ಬೆಂಗಳೂರಿನ ಮಾರತಹಳ್ಳಿಯ ಒಕ್ಟೇವ್ ಹೊಟೇಲ್ನಲ್ಲಿ ಕ್ವಾರೆಂಟೈನ್ ಮಂದಿಗೆ ನರಕ ದರ್ಶನ..!
ಇದು ಒಕ್ಟೇವ್ ಹೊಟೇಲ್ನ ಕರ್ಮಕಾಂಡ. ಮಾರತಹಳ್ಳಿಯಲ್ಲಿರುವ ಒಕ್ಟೇವ್ ಆಂಡ್ ಸ್ಪಾ ನಗರದ ಪ್ರತಿಷ್ಠಿತ ಹೊಟೇಲ್ ಎಂದು ಕರೆಸಿಕೊಂಡಿದೆ. ಬೆಂಗಳೂರಿನ ಕೋರಮಂಗಲ, ಬಸವನಗುಡಿ, ಜೆ.ಪಿ,ನಗರ, ಡಬಲ್ ರೋಡ್, ರೆಸಿಡೆನ್ಸಿ ರೋಡ್, ಸರ್ಜಾಪುರ ರೋಡ್ನಲ್ಲಿ ಈ ಹೋಟೇಲ್ಲಿನ ವಿವಿಧ ಬ್ರಾಂಚ್ಗಳಿವೆ.
ಇದೀಗ ಕೊರೋನಾ ಸೋಂಕಿನಿಂದಾಗಿ ವಿದೇಶದಿಂದ ಬಂದಿರುವಂತಹ ಹಲವು ಮಂದಿ ಮಾರತಹಳ್ಳಿಯಲ್ಲಿರುವ ಒಕ್ಟೇವ್ ಹೊಟೇಲ್ ನಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಆದ್ರೆ ಇಲ್ಲಿನ ವಸತಿ ಹಾಗೂ ಊಟ ಮಾತ್ರ ಅವ್ಯವಸ್ಥೆಯ ಅಗರವಾಗಿದೆ.
ಇಲ್ಲಿ ನೀಡುತ್ತಿರುವ ನೀರು, ಆಹಾರ ಪದಾರ್ಥಗಳಲ್ಲಿ ಸತ್ತ ನೊಣಗಳು, ಹುಳಗಳು ಕಾಣಿಸಿವೆ. ದುಬೈನಿಂದ ಬಂದು ಇಲ್ಲಿ ಕ್ವಾರಂಟೈನ್ ಗೆ ಒಳಗಾದವರು ಹೋಟೆಲಿನ ನಿರ್ಲಕ್ಷ್ಯವನ್ನು ಫೋಟೋ ಮತ್ತು ವೀಡಿಯೋ ಚಿತ್ರೀಕರಿಸಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಕ್ವಾರಂಟೈನ್ ಗೆ ಒಳಪಟ್ಟವರಿಂದ ಹಣ ಪಡೆದೂ ಉತ್ತಮ ಆಹಾರ ಕುಡಿಯುವ ಶುದ್ಧ ನೀರು ಕೊಡದೇ ಹೋಟೆಲ್ ಸಿಬ್ಬಂದಿಗಳು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಅವರ ಅಳಲು.
ಮೊದಲೇ ಕೊರೋನಾ ಸೋಂಕಿನ ಭಯವಿರುವ ಇವರಲ್ಲಿ ಈಗ ಮತ್ತಷ್ಟು ಗಂಭೀರ ಅನಾರೋಗ್ಯದ ಭೀತಿ ಕಾಡುತ್ತಿದೆ. ಹೋಟೆಲಿನವರು ನೀಡಿರುವ ನೀರು ಹಾಗೂ ಆಹಾರ ಕಂಡು ಕ್ವಾರಂಟೈನ್ ನಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಹೊಟೇಲ್ ಸಿಬ್ಬಂದಿಗಳಿಂದ ಉಡಾಫೆಯ ಉತ್ತರ ಬರುತ್ತದೆ. ಬಿಬಿಎಂಪಿ ಹಾಗೂ ಸರ್ಕಾರ ಕ್ವಾರಂಟೈನ್ನಲ್ಲಿರು ಹೊಟೇಲ್ ಬಗ್ಗೆಯೂ ನಿಗಾ ಇಡಬೇಕಾಗಿದೆ. ಇಲ್ಲವಾದಲ್ಲಿ ಕರೋನಾದಿಂದ ವಾಸಿಯಾದ್ರೂ ಇಂತಹ ಬೇಜವಬ್ದಾರಿ ಹೋಟೇಲ್ ಗಳ ಕಳಪೆ ದರ್ಜೆಯ ದರಿದ್ರ ಆಹಾರದಿಂದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.
ಇನ್ನಾದರೂ ಹೋಟೆಲ್ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕಾಗಿದೆ.