ಕೋವಿಡ್-19 ಔಷಧಿ ಹೆಸರಲ್ಲಿ ಮೈಸೂರು ಪಾಕ್ ಮಾರಾಟ ಮಾಡುತ್ತಿದ್ದ ಅಂಗಡಿ ಲೈಸೆನ್ಸ್ ರದ್ದು
ಕೊಯಮತ್ತೂರು, ಜುಲೈ 9: ನಮ್ಮ ಗಿಡಮೂಲಿಕಾ ಮೈಸೂರು ಪಾಕ್ ಕೋವಿಡ್-19ಗೆ ಔಷಧಿ ಎಂದು ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದ ಟಿಎನ್ ಸಿಹಿ ಅಂಗಡಿ ಪರವಾನಿಗೆಯನ್ನು ರದ್ದು ಮಾಡಲಾಗಿದೆ.
ಕಳೆದ ಮೂರು ತಿಂಗಳುಗಳಿಂದ ಅವರು ಕೋವಿಡ್-19 ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಗಿಡಮೂಲಿಕೆಗಳ ಮೈಸೂರು ಪಾಕ್ ಮಾರಾಟ ಮಾಡಿ ಅವರನ್ನು ವಂಚಿಸುತ್ತಿದ್ದ.
45 ವರ್ಷದ ಶ್ರೀರಾಮ್ ಕೊಯಮತ್ತೂರು ನಗರದಾದ್ಯಂತ ‘ನೆಲ್ಲೈ ಲಾಲಾ ಸ್ವೀಟ್ಸ್’ ಹೆಸರಿನಲ್ಲಿ ಎಂಟು ಸ್ವೀಟ್ ಅಂಗಡಿಗಳ ಮಳಿಗೆಯನ್ನು ಹೊಂದಿದ್ದು, . ತಮಿಳುನಾಡಿನಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ತನ್ನ ಅಂಗಡಿಯಲ್ಲಿ ತಯಾರಿಸಿದ ಗಿಡಮೂಲಿಕೆ ಮೈಸೂರು ಪಾರ್ಕ್ ಕೊರೋನಾ ಗುಣಪಡಿಸುವ ಹೇಳಿಕೆಗಳು ನಗರದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಈ ಮೈಸೂರ್ ಪಾಕನ್ನು 19 ವಿಧದ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎಂದು ಹೇಳಿಕೊಂಡು ಸ್ವೀಟ್ಸ್ ಅಂಗಡಿ ಮಾಲೀಕ ಶ್ರೀರಾಮ್ ಕೆ.ಜಿಗೆ 800 ರೂಪಾಯಿಯಂತೆ ಮೈಸೂರು ಪಾರ್ಕ್ ಮಾರಾಟ ಮಾಡುತ್ತಿದ್ದ. ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಈ ಮೈಸೂರ್ ಪಾಕ್ ತುಂಬಾ ಪರಿಣಾಮಕಾರಿಯಾಗಿದ್ದು ಕೊರೊನಾ ಸೋಂಕಿನಿಂದ ಒಂದೇ ದಿನದಲ್ಲಿ ಗುಣಪಡಿಸಬಲ್ಲದು ಮತ್ತು ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು ಎಂದು ಕರಪತ್ರಗಳನ್ನು ಪ್ರಕಟಿಸಿ ಜಾಹೀರಾತು ನೀಡಿದ್ದ.
ಕೋವಿಡ್-19 ರೋಗಿಗಳು ಒಂದು ದಿನದಲ್ಲಿ ಗುಣಮುಖರಾಗುತ್ತಾರೆ, ಒಂದು ಪವಾಡ !!!
ಹೌದು, ಇದು ಚಿನ್ನಿಯಂಪಲಯಂ ಮತ್ತು ವೆಲ್ಲಲೂರಿನಲ್ಲಿ ಗಿಡಮೂಲಿಕೆಗಳ ಮೈಸೂರ್ ಪಾಕ್ ಸೇವನೆಯಿಂದ ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಕರಪತ್ರಗಳಲ್ಲಿ ಪ್ರಕಟಿಸಿದ್ದ ಆತ,
ನೀವು ಕೊರೋನಾ (ವೈರಸ್), ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಲು ಬಯಸಿದರೆ, ಯಾವುದೇ ಕೋವಿಡ್-19 ರೋಗಿಗಳ ಬಗ್ಗೆ ಅಥವಾ ಸರ್ಕಾರವು ಸೂಚಿಸಿದಂತೆ ರೋಗಲಕ್ಷಣಗಳನ್ನು ಹೊಂದಿರುವವರ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಮ್ಮ ಗಿಡಮೂಲಿಕೆಗಳ ಮೈಸೂರ್ ಪಾಕ್ ಅನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ನಾವು ಸಿದ್ಧರಿದ್ದೇವೆ ಎಂದು ಕರಪತ್ರಗಳಲ್ಲಿ ತಿಳಿಸಿದ್ದು, ಪ್ರತಿಯಾಗಿ ಯಾವುದೇ ನಿರೀಕ್ಷೆಗಳಿಲ್ಲದೆ ಈ ಮೈಸೂರು ಪಾಕ್ ಅನ್ನು ಸಿದ್ಧಪಡಿಸುವ ಸೂತ್ರವನ್ನು ಪ್ರಧಾನಿ ಮೋದಿಗೆ ತಿಳಿಸಲಾಗುವುದು ಎಂದು ಅವನು ನಮೂದಿಸಿದ್ದ.
ನನ್ನ ಅಜ್ಜ ಸಿದ್ಧ ತಜ್ಞ. ಅವರು ಜ್ವರಕ್ಕೆ ಲೇಹ್ಯವನ್ನು ತಯಾರಿಸುತ್ತಿದ್ದರು. ಆ ದಿನಗಳಲ್ಲಿ, ಇಂತಹುದೇ ಜ್ವರವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹರಡಿತ್ತು ಮತ್ತು ಉಬ್ಬಸ ಸಮಸ್ಯೆ ಇರುವ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದ್ದರಿಂದ ನಾವು ಅದೇ ಸೂತ್ರದಲ್ಲಿ ಈ ಮೈಸೂರು ಪಾಕ್ ತಯಾರಿಸಿದ್ದೇವೆ. ಏಕೆಂದರೆ ಅದನ್ನು ಲೇಹ್ಯವಾಗಿ ಮಾರಾಟ ಮಾಡಲು ನಮಗೆ ನಿರ್ದಿಷ್ಟ ಪರವಾನಗಿ ಬೇಕು ಎಂದು ಹೇಳಿಕೊಂಡಿದ್ದಾನೆ. ನಮ್ಮ ತಂಡವು ಕಳೆದ ಮೂರು ತಿಂಗಳುಗಳಿಂದ ಇದನ್ನು ಕೋವಿಡ್-19 ರೋಗಿಗಳಿಗೆ ಮತ್ತು ಅದರ ರೋಗಲಕ್ಷಣಗಳಿರುವ ವ್ಯಕ್ತಿಗಳಿಗೆ ವಿತರಿಸುತ್ತಿದ್ದು, ಎಲ್ಲರೂ ಯಶಸ್ಸನ್ನು ಕಂಡಿದ್ದಾರೆ ಎಂದು ಹೇಳಿದ ಶ್ರೀರಾಮ್, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುಮಾರು 50 ಮಧುಮೇಹ ರೋಗಿಗಳಿಗೆ ಇದನ್ನು ಪೂರೈಸಿದ್ದೇನೆ ಎಂದು ಹೇಳಿರುವುದಾಗಿ ವರದಿಗಳು ಹೇಳಿವೆ.
ಈ ಮೈಸೂರು ಪಾಕ್ ಗೆ ‘ಫೋಟಾನ್ ಸ್ಪೀಡ್ ಕೊರೊನಾ ಮೈಸೂರ್ ಪಾಕ್’ ಎಂದು ಹೆಸರಿಟ್ಟಿದ್ದು, ಮಾಹಿತಿ ತಿಳಿದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ದ ಅಧಿಕಾರಿಗಳು ದಾಳಿ ನಡೆಸಿದಾಗ ಶ್ರೀರಾಮ್, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲನಾಗಿದ್ದಾನೆ. ಅಲ್ಲದೆ ಈ ಮೈಸೂರು ಪಾಕ್ ಗೆ ಉಪಯೋಗಿಸಿರುವ ಸಾಮಗ್ರಿಗಳ ಹೆಸರನ್ನು ಹೇಳಲು ಆತನಿಂದ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಶ್ರೀರಾಮ್ ವಿರುದ್ಧ ಕೇಸ್ ದಾಖಲಿಸಿ ಆತನ ಅಂಗಡಿಯ ಪರವಾನಿಗೆಯನ್ನು ರದ್ದು ಮಾಡಲಾಗಿದೆ.