ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ರ ಬಜೆಟ್ ಭಾಷಣದಲ್ಲಿ ಕೃಷಿ ವಲಯವನ್ನು ಬಲಪಡಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದ್ದಾರೆ. ‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ (PMDDKY) ಎಂಬ ಹೊಸ ಯೋಜನೆ ಜಾರಿಗೆ ಬರಲಿದ್ದು, ಇದು ದೇಶದ ರೈತರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.
ಯೋಜನೆಯ ಪ್ರಮುಖ ಅಂಶಗಳು:
ಮೊದಲ ಹಂತದಲ್ಲಿ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶದ 100 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
ಆಯ್ಕೆಯಾದ ಜಿಲ್ಲೆಗಳು ಬಹಳ ಕಡಿಮೆ ಇಳುವರಿ ಹೊಂದಿರುವ ಪ್ರದೇಶಗಳಾಗಿದ್ದು, ಆ ಭಾಗಗಳಲ್ಲಿ ಕೃಷಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ರೈತರಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲ ನೀಡಲು ಯೋಜನೆ ಕೇಂದ್ರೀಕೃತವಾಗಿರುತ್ತದೆ.
ಕೃಷಿ ಉತ್ಪಾದನೆಯ ಗುಣಾತ್ಮಕ ಅಭಿವೃದ್ಧಿ, ನೂತನ ತಂತ್ರಜ್ಞಾನವನ್ನು ಅನುಸರಿಸಲು ಮಾರ್ಗದರ್ಶನ, ಮತ್ತು ಕೃಷಿ ಆಧಾರಿತ ಉದ್ಯಮಗಳನ್ನು ಉತ್ತೇಜಿಸಲು ಯೋಜನೆಯು ಗಮನ ಹರಿಸಲಿದ್ದಾರೆ.
ಈ ಯೋಜನೆಯ ಮೂಲಕ ದೇಶದ ಕೃಷಿ ವಲಯದಲ್ಲಿ ಶಾಶ್ವತ ಬೆಳವಣಿಗೆಯ ಹೊಸ ಯುಗ ಪ್ರಾರಂಭವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ.








