“ನಿರ್ಭಯ 2” ಸಿನಿಮಾಗೆ ತುಮಕೂರಿನಲ್ಲಿ ಚಾಲನೆ
ಸರಿಗಮಪ ಖ್ಯಾತಿಯ ಸುಹಾನ ಸೈಯ್ಯದ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ನಿರ್ಭಯ 2” ಸಿನಿಮಾಗೆ ತುಮಕೂರಿನಲ್ಲಿ ಚಾಲನೆ ಸಿಕ್ಕಿದೆ. ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ತುಮಕೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಸಂಸದರಾದ ಜಿ.ಎಸ್ ಬಸವರಾಜ್ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ತುಮಕೂರಿನಲ್ಲಿ ಮುಹೂರ್ತ ಸಮಾರಂಭ ಮುಗಿಸಿ ಬಳಿಕ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡವು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ನಿರ್ದೇಶಕ ರಾಜು ಕುಣಿಗಲ್ ಅವರು ನಾನು ಆರು ವರ್ಷಗಳ ಹಿಂದೆ ಈ ಕಥೆ ಸಿದ್ದಮಾಡಿಕೊಂಡಿದ್ದೆ. ನಿರ್ಮಾಪಕರು ಸಿಗದ ಕಾರಣ ಚಿತ್ರ ನಿರ್ಮಾಣ ವಿಳಂಬ ವಾಯಿತು.
ಕಥೆ ಕೇಳಿದ ಬಾಲಕೃಷ್ಣ ಅವರು ನಿರ್ಮಾಣಕ್ಕೆ ಮುಂದಾದರು. ಇದೇ ಹದಿನೇಳರಿಂದ ತುಮಕೂರು, ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಸಮಾಜದಲ್ಲಿ ನಡೆಯುತ್ತಿರುವ ಕೊಲೆ, ಅತ್ಯಾಚಾರ ಮುಂತಾದ ವಿಷಯಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆದಿದ್ದೇನೆ. ನಾನೇ ಕಥೆ, ಚಿತ್ರಕಥೆ ಬರೆದಿದಿದ್ದೇನೆ. ನುರಿತ ತಂತ್ರಜ್ಞರು ಹಾಗೂ ಗಾಯಕಿ ಸುಹಾನ ಸೈಯದ್ ಸೇರಿದಂತೆ ನೂತನ ಪ್ರತಿಭೆಗಳ ಸಂಗಮದಲ್ಲಿ “ನಿರ್ಭಯ 2” ನಿರ್ಮಾಣವಾಗಲಿದೆ.
ಈ ಚಿತ್ರದ ಬಿಡುಗಡೆ ನಂತರ “ನಿರ್ಭಯ 1” ಚಿತ್ರ ಸಹ ನಿರ್ಮಾಣ ಮಾಡುತ್ತೇವೆ. ಎಲ್ಲರೂ ಮೊದಲು ಭಾಗ ಒಂದನ್ನು ನಿರ್ಮಾಣ ಮಾಡಿ, ನಂತರ ಎರಡನ್ನು ತೆರೆಗೆ ತರುತ್ತಾರೆ. ಆದರೆ ನಾವು ಮೊದಲು ಭಾಗ ಎರಡನ್ನು ಬಿಡುಗಡೆ ಮಾಡಿ ಆಮೇಲೆ ಒಂದನ್ನು ನಿರ್ಮಾಣ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಇನ್ನೂ ಈ ಬಗ್ಗೆ ಮಾತನಾಡಿದ ನಿರ್ಮಾಪಕ ಬಾಲಕೃಷ್ಣ ಕೆ.ಆರ್ ಅವರು ನಾನೊಬ್ಬ ರೈತ. ಕುಣಿಗಲ್ ನಮ್ಮೂರು. ಸಮಾಜಕ್ಕೆ ಉತ್ತಮ ಚಿತ್ರ ನೀಡಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ಕೋರಿದ್ರು..
ಈ ಸಿನಿಮಾ ಬಗ್ಗೆ ಮಾತನಾಡಿದ ಚಿತ್ರದ ನಾಯಕ ಅರ್ಜುನ್ ಕೃಷ್ಣ ಅವರು ಈ ಚಿತ್ರದಲ್ಲಿ ನನ್ನದು ಟಿಪಕಲ್ ಪಾತ್ರ. ನೆಗೆಟಿವ್ ಶೆಡ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ಚಿಕ್ಕ ಪರಿಚಯ ನೀಡಿದ್ದಾರೆ.
ಚಿತ್ರಕ್ಕೆ ಆಕಾಶ್ ಪರ್ವ ಅವರ ಸಂಗೀತ, ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರಲಿದೆ..