ಬೆಂಗಳೂರು: ಎರಡನೇ ಸುತ್ತಿನ ಯುಜಿ ನೀಟ್ (UG NEET) ಹಂಚಿಕೆ ಫಲಿತಾಂಶ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ಎರಡನೇ ಸುತ್ತಿನ ಅಖಿಲ ಭಾರತ ಯುಜಿ ನೀಟ್ ಎಂಸಿಸಿ ಕೌನ್ಸಿಲಿಂಗ್ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎನಿಂದ (KEA) ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮಯ ನೀಡಲಾಗುತ್ತಿದೆ.
ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿದ್ದಾರೆ. ಕೆಇಎದಿಂದ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಅಖಿಲ ಭಾರತ ಸೀಟು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಸೆ.20ರ ಬೆಳಿಗ್ಗೆ 11 ರೊಳಗೆ ಕೆಇಎದಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಖುದ್ದಾಗಿ ಬಂದು ರದ್ದು ಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ದಂಡ ವಿಧಿಸಿ, ಉಳಿದ ಹಣ ಹಿಂದಿರುಗಿಸಲಾಗುತ್ತದೆ. ಕೆಇಎದಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ ಆಯ್ಕೆಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ‘ರೀ ರನ್’ ಮಾಡಿ, ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.