V. Somanna | ಸಿದ್ದರಾಮಯ್ಯನವರೇ,ವಾಸ್ತವಾಂಶ ತಿಳಿಯದೆ ಮಾತನಾಡಿದ್ದೀರಿ
ಬೆಂಗಳೂರು : ಸಿದ್ದರಾಮಯ್ಯನವರೇ,ವಾಸ್ತವಾಂಶ ತಿಳಿಯದೆ ಮಾತನಾಡಿದ್ದೀರಿ, ನಿಮ್ಮ ಮಾತುಗಳು ನನಗೆ ಬಹಳಷ್ಟು ಬೇಸರ ತರಿಸಿದೆ ಎಂದು ಸಚಿವ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ನಿನ್ನೆ ನನ್ನ ಕ್ಷೇತ್ರಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ನಾವು ಒಂದು ಲಕ್ಷ ಮನೆಗಳನ್ನ ಬೆಂಗಳೂರಿಗೆ ಸ್ಯಾಂಕ್ಷನ್ ಮಾಡಿದ್ದೋ. ನಮ್ಮ ಕೃಷ್ಣಪ್ಪ ಹಗರಣ ಇಲ್ಲದೆ ಮಾಡಿದ್ದ, ಇವನ್ಯಾರೋ ಸೋಮಣ್ಣ ಬಂದು ಹಾಳು ಮಾಡಿದ್ದಾನೆ ಅಂತ ಏಕವಚನ ಪದಪ್ರಯೋಗ ಮಾಡಿದ್ದಾರೆ. ನೀವು ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯನವರೇ,ವಾಸ್ತವಾಂಶ ತಿಳಿಯದೆ ಮಾತನಾಡಿದ್ದೀರಿ, ನಿಮ್ಮ ಮಾತುಗಳು ನನಗೆ ಬಹಳಷ್ಟು ಬೇಸರ ತರಿಸಿದೆ ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾಕೃಷ್ಣಾ ಪೂರ್ವಾಪರ ಏನು ಅನ್ನೋದು ಎಲ್ಲರಿಗೂ ಗೊತ್ತು. ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕಬಳಿಸಿದ ಮಾಜಿ ವಸತಿ ಮಂತ್ರಿ ವಿರುದ್ಧ ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶವಾಗಿದೆ. ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಅದನ್ನ ಹಂಚೋ ಕೆಲಸ ಮಾಡಿದ್ರು. ಇವರ ಕಾಲದಲ್ಲಿ ಆದ ಹಗರಣ ಅದು. ನಾನು ಯಾವುದು ಕ್ಯಾನ್ಸಲ್ ಮಾಡಿದ್ದೇನೆ ತೋರಿಸಲಿ, ಒಂದೇ ಒಂದು ಮನೆ ಕೂಡ ಕಟ್ಟಿಲ್ಲ. ಅವರ ಜೊತೆ ನೀವು ಕೂತು ಮಾತನಾಡೋದು ಎಷ್ಟರ ಮಟ್ಟಿಗೆ ಸರಿ ಅಂತ ಸಚಿವರು ಪ್ರಶ್ನಿಸಿದರು.

2017ರಲ್ಲಿ ಬೆಂಗಳೂರು ನಗರದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಸಿದ್ದರಾಮಯ್ಯನವರ ಸರ್ಕಾರ ಘೋಷಿಸಿತ್ತು. 2018-19ನೇ ಸಾಲಿನಲ್ಲಿ 46,499 ಮನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, 28,754 ಮನೆಗಳಿಗೆ ಎಲ್.ಒ.ಎ ನೀಡಿದ್ದು, ಗುತ್ತಿಗೆದಾರರೊಂದಿಗೆ ಕರಾರು ಮಾಡಿಕೊಳ್ಳಲಾಗಿತ್ತು. 1070 ಎಕರೆ ಜಮೀನು ನೀಡಲಾಗಿದೆ ಅಂತಾರೆ ಆದರೆ 1014 ಎಕರೆ ಕಾಗದದಲ್ಲಿ ಮಂಜೂರಾಗಿದ್ದು ಬಿಟ್ಟರೆ ಯಾವುದೇ ಜಮೀನು ವಾಸಕ್ಕೆ ಯೋಗ್ಯವಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 553 ಎಕರೆ ಜಮೀನನ್ನು ವಶಕ್ಕೆ ಪಡೆದು, 168 ಎಕರೆ ಹೆಚ್ಚುವರಿ ಜಮೀನನ್ನು ಮಂಜೂರು ಮಾಡಲಾಗಿದ್ದು,
493 ಎಕರೆ ಜಮೀನನ್ನು ಗುತ್ತಿಗೆದಾರರಿಗೆ ಹಸ್ತಾಂತರ ಮಾಡಲಾಗಿದ್ದು 48,018 ಮನೆಗಳ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. 2,000 ಮನೆಗಳು ಪೂರ್ಣಗೊಂಡಿದ್ದು ಸೆಪ್ಟೆಂಬರ್ 7 ರಂದು ಸಾಂಕೇತಿಕವಾಗಿ ಹಸ್ತಾಂತರ ಮಾಡಲಿದ್ದೇವೆ. ಇವರು ಕೊಟ್ಟಿದ್ದು ಸೇರಿ ನಾವು ಹಣ ಬಿಡುಗಡೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಮನೆಗಳನ್ನ ಪಾರದರ್ಶಕವಾಗಿ ಮಾಡಿದ್ದೇವೆ. ಈಗಾಗಲೇ 44,510 ಅರ್ಜಿಗಳನ್ನು ಸ್ವೀಕರಿಸಿದ್ದು 6,499 ಅರ್ಜಿದಾರರು ತಾವು ಬಯಸಿದ ಮನೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.








