PM Modi In kerla: ಭಾರತವನ್ನ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಕೇರಳದ ಪಾತ್ರ ದೊಡ್ಡದಿದೆ..
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳಕ್ಕೆ ಆಗಮಿಸಿದ್ದಾರೆ. ಕೊಚ್ಚಿನ್ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಮ್ಮ ಸರ್ಕಾರದ ಯೋಜನೆಗಳನ್ನು ತಿಳಿಸಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದೇ ನಮ್ಮ ಸಂಕಲ್ಪ. ಇದನ್ನು ಈಡೇರಿಸುವಲ್ಲಿ ಕೇರಳದ ಜನರ ಪಾತ್ರ ದೊಡ್ಡದಿದೆ ಎಂದರು.
ತಮ್ಮ ಭಾಷಣದಲ್ಲಿ, ‘ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪದ ಮೇಲೆ ಕೆಲಸ ಮಾಡುವುದು ಸ್ವಾತಂತ್ರ್ಯದ ಶಾಶ್ವತತೆಯಾಗಿದೆ ಮತ್ತು ಇದರಲ್ಲಿ ಕೇರಳದ ಜನರು ದೊಡ್ಡ ಪಾತ್ರವನ್ನು ವಹಿಸಬೇಕು. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರವನ್ನು ಅನುಸರಿಸಿ ಬಿಜೆಪಿ ನಿರ್ಣಯಗಳನ್ನು ಸಾಕಾರಗೊಳಿಸುತ್ತಿದೆ.
ನಂತರ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಬಡವರಿಗೂ ಪಕ್ಕಾ ಮನೆ ನೀಡುವ ಅಭಿಯಾನವನ್ನು ನಮ್ಮ ಸರ್ಕಾರ ನಡೆಸುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಕೇರಳದ ಬಡವರಿಗೆ ಸುಮಾರು 2,00,000 ಪಕ್ಕಾ ಮನೆಗಳನ್ನು ಸಹ ಅನುಮೋದಿಸಲಾಗಿದೆ. ಈ ಪೈಕಿ 1,30,000ಕ್ಕೂ ಹೆಚ್ಚು ಮನೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಎರಡನೇ ಹಂತದ ಕೊಚ್ಚಿ ಮೆಟ್ರೋ ಶಂಕುಸ್ಥಾಪನೆ…
ಕೊಚ್ಚಿ ಮೆಟ್ರೋದ ಎರಡನೇ ಹಂತದ ಕಾಮಗಾರಿಗೆ ಪ್ರಧಾನಿ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದೇ ಸಮಯದಲ್ಲಿ ಎಸ್ಎನ್ ಜಂಕ್ಷನ್ನಿಂದ ವಡಕ್ಕೆಕೋಟಾವರೆಗೆ ನಿರ್ಮಿಸಲಾದ ಕೊಚ್ಚಿ ಮೆಟ್ರೋದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (ಕೆಎಂಆರ್ಎಲ್) ಈ ಮಾಹಿತಿ ನೀಡಿದೆ.
ಇದಲ್ಲದೆ, ಸೆಪ್ಟೆಂಬರ್ 1 ಮತ್ತು 2 ರಂದು ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭಕ್ಕಾಗಿ ಪ್ರಧಾನಿ ಮೋದಿ ಕರ್ನಾಟಕ ಮತ್ತು ಕೇರಳಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಮಂಗಳೂರಿನಲ್ಲಿ ಸುಮಾರು 3,800 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.








