ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕೆಗಳ ಸುರಿಮಳೆಗೈಯುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಕಟುವಾಗಿ ಪ್ರಶ್ನಿಸಿದ್ದು, ಅವರನ್ನು ಓರ್ವ ಅಸಮರ್ಥ ನಾಯಕ ಎಂದು ಜರಿದಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತ ವೈಖರಿಯ ಬಗ್ಗೆ ಬಿಜೆಪಿ ನಾಯಕರು ಅತಾರ್ಕಿಕ ಟೀಕೆಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರದ ವೈಫಲ್ಯಗಳನ್ನು ಒಂದೊಂದಾಗಿ ಹೇಳುವ ಮೂಲಕ ಅಮಿತ್ ಶಾ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ.
ದೇಶದ ಭದ್ರತೆಯ ಹೊಣೆ ಹೊತ್ತಿರುವ ಗೃಹ ಸಚಿವರಾಗಿ ಅಮಿತ್ ಶಾ ಅವರು ಬಾಂಗ್ಲಾ ವಲಸಿಗರು ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ಅಕ್ರಮ ಒಳನುಸುಳುವಿಕೆ ನಡೆಯುತ್ತಿರುವುದು ಕೇಂದ್ರ ಗೃಹ ಸಚಿವಾಲಯದ ನೇರ ವೈಫಲ್ಯವಲ್ಲವೇ? ದೇಶದ ಗಡಿಗಳನ್ನು ಸುಭದ್ರವಾಗಿಡಲು ಸಾಧ್ಯವಾಗದವರನ್ನು ಸಮರ್ಥರು ಎಂದು ಕರೆಯಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಟೀಕಿಸಿರುವ ಖರ್ಗೆ, ದೆಹಲಿಯ ಕೆಂಪುಕೋಟೆಯ ಸ್ಫೋಟದ ಘಟನೆಗಳು, ಪಹಲ್ಗಾಮ್ ಮೇಲಿನ ದಾಳಿ ಮತ್ತು ಮಣಿಪುರದಲ್ಲಿ ನಡೆದ ಭೀಕರ ದಂಗೆಗಳ ಸಂದರ್ಭದಲ್ಲಿ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು ಎಂದು ಖಾರವಾಗಿ ಕೇಳಿದ್ದಾರೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದಂತಹ ಅಮಾನವೀಯ ಘಟನೆಗಳು ನಡೆದಾಗ ದೇಶದ ಘನತೆಯನ್ನು ರಕ್ಷಿಸಲು ಆಗದ ಗೃಹ ಸಚಿವರನ್ನು ಅಸಮರ್ಥರು ಎಂದು ಕರೆಯದೆ ಇನ್ನೇನು ಹೇಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಉರುಳಿಸುವುದೇ ಇವರ ಪರಾಕ್ರಮವೇ?
ಅಮಿತ್ ಶಾ ಅವರನ್ನು ಬಿಜೆಪಿಗರು ಚಾಣಾಕ್ಷ, ಜಗದೇಕ ವೀರ ಎಂದು ಕೊಂಡಾಡುತ್ತಾರೆ. ಆದರೆ, ಅವರ ನಿಜವಾದ ಸಾಮರ್ಥ್ಯ ಮತ್ತು ಪರಾಕ್ರಮ ಬಳಕೆಯಾಗುತ್ತಿರುವುದು ಕೇವಲ ಬಿಜೆಪಿ ಹೊರಗಿನ ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವುದರಲ್ಲಿ ಮಾತ್ರ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಶಾಸಕರನ್ನು ಖರೀದಿಸಿ ಸರ್ಕಾರ ಕೆಡವವ ಕುತಂತ್ರವನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ಅನಿವಾರ್ಯತೆ
ರಾಜ್ಯದ ಬಿಜೆಪಿ ನಾಯಕರು ಅಮಿತ್ ಶಾ ಅವರನ್ನು ಅತಿಯಾಗಿ ಹೊಗಳಲು ಪ್ರಮುಖ ಕಾರಣವೆಂದರೆ ಅವರ ಸ್ವಾರ್ಥ ಎಂದು ಖರ್ಗೆ ವಿಶ್ಲೇಷಿಸಿದ್ದಾರೆ. ತಮ್ಮ ಪ್ರಚಾರ, ಪ್ರಮೋಷನ್ ಮತ್ತು ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯ ನಾಯಕರಿಗೆ ಅಮಿತ್ ಶಾ ಅವರ ವೈಫಲ್ಯಗಳನ್ನು ಮುಚ್ಚಿಹಾಕಿ ಅವರನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.








