ಚಿಕ್ಕಬಳ್ಳಾಪುರ : ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ ಯುವತಿಯ ಕತ್ತು ಹಿಸುಕಿ ಪೋಷಕರೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗಡಿ ಗ್ರಾಮದಲ್ಲಿ ನಡೆದಿದೆ. ತೂಮಕುಂಟೆ ಗ್ರಾಮದ 18 ವರ್ಷದ ಸಂಧ್ಯಾ ಮೃತ ಯುವತಿಯಾಗಿದ್ದು, ತಾಯಿ ರಾಮಾಂಜಿನಮ್ಮ, ಅಣ್ಣ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಬಾವ ಬಾಲಕೃಷ್ಣ ಸೇರಿ ಕೊಲೆ ಮಾಡಿದ್ದಾರೆ.
ಮೃತ ಸಂಧ್ಯಾ ಎರಡ್ಮೂರು ವರ್ಷಗಳಿಂದ ಬೇರೆ ಜಾತಿಯ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದು, ಆತನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತೆ ಸಂಧ್ಯಾ ಜೊತೆ ಪರಾರಿಯಾಗಿದ್ದ ಪ್ರಕರಣ ಸಂಬಂಧ ಯುವಕ ಜೈಲು ಸೇರಿದ್ದಾನೆ.
ಇತ್ತ ಸಂಧ್ಯಾ ಮನೆಯವರು ಈಕೆಗೆ ಬೇರೊಂದು ಮದುವೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸಂಧ್ಯಾ ಸಮ್ಮತಿ ಸೂಚಿಸದೇ ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ್ದಳಂತೆ. ಇದರಿಂದ ರೋಸಿ ಹೋದ ಸಂಧ್ಯಾಳ ಪೋಷಕರು ಕತ್ತು ಹಿಸುಕಿ ಆಕೆಯನ್ನ ಕೊಲೆ ಮಾಡಿದ್ದಾರೆ. ತದನಂತರ ಮೃತದೇಹವನ್ನ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಆಕೆಯ ಮೃತದೇಹಕ್ಕೆ ದೊಡ್ಡ ಸೈಜುಗಲ್ಲು ಕಟ್ಟಿ ಹಾಕಿ ಬಿಸಾಡಿದ್ದರು.
ಜೂನ್ 23 ರಂದು ಮೃತದೇಹ ಪತ್ತೆಯಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕೇಸ್ ದಾಖಲಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಸಿಪಿಐ ರವಿಕುಮಾರ್, ಪ್ರಕರಣದಲ್ಲಿನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.