ಬಿಡದಿ ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಯು ಈಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಎರಡನೇ ದಿನದ ಪಾದಯಾತ್ರೆಗೆ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಸಿರು ನಿಶಾನೆ ತೋರಿದರು. ಆದರೆ ಈ ಹೋರಾಟದ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಒಂದು ವಿಡಿಯೋ ತುಣುಕು ಮೈತ್ರಿ ಪಕ್ಷಗಳಿಗೆ ಭಾರಿ ಮುಜುಗರ ತಂದಿಟ್ಟಿದೆ.
ಸಚಿವ ಮಧು ಬಂಗಾರಪ್ಪ ಮತ್ತು ಬಿ ವೈ ವಿಜಯೇಂದ್ರ ಸಭೆಯೊಂದರ ಸ್ವಾಗತದ ವೇಳೆ ಪರಸ್ಪರ ಪಿಸುಮಾತಿನಲ್ಲಿ ತೊಡಗಿದ್ದರು. ಈ ವೇಳೆ ಮೈಕ್ ಆನ್ ಇರುವುದು ಅವರ ಗಮನಕ್ಕೆ ಬಂದಿರಲಿಲ್ಲ. ವಿಜಯೇಂದ್ರ ಅವರು ಆಡಿದ ಮಾತುಗಳು ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಲೇವಡಿ ಮಾಡುತ್ತಿದೆ.
ಪಾದಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಪಾಲ್ಗೊಂಡಿದ್ದರೂ ಸಹ, ವಿಜಯೇಂದ್ರ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದನ್ನು ಕಂಡು ಕೆಪಿಸಿಸಿ ಐಟಿ ಸೆಲ್ ತನ್ನ ಅಧಿಕೃತ ಖಾತೆಯಲ್ಲಿ ವಿಜಯೇಂದ್ರ ಎಲ್ಲಿದ್ದೀಯಪ್ಪಾ ಎಂದು ಪ್ರಶ್ನಿಸಿ ಕಾಲೆಳೆದಿದೆ. ನಿಖಿಲ್ ಕುಮಾರಸ್ವಾಮಿ ಅವರ ಸಾರಥ್ಯದ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಬೆಂಬಲ ನೀಡುತ್ತಿಲ್ಲವೇ ಅಥವಾ ಮೈತ್ರಿಯಲ್ಲಿ ಬಿರುಕು ಮೂಡಿದೆಯೇ ಎಂಬ ಚರ್ಚೆಗಳು ಶುರುವಾಗಿವೆ.
ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸಿರುವ ಆರ್ ಅಶೋಕ ಅವರ ಬಗ್ಗೆಯೂ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಶೋಕ ಅವರು ಮನಸ್ಸಿಲ್ಲದ ಮನಸ್ಸಿನಿಂದ ಸಪ್ಪೆ ಮೋರಿ ಹಾಕಿಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ. ಕುಮಾರಣ್ಣ ಕುಟುಂಬದ ಸ್ವಾರ್ಥಕ್ಕಾಗಿ ನಡೆಯುತ್ತಿರುವ ಈ ಪಾದಯಾತ್ರೆಯ ಅಸಲಿ ಬಣ್ಣ ಬಯಲಾಗಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಟೀಕಿಸಿದೆ. ಬಿಡದಿ ಪಾದಯಾತ್ರೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೈಪಡೆ, ಮೈತ್ರಿ ಪಕ್ಷಗಳ ಕಾಲೆಳೆಯುವ ಮೂಲಕ ರಾಜಕೀಯ ಅಖಾಡದಲ್ಲಿ ಧೂಳೆಬ್ಬಿಸಿದೆ.








