ಮೇಕೆದಾಟು ಪಾದಯಾತ್ರೆ | ಡಿ.ಕೆ.ಶಿವಕುಮಾರ್ ಗೆ ಪ್ರಶ್ನೆಗಳ ಸುರಿಮಳೆಗೈದ ಬಿಜೆಪಿ
ಬೆಂಗಳೂರು : ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಇಂದು ಸ್ಥಗಿತಗೊಂಡಿದೆ. ಕೊರೊನಾ ಹೆಚ್ಚಳ ಮತ್ತು ಹೈಕೋರ್ಟ್ ತರಾಟೆಯಿಂದಾಗಿ ಕಾಂಗ್ರೆಸ್ ಪಾದಯಾತ್ರೆಯನ್ನು ನಿಲ್ಲಿಸಿದೆ. ಈ ಮಧ್ಯೆ ರಾಜ್ಯ ಬಿಜೆಪಿ ಘಟಕ, ಪಾದಯಾತ್ರೆಯ ಮುಂದಾಳತ್ವ ವಹಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಪ್ರಶ್ನೆಗಳ ಸುರಿಮಳೆ ಗೈದಿದೆ.
ಬಿಜೆಪಿ ಟ್ವಿಟ್ಟರ್ ನಲ್ಲಿ..
ಡಿಕೆಶಿಯವರೇ, ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿತ್ತು.ಆದರೂ ರಾಜ್ಯದ ಜನರ ಆರೋಗ್ಯವನ್ನು ಪಣಕ್ಕಿಟ್ಟು ಕೋವಿಡ್ ಜಾತ್ರೆ ನಡೆಸಿದಿರಿ.ಕೋವಿಡ್ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ?
ಕೋವಿಡ್ ಜಾತ್ರೆಯ ರೂವಾರಿ ಡಿ.ಕೆ.ಶಿವಕುಮಾರ್ ಅವರೇ, ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು? ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ? ಎಷ್ಟು ಜನರಲ್ಲಿ ಸೋಂಕು ತಗಲಿದೆ ಎಂಬ ಲೆಕ್ಕ ಕೊಡಿ? ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?
ಡಿಕೆಶಿ ಅವರೇ, ಇಂದು ನೀವು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೀರಿ. ಆದರೆ, ಕೋವಿಡ್ ಪರೀಕ್ಷೆ ಇನ್ನೂ ಏಕೆ ಮಾಡಿಸಿಕೊಂಡಿಲ್ಲ?ನಿಮ್ಮ ಸುತ್ತಮುತ್ತಲಿದ್ದವರಿಗೆಲ್ಲಾ ಕೋವಿಡ್ ದೃಢಪಟ್ಟಿದೆ, ಕೋವಿಡ್ ಸೋಂಕನ್ನು ಕಡೆಗಣಿಸಿ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ?
ಡಿಕೆಶಿ ಅವರೇ, ಪಾದಯಾತ್ರೆ ಹೆಸರಿನಲ್ಲಿ ನೀವು ಸೃಷ್ಟಿಸಿದ ಅವಾಂತರವಾದರೂ ಎಷ್ಟು?ಇದರಿಂದ ಸಾರ್ವಜನಿಕರಿಗಾದ ತೊಂದರೆಯ ಬಗ್ಗೆ ಕಲ್ಪಿಸಲು ಸಾಧ್ಯವೇ?ಪ್ರತಿಷ್ಠೆ ಮೆರೆಯುವುದಕ್ಕೆ ಶಾಲೆಗೆ ಭೇಟಿ ನೀಡಿದರಲ್ಲ, ಅಲ್ಲಿನ ವಿದ್ಯಾರ್ಥಿಗಳು ಈಗ ಕಾಂಗ್ರೆಸ್ ವೈರಸ್ ಭಯದಲ್ಲಿ ಬದುಕಬೇಕಲ್ಲವೇ ಎಂದು ಪ್ರಶ್ನಿಸಿದೆ.