ಹುಬ್ಬಳ್ಳಿ: ಭಾನುವಾರ ಮಾತ್ರ ಲಾಕ್ಡೌನ್ಗೆ ಸರ್ಕಾರ ಕ್ರಮಕೈಗೊಂಡಿದ್ದು ಒಳ್ಳೆಯದೇ. ಆದರೆ, ಸಂಪೂರ್ಣ ಲಾಕ್ ಡೌನ್ ಮಾಡಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ನಿರ್ಬಂಧ ತೆರವುಗೊಂಡಿದೆಯೇ ಹೊರತು ಕೊರೊನಾ ಹೋಗಿಲ್ಲ. ಕೊರೊನಾ ಸೋಂಕು ಪಸರಿಸದಂತೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡು ಜವಾಬ್ದಾರಿಯಿಂದ ನಡೆಯುತ್ತಿದೆ. ಕೊರೊನಾ ಸೋಂಕು ಹರಡದಂತೆ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಜಾಗೃತಿಯಿಂದ ನಡೆದುಕೊಳ್ಳಬೇಕು ಎಂದರು.
ಸೋಯಾಬಿನ್ ಬಿತ್ತನೆ ಬೀಜದ ಬಗ್ಗೆ ಸಾಕಷ್ಟು ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿವೆ. ಯಾವುದೇ ಕಂಪನಿಯ ಬೀಜ ಇರಲಿ, ಮೊಳಕೆ ಬರದೇ ನಷ್ಟವಾಗಿದ್ದರ ಬಗ್ಗೆ ಇಲಾಖೆ ಕ್ರಮಕೈಗೊಳ್ಳುತ್ತಿದೆ. ರಸಗೊಬ್ಬರದ ಕೊರತೆಯಾಗಲೀ ಬಿತ್ತನೆ ಬೀಜಕ್ಕೆ ತೊಂದರೆಯಾಗಲೀ ಯಾವುದೇ ಸಮಸ್ಯೆಯಿಲ್ಲ. ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಇದೆ ಎಂದು ಸಚಿವ ಬಿ.ಸಿ.ಪಾಟೀಲರು ಹೇಳಿದರು.