ಮೇ 7 ರಂದು ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯ ನಂತರ, ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ “ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ – ಮಹಾತ್ಮ ಗಾಂಧಿ” ಎಂಬ ಸಂದೇಶವನ್ನು ಪ್ರಕಟಿಸಿತು. ಆದರೆ ಈ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಕ್ಕೆ ಗುರಿಯಾದ ನಂತರ Tweeter ಖಾತೆಯಿಂದ ತೆಗೆದುಹಾಕಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, “ಗಾಂಧೀಜಿಯ ಸಂದೇಶವನ್ನು ಹಾಕಿರುವುದು ತಪ್ಪಲ್ಲ ಆದರೆ, ಅದನ್ನು ಪ್ರಕಟಿಸಿದ ಸಮಯ ಸರಿಯಲ್ಲ,” ಎಂದು ಅಭಿಪ್ರಾಯಪಟ್ಟರು. ಅವರು ಮತ್ತೂ ಮುಂದೆ ಹೇಳಿದರು: “ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರದ ಯಾವುದೇ ಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಆಗಲೇ ಸ್ಪಷ್ಟಪಡಿಸಿದ್ದೆವು. ಸೇನೆಯು ಉಗ್ರರ ನೆಲೆಗಳನ್ನೇ ಗುರಿಯಾಗಿಸಿದೆ. ಈ ದಾಳಿಗೆ ಪಾಕಿಸ್ತಾನ ಪ್ರತಿದಾಳಿ ಮಾಡಿದರೂ ಭಾರತ ಸಿದ್ಧವಾಗಿದೆ.”
ಮಾಜಿ ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾತನಾಡುತ್ತಾ, “ಭಾರತ ಮಾತೆಯ ಸಿಂಧೂರ ಎಂಬ ಘೋಷವಾಕ್ಯವನ್ನು ಜಪಿಸುತ್ತಾ ನಾವು ಬೆಳೆದವರು. ಪ್ರಧಾನಿ ಮೋದಿ ಅವರು ಆಪರೇಷನ್ ಸಿಂಧೂರ ಮೂಲಕ ದೇಶದ ಭದ್ರತೆಗೆ ಬಲ ನೀಡಿದ್ದಾರೆ,” ಎಂದರು. ಅವರು ಮುಂದೆ, “ಸಿದ್ದರಾಮಯ್ಯ ಯುದ್ಧ ವಿರೋಧಿಸಿದರು. ಆದರೆ ಈಗ ಜನರು ತಿರುಗಿಬಿದ್ದ ನಂತರ ಅವರು ತಮ್ಮ ನಿಲುವು ಬದಲಿಸಿದ್ದಾರೆ,” ಎಂದು ಟೀಕಿಸಿದರು.
ಬಿಜೆಪಿ ನಾಯಕರು ಗಾಂಧೀಜಿಯ ಶಾಂತಿಯ ಪರಿಕಲ್ಪನೆ ಮಾತ್ರವಲ್ಲದೆ, ಭಗತ್ ಸಿಂಗ್, ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಮುಂತಾದ ಕ್ರಾಂತಿಕಾರರ ಪಾತ್ರವನ್ನೂ ಉಲ್ಲೇಖಿಸಿದರು. “ಯುದ್ಧದ ಬಳಿಕ ಶಾಂತಿ ಸ್ಥಾಪನೆಯಾಗುತ್ತದೆ; ಶಾಂತಿಯ ಹೆಸರಿನಲ್ಲಿ ಯುದ್ಧ ವಿರೋಧಿಸುವುದಿಲ್ಲ,” ಎಂದು ಹೇಳಿದರು.
ಇನ್ನೊಂದು ಕಡೆ, ಕಾಂಗ್ರೆಸ್ನ ಶಾಂತಿಯ ಸಂದೇಶವು ಸರಿಯಾದ ಸಂದರ್ಭದಲ್ಲಿ ಪ್ರಕಟವಾಗದೆ, ರಾಜಕೀಯ ಚರ್ಚೆಗೆ ಆಹಾರವಾಯಿತು. ಈ ಮೂಲಕ ದೇಶದ ಭದ್ರತೆಗಿಂತ ರಾಜಕೀಯ ಪರಸ್ಪರ ದೋಷಾರೋಪಣೆಗಳು ಹೆಚ್ಚು ಪ್ರಾಮುಖ್ಯತೆಯನ್ನ ಪಡೆದಂತಾಗಿದೆ.