ತಿರುಪತಿ : ನೆರೆಯ ಆಂಧ್ರ ಪ್ರದೇಶದಲ್ಲಿ ಸದ್ಯ ತಿರುಪತಿ ತಿಮ್ಮಪ್ಪನ ವಿಚಾರವಾಗಿ ಆಡಳಿತರೂಢ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸಮರ ಸಾರಿವೆ. ಜಗನ್ ಸರ್ಕಾರ ತಿರುಪತಿಯ ಆಸ್ತಿ ಮಾರಾಟ ಮಾಡಲು ಮುಂದಾಗಿರೋದು ವಿಪಕ್ಷಗಳನ್ನು ಕೆರಳುವಂತೆ ಮಾಡಿದೆ. ಬಿಜೆಪಿ, ಸಿಪಿಐ, ಸಿಪಿಎಂ ಸೇರಿದಂತೆ ಹಲವು ಪಕ್ಷಗಳು ಆಂಧ್ರಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿವೆ.
ಅಲ್ಲದೇ ಈ ವಿಚಾರ ಸಂಬಂಧ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿಯೆತ್ತಲು ಬಿಜೆಪಿ ನಾಯಕರು ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪೂರಕವಾಗಿ ಉತ್ತರಿಸಿರುವ ಪವನ್ ಕಲ್ಯಾಣ್, ಟಿಟಿಡಿ ಈಗ ಮಾಡಲು ಹೊರಟಿರುವ ಕೆಲಸ ದೇಶದ ಬೇರೆ ದೇವಸ್ಥಾನಗಳಿಗೂ ಕೆಟ್ಟ ಉದಾಹರಣೆಯಾಗಲಿದೆ. ಹೀಗಾಗಿಯೇ ಆಂಧ್ರ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು ಎಂದು ನಾವು ಒತ್ತಡ ಹೇರುತ್ತೇವೆ ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪವನ್, ಈ ನಿರ್ಧಾರದಿಂದ ಭಕ್ತರ ಭಾವನೆಗಳಿಗೆ ನೋವುಂಟು ಮಾಡುವುದಲ್ಲದೆ, ಭವಿಷ್ಯದಲ್ಲಿ ರಾಜ್ಯಕ್ಕೆ ಸಿಗಬಹುದಾದ ಆರ್ಥಿಕ ಅವಕಾಶಗಳನ್ನ ಕಳೆದುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಟಿಟಿಡಿ ತನ್ನ ಭೂಮಿಯನ್ನು ಮಾರಲು ಬಿಟ್ಟರೆ, ದೊಡ್ಡ ತಪ್ಪು ಮಾಡಿದಂತಾಗುತ್ತದೆ. ಭೂಮಿಯಿಂದ ಆದಾಯ ಗಳಿಸಬಹುದು. ಹೀಗಾಗಿ ಸರ್ಕಾರಿ ಆಸ್ತಿಯನ್ನ ಅದ್ರಲ್ಲೂ ಮುಖ್ಯವಾಗಿ ಭೂಮಿಯನ್ನ ರಕ್ಷಿಸಿಕೊಳ್ಳಲು ಸರ್ಕಾರ ಸರ್ವ ಪ್ರಯತ್ನ ಮಾಡಬೇಕು ಎಂದು ಪವನ್ ಕಲ್ಯಾಣ್ ಒತ್ತಾಯಿಸಿದ್ದಾರೆ.
ಜತೆಗೆ ಬಿಜೆಪಿ ಕರೆ ನೀಡಿರುವ ಹೋರಾಟಕ್ಕೆ ಜನಸೇನಾ ಪಕ್ಷವೂ ಬೆಂಬಲ ಸೂಚಿಸಿದ್ದು, ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆವರೆಗೆ ಉಪವಾಸ ಮಾಡುವ ಮೂಲಕ ಹೋರಾಟಕ್ಕೆ ಧ್ವನಿಗೂಡಿಸಲು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ. ಅಲ್ಲದೆ ಭಕ್ತಿಯನ್ನ ಮಾರಾಟ ಮಾಡಲು ಆಗಲ್ಲ ಎಂಬ ಹ್ಯಾಶ್ ಟ್ಯಾಗ್ ಅಡಿ ಪವನ್ ಕಲ್ಯಾಣ್ ಹಲವು ಪೋಸ್ಟ್ ಗಳನ್ನ ಹಾಕಿದ್ದಾರೆ.
ಸರ್ಕಾರ ಸಮರ್ಥನೆ
ವಿಪಕ್ಷಗಳ ವಿರೋಧದ ನಡುವೆ ಜಗನ್ ಸರ್ಕಾರವೂ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಹೀಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ಮಾರುತ್ತಿರುವುದು ಇದೇ ಮೊದಲೇನಲ್ಲ. 1974ರಿಂದ 2014ರ 40 ವರ್ಷಗಳ ಅವಧಿಯಲ್ಲಿ 129 ಆಸ್ತಿಗಳನ್ನ ಮಾರಾಟ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.








