ಚಿಕ್ಕಮಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ವಿನೋದ ರಾಜ್(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಾಲೂಕಿನ ತೇಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿನೋದ್ ರಾಜ್ ಎರಡು ವರ್ಷಗಳ ಕಾಲ ಪ್ರೀತಿಸಿ, ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಒಂದೇ ತಿಂಗಳೊಳಗೆ ಪತ್ನಿ ಕೈ ಕೊಟ್ಟಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಾವನ್ನಪ್ಪಿದ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ (National Kabbadi Player) ಆಟಗಾರನಾಗಿದ್ದ. ಈತ ಅದೇ ಗ್ರಾಮದ ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಹೀಗಾಗಿ ಇಬ್ಬರೂ ಮದುವೆಯಾಗಿದ್ದರು. ಮದುವೆಗೆ ಯುವಕನ ಕಡೆಯಿಂದ ಯಾವುದೇ ವಿರೋಧ ಇರಲಿಲ್ಲ. ಯುವತಿಯ ಮನೆಯಲ್ಲಿ ವಿರೋಧವಿತ್ತು. ಆದರೂ ಯುವತಿ ಕುಟುಂಬಸ್ಥರ ವಿರೋಧದ ಮಧ್ಯೆ ವಿವಾಹವಾಗಿದ್ದರು. ಆದರೆ, ಮದುವೆಯಾದ ನಂತರ ತಾಯಿಯ ಮನೆಗೆ ಹೋಗಿ ಬರುವುದಾಗಿ ಹೋಗಿ, ನಂತರ ಜಗಳವಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ನಂತರ ಡಿ. 31ರಂದು ಪೊಲೀಸ್ ಠಾಣೆಯಲ್ಲಿ ಮತ್ತೆ ಯುವತಿ ಯುವಕನ ವಿರುದ್ಧ ದೂರು ದಾಖಲಿಸಿ ಒಡವೆ, ತಾಳಿ ಬಿಚ್ಚಿಕೊಟ್ಟಿದ್ದಾಳೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.