೈಸನ್ಸ್ ನ ಫೋಟೋ ಮತ್ತು ಫೋಟೋದಲ್ಲಿ ಇರುವ ವ್ಯಕ್ತಿ ಒಂದೇ ತೋರುತಿತ್ತು.
ಆದರೆ ಲೈಸೆನ್ಸ್ ನಲ್ಲಿ ಹೆಸರು ಪ್ರವೀಣ್ ಆಗಿತ್ತು. ಮೆಲ್ಲನೆ ಮೇಲಧಿಕಾರಿಗೆ ತಿಳಿಸಿದ. ಅವರು ನೋಡಿದರು, ಅವರಿಗೆ ಇವನ ಸಂಶಯ ಸರಿಯೆನಿಸಿತು. ಕೂಡಲೇ ಕಾರನ್ನು ಮುತ್ತಿ, ತಪಾಸಣೆ ಮಾಡಿದಾಗ , ಚಿನ್ನ ತುಂಬಿದ ಬ್ಯಾಗ್ ಸಿಕ್ಕಿತು. ಸರಿಯಾಗಿ ವಿಚಾರಣೆ ಮಾಡಿದಾಗ, ಅವರು ಲಲಿತಳಿಗೆ ಅಮಲು ಪದಾರ್ಥ ಕೊಟ್ಟು , ಚಿನ್ನವನ್ನು ಕದ್ದುಕೊಂಡು ಓಡಿ ಹೋಗುತಿದ್ದರು. ಈ ರೀತಿ ಮದುವೆಯಾಗಿ ಕಳ್ಳತನ ಮಾಡುವುದು ಇವರ ಕಸುಬಾಗಿತ್ತು. ಮೊದಲ ಬಾರಿ ಸಿಕ್ಕಿ ಬಿದ್ದಿದ್ದರು. ಆಗ ಮಾಧವ ಇವರ ಕಣ್ಣುತಪ್ಪಿಸಿ ಓಡತೊಡಗಿದ. ಎದುರಲ್ಲಿ ವೇಗವಾಗಿ ಬರುತ್ತಿದ್ದ ಲಾರಿಯ ಕೆಳಗಡೆ ಬಿದ್ದು ಸತ್ತ.
ರಮೇಶನಿಗೆ ಲಲಿತಾಳ ಚಿಂತೆ ಪ್ರಾರಂಭವಾಯಿತು. ಮೇಲಧಿಕಾರಿಗೆ ಹೇಳಿ, ಲಲಿತ ಇದ್ದ ಹೋಟೆಲಿಗೆ ಬೈಕ್ ನಲ್ಲಿ ವೇಗವಾಗಿ ಹೊರಟ. ಹೋಗುವ ಮೊದಲು ಲಲಿತಾಳ ತಂದೆಗೆ ವಿಷಯನ್ನು ತಿಳಿಸಿದ. ತಂದೆಯು ವೇಗವಾಗಿ ಕಾರನ್ನು ಓಡಿಸುತ್ತಾ ಹೋಟೆಲ್ ಗೆ ಬಂದರು. ವಿಷಯ ತಿಳಿದ ಹೋಟೆಲ್ ನವರು, ಕೋಣೆಯ ಬಾಗಿಲು ತೆರೆದರು. ರಮೇಶನು ಯಾರನ್ನು ಕೇಳದೆ ಲಲಿತಾಳನ್ನು ಎತ್ತಿಕೊಂಡು, ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಿದ. ತಂದೆ ರಾಮಣ್ಣಗೆ ಜಾತಕದ ನೆನಪಾಯಿತು.
ಹದಿನಾರು ದಿನದ ನಂತರ ಮಗಳ ಎರಡನೇ ಮದುವೆ ರಮೇಶನೊಟ್ಟಿಗೆ ಮಾಡಿದರು.
ರಾಜು ಶೆಟ್ಟಿ