JDS | ರಾಷ್ಟ್ರೀಯ ಪಕ್ಷಗಳಿಂದ ಧರ್ಮಗಳ ನಡುವೆ ಬೆಂಕಿ : ನಿಖಿಲ್
ತುಮಕೂರು: ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಧರ್ಮಗಳ ನಡುವೆ ಬೆಂಕಿ ಹಚ್ಚಿ ಚುನಾವಣೆಯಲ್ಲಿ ಮತ ಪಡೆಯುತ್ತೇವೆ, ರಾಜ್ಯದ ಜನರನ್ನು ಯಾಮಾರಿಸುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಇದು ಸುಳ್ಳಾಗುವ ಸಮಯ ದೂರ ಇಲ್ಲ. ಜಾತಿ ಧರ್ಮದ ಲೆಕ್ಕಾಚಾರದ ಮೇಲೆ ರಾಜಕೀಯ ಮಾಡುವ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ಯಾವ ಹೇಳಿಕೆಗಳನ್ನು ನೀಡಲಿಲ್ಲ. ಇನ್ನೂ ರಾಜ್ಯ ಸರ್ಕಾರ ಜನರನ್ನು ಎತ್ತಿಕಟ್ಟಿ ಮೌನವಾಗಿ ಕುಳಿತಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪ್ರಾದೇಶಿಕ ನಾಡು, ನುಡಿ ಜಲ ಸಂರಕ್ಷಣೆಗೆ ಸಂಪೂರ್ಣ ಬದ್ಧವಾದ ಜೆಡಿಎಸ್ ಪಕ್ಷದ ಜನತಾಜಲಧಾರೆ ರಥಯಾತ್ರೆ ಇಂದು ತುಮಕೂರು ತಾಲೂಕಿನ ಗುಬ್ಬಿಯಲ್ಲಿ ಸಂಚರಿಸಿತು. ರಥಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿ ತೆರೆದ ವಾಹನದಲ್ಲಿ ಜೆಡಿಎಸ್ ಮುಖಂಡರೊಂದಿಗೆ ರೋಡ್ ಶೋ ನಡೆಸಿದರು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು ಜನತಾ ಜಲಧಾರೆ ರಥಯಾತ್ರೆಗೆ ಸ್ವಾಗತ ಕೋರಿದರು. ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನತಾ ಜಲಧಾರೆ ರಥಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪವಿತ್ರ ಜಲ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹಲವು ವರ್ಷಗಳಿಂದ ಅವಕಾಶ ನೀಡುತ್ತಿದ್ದೀರಾ. ಆದರೆ, ಇವರು ಕೊಟ್ಟ ಯಾವ ಆಶ್ವಾಸನೆಗಳನ್ನು ಈಡೇರಿಸಲಿಲ್ಲ. ಕೇವಲ ಸುಳ್ಳಿನ ಆಶ್ವಾಸನೆ ನೀಡುತ್ತಿದ್ದಾರೆ.ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ. ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್ ನವರು ಕಡಿಮೆಯೇನಲ್ಲ ಸಾವಿನ ಮೆನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಸಂತೋಷ್ ಅವರ ಮನೆಗೆ ಸಾಲು ಸಾಲು ಕಾಂಗ್ರೆಸ್ ನಾಯಕರು ಹೋಗಿ ಮಾಧ್ಯಮಗಳ ಮುಂದೆ ಫೋಸ್ ನೀಡಿದ್ರು. ಇವರು ಪರ್ಸಂಟೇಜ್ ಪಡೆದಿಲ್ಲವೇ, ರಾಜ್ಯದ ಸಂಪತ್ತನ್ನು ಲೂಟಿ ಮಾಡಿಲ್ಲವೇ..? ಕಾಂಗ್ರೆಸ್ ಪಕ್ಷದವರು ಕುಳಿತು ಆತ್ಮವಾಲೋಕನ ಮಾಡಿಕೊಳ್ಳಬೇಕು. ಈ ರೀತಿ ಎರಡೂ ರಾಷ್ಟ್ರೀಯ ಪಕ್ಷಗಳು ನಡೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚಿಕೊಂಡು ಸರ್ಕಾರ ಆಡಳಿತ ನಡೆಸುತ್ತಿದೆ. ಜನರನ್ನು ಎತ್ತಿಕಟ್ಟಿ ರಾಜ್ಯ ಬಿಜೆಪಿ ಸರ್ಕಾರ ಸದ್ಯ ಮೌನವಾಗಿ ಕುಳಿತಿದೆ, ಸರ್ಕಾರದ ಯಾವುದೇ ಆಕ್ಷೇಪಣೆ ಇಲ್ಲ. ಹಿಂದೂ ಪರಿಷತ್ತು, ಭಜರಂಗದಳವನ್ನು ಬಳಸಿಕೊಂಡು ಜನರ ಮದ್ಯೆ ಬೆಂಕಿ ಹಚ್ಚಿ ಕೂತು ತಮಾಷೆ ನೋಡುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸುವ ಕೆಲಸ ಆಗಬೇಕಿದೆ. ನಾವೆಲ್ಲರು ಮೊದಲು ಭಾರತೀಯರು ನಾವೆಲ್ಲ ಅಣ್ಣ-ತಮ್ಮಂದಿರಂತೆ ಕೇವಲ ರಾಜಕೀಯ ಲಾಭಕ್ಕಾಗಿ ನಮ್ಮ ನಡುವಿನ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ನಾವು ಸರಿಯಾದ ತೀರ್ಮಾನ ಮಾಡಬೇಕು. ಪ್ರಾದೇಶಿಲ ಪಕ್ಷವನ್ನು ಉಳಿಸುವುದು ಅತ್ಯವಶ್ಯಕ. ರೈತರಿಗಾಗಿ, ಶೋಷಿತರಿಗಾಗಿ, ಬಡವರಿಗಾಗಿ, ಯುವಕರಿಗಾಗಿ ಈ ಪಕ್ಷ ಉಳಿಯಬೇಕಿದೆ ಎಂದು ಕರೆ ನೀಡಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾಗರಾಜ್ ಅವರು ಎಂದು ಈಗಾಗಲೇ ನಿರ್ಧಾರ ಆಗಿದೆ. ನಾವು ಇಲ್ಲಿನ ಶಾಸಕರಿಗೆ ಏನು ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದ ಶಾಸಕರನ್ನು ಮಂತ್ರಿ ಮಾಡಿದ್ದೆವು. ಸ್ವಲ್ಪನಾದ್ರೂ ತಾಯಿ ಹೃದಯ ಇದ್ದರೆ ನಿಮ್ಮನ್ನು ಬೆಳೆಸಿದ ಪಕ್ಷಕ್ಕೆ ಬೆನ್ನಿಗೆ ಚೂರಿ ಚುಚ್ಚುವ ಕೆಲಸ ಮಾಡಿದ್ದೀರಿ. ನಾವೆಲ್ಲಾ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೀವಿ. ಯಾವ ಪಕ್ಷದಲ್ಲಿದ್ದೇನೆ ಎಂದು ಈ ಕ್ಷೇತ್ರದ ಶಾಸಕರಿಗೆ ಗೊತ್ತಿಲ್ಲ. ಇದು ಒಂದು ರೀತಿ ಬ್ಲಾಕ್ಮೇಲೆ ರಾಜಕಾರಣ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಭಾಗಿಯಾಗಿದ್ದರು. nikhil kumaraswamy slams congress – bjp