ಕಾಠ್ಮಂಡು: ಇತ್ತೀಚಿನ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳ, ಇದೀಗ ಜಗತ್ತಿನ ಬಲಿಷ್ಠ ರಾಷ್ಟ್ರಗಳ ವಿರುದ್ಧ ತಿರುಗಿಬಿದ್ದಿದೆ. ಸಾವಿರಾರು ಜೀವಗಳನ್ನು ಬಲಿಪಡೆದ ಈ ನೈಸರ್ಗಿಕ ವಿಕೋಪಕ್ಕೆ ಭಾರತ, ಚೀನಾ ಮತ್ತು ಅಮೆರಿಕದಂತಹ ಕೈಗಾರಿಕಾ ರಾಷ್ಟ್ರಗಳೇ ನೇರ ಹೊಣೆ ಎಂದು ನೇಪಾಳ ಗಂಭೀರ ಆರೋಪ ಮಾಡಿದೆ. ನಮಗೆ ನೀವು ನೀಡುವ ಮಾನವೀಯ ನೆರವು ಅಥವಾ ದಾನದ ಅವಶ್ಯಕತೆಯಿಲ್ಲ, ಬದಲಾಗಿ ನಮ್ಮ ದೇಶಕ್ಕಾದ ಹಾನಿಗೆ ತಕ್ಕ ಪರಿಹಾರ ನೀಡಿ ಎಂದು ನೇಪಾಳ ಸರ್ಕಾರ ಖಡಕ್ ಆಗಿ ಹೇಳಿದೆ.
ದೊಡ್ಡ ರಾಷ್ಟ್ರಗಳ ಪಾಪಕ್ಕೆ ನೇಪಾಳಕ್ಕೆ ಶಿಕ್ಷೆ
ನೇಪಾಳದ ವಾದದ ಪ್ರಕಾರ, ಜಾಗತಿಕವಾಗಿ ಕಾರ್ಬನ್ ಹೊರಸೂಸುವಿಕೆಯಲ್ಲಿ ನೇಪಾಳದ ಪಾತ್ರ ತೀರಾ ನಗಣ್ಯ. ಆದರೆ ಭಾರತ, ಚೀನಾ ಮತ್ತು ಅಮೆರಿಕದಂತಹ ದೊಡ್ಡ ದೇಶಗಳು ಹೊರಸೂಸುವ ವಿಷಕಾರಿ ಅನಿಲಗಳಿಂದಾಗಿ ಹಿಮಾಲಯದ ಉಷ್ಣಾಂಶ ಏರಿಕೆಯಾಗುತ್ತಿದೆ. ಇದರಿಂದಾಗಿ ಹಿಮನದಿಗಳು ವೇಗವಾಗಿ ಕರಗಿ ಭೀಕರ ಪ್ರವಾಹ ಉಂಟಾಗುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕೈಗಾರಿಕಾ ನೀತಿಯಿಂದಾಗಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಕ್ಕೆ ಇಂದು ನೇಪಾಳದಂತಹ ಬಡ ರಾಷ್ಟ್ರಗಳು ಬೆಲೆ ತೆರುತ್ತಿವೆ ಎಂದು ನೇಪಾಳದ ಪರಿಸರ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾನದ ಬದಲು ಹವಾಮಾನ ನ್ಯಾಯಕ್ಕೆ ಆಗ್ರಹ
ಪ್ರವಾಹ ಬಂದಾಗ ಒಂದಷ್ಟು ಆಹಾರ ಧಾನ್ಯ ಅಥವಾ ರಕ್ಷಣಾ ಸಾಮಗ್ರಿಗಳನ್ನು ಕಳುಹಿಸುವುದು ಶಾಶ್ವತ ಪರಿಹಾರವಲ್ಲ. ಅಂತರಾಷ್ಟ್ರೀಯ ಹವಾಮಾನ ಒಪ್ಪಂದದಂತೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಶ್ರೀಮಂತ ರಾಷ್ಟ್ರಗಳು ಅದರ ಪರಿಣಾಮ ಅನುಭವಿಸುತ್ತಿರುವ ದೇಶಗಳಿಗೆ ಆರ್ಥಿಕ ನಷ್ಟಭರ್ತಿ ನೀಡಬೇಕು. ನೇಪಾಳದ ಮೂಲಸೌಕರ್ಯ, ಜಲವಿದ್ಯುತ್ ಯೋಜನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶಕ್ಕೆ ಈ ಮೂರು ದೇಶಗಳೇ ಹೊಣೆ ಹೊರಬೇಕು ಎಂದು ನೇಪಾಳ ಸರ್ಕಾರ ಆಗ್ರಹಿಸಿದೆ.
ಜೀಡಿಪಿಯ ಶೇಕಡಾ 10ರಷ್ಟು ಹಾನಿ
ನೇಪಾಳದ ವಿತ್ತ ಸಚಿವ ಸ್ವರ್ಣಿಮ್ ವಾಗ್ಲೆ ನೀಡಿರುವ ಮಾಹಿತಿಯಂತೆ, ಈ ಬಾರಿಯ ಪ್ರವಾಹದಿಂದ ದೇಶಕ್ಕೆ ಸುಮಾರು 4ರಿಂದ 5 ಶತಕೋಟಿ ಅಮೆರಿಕನ್ ಡಾಲರ್ ನಷ್ಟು ನಷ್ಟ ಸಂಭವಿಸಿದೆ. ಇದು ನೇಪಾಳದ ಒಟ್ಟು ಜಿಡಿಪಿಯ ಶೇಕಡಾ 10ರಷ್ಟಾಗಿದೆ. ಸಂಪೂರ್ಣವಾಗಿ ಧ್ವಂಸಗೊಂಡಿರುವ ಸೇತುವೆಗಳು ಮತ್ತು ವಿದ್ಯುತ್ ಯೋಜನೆಗಳ ಪುನರ್ನಿರ್ಮಾಣಕ್ಕೆ ಬೃಹತ್ ಪ್ರಮಾಣದ ಹಣದ ಅಗತ್ಯವಿದ್ದು, ಇದನ್ನು ಮಾಲಿನ್ಯಕಾರಕ ರಾಷ್ಟ್ರಗಳೇ ನೀಡಬೇಕು ಎಂಬುದು ನೇಪಾಳದ ಹಠವಾಗಿದೆ.
ವಿಶ್ವಸಂಸ್ಥೆಯಲ್ಲಿ ನೇಪಾಳದ ಗುಡುಗು
ಬರುವ ಸೆಪ್ಟೆಂಬರ್ 8 ರಿಂದ ಆರಂಭವಾಗಲಿರುವ ವಿಶ್ವಸಂಸ್ಥೆಯ 81ನೇ ಮಹಾಸಭೆಯಲ್ಲಿ ನೇಪಾಳದ ಪ್ರಧಾನಿ ಬಾಲೆನ್ ಶಾ ಅವರು ಹವಾಮಾನ ನ್ಯಾಯದ ಕುರಿತು ಪ್ರಬಲ ಧ್ವನಿ ಎತ್ತಲಿದ್ದಾರೆ. ಈಗಾಗಲೇ ವಿಶ್ವಸಂಸ್ಥೆಯ ಫಂಡ್ ಫಾರ್ ರೆಸ್ಪಾಂಡಿಂಗ್ ಟು ಲಾಸ್ ಆ್ಯಂಡ್ ಡ್ಯಾಮೇಜ್ ಸಂಸ್ಥೆಗೆ ನೇಪಾಳ ಅಧಿಕೃತವಾಗಿ ಪತ್ರ ಬರೆದಿದ್ದು, ತುರ್ತು ಆರ್ಥಿಕ ನೆರವಿಗೆ ಆಗ್ರಹಿಸಿದೆ. ಭಾರತವು ಈಗಾಗಲೇ ಐದು ಬಾರಿ ಮಾನವೀಯ ನೆರವು ಕಳುಹಿಸಿದ್ದರೂ, ನೇಪಾಳವು ಈಗ ನ್ಯಾಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೋರಾಟಕ್ಕೆ ಇಳಿದಿದೆ.
ಭಾರತದ ಸಮರ್ಥನೆ ಏನು?
ಭಾರತವು ಒಟ್ಟು ಕಾರ್ಬನ್ ಹೊರಸೂಸುವಿಕೆಯಲ್ಲಿ ದೊಡ್ಡ ಸ್ಥಾನದಲ್ಲಿದ್ದರೂ, ತಲಾ ಒಬ್ಬ ವ್ಯಕ್ತಿಯ ಹೊರಸೂಸುವಿಕೆ ಪ್ರಮಾಣದಲ್ಲಿ ಅಮೆರಿಕ ಮತ್ತು ಚೀನಾಕ್ಕಿಂತ ಬಹಳ ಹಿಂದಿದೆ. ಅಮೆರಿಕದ ತಲಾ ಹೊರಸೂಸುವಿಕೆ 17 ಟನ್ ಇದ್ದರೆ, ಭಾರತದ್ದು ಕೇವಲ 3 ಟನ್ ಮಾತ್ರ. ಹೀಗಾಗಿ ಜಾಗತಿಕ ತಾಪಮಾನ ಏರಿಕೆಯ ಹೆಚ್ಚಿನ ಹೊಣೆಯನ್ನು ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ದೇಶಗಳೇ ಹೊರಬೇಕು ಎಂಬುದು ಭಾರತದ ನಿರಂತರ ನಿಲುವಾಗಿದೆ. ಆದರೆ ನೆರೆಹೊರೆಯ ನೇಪಾಳದ ಈ ನೇರ ಆರೋಪಗಳು ದಕ್ಷಿಣ ಏಷ್ಯಾದ ರಾಜತಾಂತ್ರಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.







