ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಶಾಂತ್ ನಗರದ ಕಾವೇರಿಪುರ ವಾರ್ಡ್ ನಂಬರ್ 103 ರಲ್ಲಿ ನಿರ್ಮಿಸಲಾಗಿರುವ ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಗ್ರಂಥಾಲಯ ಕಟ್ಟಡವನ್ನು ವಸತಿ ಸಚಿವ ವಿ.ಸೋಮಣ್ಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಸ್ಮರಣೆ ಮಾಡಿದರು. ಪೇಜಾವರ ಶ್ರೀಗಳು ಈ ನಾಡು ಕಂಡ ಮಹಾನ್ ತಪಸ್ವಿಗಳು. ಅಂತಹ ಒಬ್ಬ ಪೂಣ್ಯಾತ್ಮನ ಹೆಸರನ್ನು ಈ ಕಟ್ಟಡಕ್ಕೆ ಇಡಲಾಗಿದೆ. ನನ್ನ ಸಂಸ್ಕಾರಕ್ಕೆ ಮೂಲ ಕಾರಣಕರ್ತರು ಪೇಜಾವರ ಶ್ರೀಗಳು. ಸಿದ್ದಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ನನ್ನ ಪ್ರೇರಣ ಶಕ್ತಿ. ಇಲ್ಲಿ ಓದುವ ಎಲ್ಲ ಮಕ್ಕಳು ಕೂಡ ಸಾಮರಸ್ಯದ ಜೀವನದ ಜೊತೆಗೆ ಜ್ಞಾನಾರ್ಜನೆಯನ್ನು ಪಡೆದು ಐಎಎಸ್, ಐಎಫ್ ಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ರಾಷ್ಟ್ರಕ್ಕೆ ಅಳಿಲು ಸೇವೆಯನ್ನ ಮಾಡಲಿ ಎಂದು ಆಶಿಸಿದರು.
ಇದೇ ವೇಳೆ ದಿವಂಗತ ಮಾಜಿ ಉಪ ಮೇಯರ್ ರಮೀಳಾ ಉಮಾಶಂಕರ್ ಹೆಸರನ್ನು ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ಇಡಲಾಗಿದೆ. ಸಂಜೆ ಪ್ರಶಾಂತ್ ನಗರದ ಮುಖ್ಯ ರಸ್ತೆಗೆ ರಮೀಳಾ ಉಮಾಶಂಕರ್ ಅವರ ಹೆಸರನ್ನು ಇಡುತ್ತಿರುವುದಾಗಿ ತಿಳಿಸಿದರು.
ಬುದ್ಧಿಜೀವಿಗಳು ಮತಗಟ್ಟೆಗಳಿಗೆ ಹೋಗಿ ಮತಚಲಾಯಿಸಿದಿಲ್ಲವೋ ಅಲ್ಲಿಯವರೆಗೂ ಬುದ್ಧಿವಂತರು ಚುನಾಯಿತರಾಗುವುದಿಲ್ಲ. ಕಳೆದ ಬಾರಿ ನೀವು ನನ್ನ ಬೆಂಬಲಿಸಿದ್ದಕ್ಕೆ ನಾನು ಮತ್ತೆ ನಿಮ್ಮ ಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿ ಹೈಟೆನ್ಷನ್ ವೈರ್ ತೆಗೆಸುವ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಕೋವಿಡ್ ಬಂದು ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದೆ. ನಾನು ಇಡೀ ರಾಜ್ಯ ಸುತ್ತಾಡಿದ್ದೇನೆ, ಪೂಣ್ಯಾತ್ಮರ ಆರ್ಶೀವಾದದಿಂದ ಇನ್ನೂ ಲವಲವಿಕೆಯಿಂದ ಓಡಾಡುತ್ತಿದ್ದೇನೆ. ಕೋವಿಡ್ ಯನ್ನು ಎದುರಿಸಲು ಮನಸ್ಸು ಗಟ್ಟಿಗೊಳಿಸಬೇಕು. ಗಟ್ಟಿ ಮನಸ್ಸಿನಿಂದ ಕೋವಿಡ್ ಸಂಕಷ್ಟವನ್ನು ಎದುರಿಸಬೇಕು ಎಂದು ಜನರಿಗೆ ಕರೆಕೊಟ್ಟರು.
ಹತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಎರಡು ವರ್ಷಗಳಲ್ಲಿ ಮಾಡಿದ್ದೇವೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಉಚಿತವಾಗಿ ಜಮೀನಿನ ಹಕ್ಕನ್ನು ನೀಡಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ದಿವ್ಯಾಂಗಚೇತನರಿಗೆ ಸಚಿವರು ಉಚಿತ ಬೈಸಿಕಲ್ ಗಳನ್ನು ವಿತರಿಸಿದರು.
ಇದಕ್ಕೂ ಮುನ್ನ ವಸತಿ ಸಚಿವರು, ಇದೇ ವಾರ್ಡಿನಲ್ಲಿ ಉಪಮೇಯರ್ ರಮೀಳಾ ಉಮಾಶಂಕರ್ ಸ್ಮಾರಕ ಬಿಬಿಎಂಪಿ ಹೆರಿಗೆ ಆಸ್ಪತ್ರೆಯನ್ನು ಉದ್ಘಾಟಿಸಿ, ಎಸ್ ಡ ಬ್ಲ್ಯೂಡಿ ವರ್ಕ್, ರಾಜೀವ್ ಗಾಂಧಿ ಸ್ಲಮ್ ಅಭಿವೃದ್ಧಿ ಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಾವೇರಿ ಪುರ ವಾರ್ಡ್ ಬಾಳಯ್ಯನ ಕೆರೆ ಜಿಮ್ ಕಟ್ಟಡ ಹೊರಾಂಗಣ ಜಿಮನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಆರ್ ದೇವೇಗೌಡರು. ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೀಶ್ ಸೇರಿದಂತೆ ಮುಂತಾದವರು ಇದ್ದರು.