ಮುಸ್ಕಾನ್ಗೆ ಆಲ್ ಖೈದಾ ಬೆಂಬಲ ನೀಡಿರುವುದು ಖಂಡನೀಯ : ಅಶ್ವತ್ಥ್ ನಾರಾಯಣ
ಮಂಡ್ಯ: ಹಿಜಾಬ್ ವಿವಾದ ಭುಗಿಲೆದ್ದಾಗ, ಜೈ ಶ್ರೀರಾಮ ಘೋಷಣೆ ಹಾಕಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ಗೆ ಆಲ್ ಖೈದಾ ಬೆಂಬಲ ನೀಡಿರುವುದು ನಿಜಕ್ಕೂ ಖಂಡನೀಯ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಮಾತಾಡಿದ ಅವರು ಭಯೋತ್ಪಾದಕ ಸಂಘಟನೆಗಳ ಜೊತೆ ಕೈಜೋಡಿದಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭಯೋತ್ಪಾದಕ ಸಂಘಟನೆಗಳು ದೇಶಕ್ಕೆ ಮಾರಕ. ಈ ಸಂಘಟನೆಗಳ ಜೊತೆ ಯಾರೂ ಕೈ ಜೋಡಿಸಬಾರದು. ಸರ್ಕಾರ ಇಂತಹ ನಿಷೇಧಿತ ಸಂಘಟನೆಗಳ ವಿರುದ್ಧ ಮತ್ತು ಈ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
ಇನ್ನೂ ಈ ಸಂಬಂಧ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡುತ್ತೇವೆ, ಕಾನೂನಿನಲ್ಲಿ ಇಲ್ಲದಿರೋದನ್ನ ಮಾಡಲು ಹೋಗುವುದಿಲ್ಲ ಎಂದರು
ಅಲ್ಲದೇ ಪ್ರತಿಯೊಬ್ಬರು ದೇಶದ ಕಾನೂನುಗಳನ್ನ ಗೌರವಿಸಬೇಕು. ಆಜಾನ್, ಹಿಜಾಬ್ ವಿಚಾರಕ್ಕೆ ಸಂಬಂಧಿದಂತೆ ಸಮಾಜದಲ್ಲಿ ಯಾರೂ ಶಾಂತಿ ಕದಡುವ ಕೆಲಸ ಮಾಡಬೇಡಿ, ನಮ್ಮ ನಾಡು ಸೌಹಾರ್ದತೆಯಿಂದ ಕೂಡಿದೆ. ಇದಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.