ರಾಜಕೀಯ ವಿದ್ಯಮಾನಗಳ ಬಗ್ಗೆ ಸದಾ ಹರಿತವಾಗಿ ಹಾಗೂ ನೇರವಾಗಿ ಪ್ರತಿಕ್ರಿಯಿಸುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಇದೀಗ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ವಿರುದ್ಧ ಕೆಂಡ ಕಾರಿದ್ದಾರೆ. ರಾಘವ್ ಚಡ್ಡಾ ಅವರ ಪಕ್ಷಾಂತರದ ನಿರ್ಧಾರವನ್ನು ಭೂಗತ ಲೋಕದ ನಂಟಿಗೆ ಹೋಲಿಸುವ ಮೂಲಕ ಪ್ರಕಾಶ್ ರಾಜ್ ಹೊಸ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ.
ಆಮ್ ಆದ್ಮಿ ಪಕ್ಷದ ಮೂಲ ಮೌಲ್ಯಗಳು ಕುಸಿದಿವೆ ಎನ್ನುವ ಕಾರಣ ನೀಡಿ ರಾಘವ್ ಚಡ್ಡಾ ಸೇರಿದಂತೆ ಏಳು ಜನ ಸಂಸದರು ಏಕಾಏಕಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯನ್ನು ತೀವ್ರವಾಗಿ ಲೇವಡಿ ಮಾಡಿರುವ ಪ್ರಕಾಶ್ ರಾಜ್, ರಾಘವ್ ಚಡ್ಡಾ ಅವರನ್ನು ರಾಘವ್ ಚಡ್ಡಿ ಎಂದು ಸಂಬೋಧಿಸಿ ವ್ಯಂಗ್ಯದ ಚಾಟಿ ಬೀಸಿದ್ದಾರೆ.
ಪೊಲೀಸ್ ವ್ಯವಸ್ಥೆಯು ತನ್ನ ಕರ್ತವ್ಯದಿಂದ ವಿಮುಖವಾಗಿದೆ ಎಂಬ ನೆಪ ನೀಡಿ ನಾನು ರಾಜೀನಾಮೆ ಕೊಟ್ಟು ದಾವೂದ್ ಇಬ್ರಾಹಿಂ ಗ್ಯಾಂಗ್ ಸೇರುತ್ತಿದ್ದೇನೆ ಎಂದು ಹೇಳುವಂತಿದೆ ನಿಮ್ಮ ನಿರ್ಧಾರ ಎಂದು ಪ್ರಕಾಶ್ ರಾಜ್ ಕುಟುಕಿದ್ದಾರೆ. ಅಂದರೆ ಎಎಪಿ ಸರಿ ಇಲ್ಲ ಎಂದು ಅದಕ್ಕೆ ಸಂಪೂರ್ಣ ತದ್ವಿರುದ್ಧ ಸಿದ್ಧಾಂತ ಹೊಂದಿರುವ ಮತ್ತು ತಾವು ಈ ಹಿಂದೆ ಸದಾ ಟೀಕಿಸುತ್ತಿದ್ದ ಬಿಜೆಪಿ ಸೇರುವುದು ಎಷ್ಟು ಸರಿ ಎಂಬುದು ನಟನ ಖಾರವಾದ ಪ್ರಶ್ನೆಯಾಗಿದೆ.
ಈ ಹಿಂದೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದ ರಾಘವ್ ಚಡ್ಡಾ, ಈಗ ದಿಢೀರ್ ಆಗಿ ಹಳೆಯ ಟೀಕಾತ್ಮಕ ಟ್ವೀಟ್ ಗಳನ್ನು ಡಿಲೀಟ್ ಮಾಡಿ ಕೇಸರಿ ಪಾಳಯ ಸೇರಿರುವುದು ದೊಡ್ಡ ಮಟ್ಟದ ಆಶ್ಚರ್ಯ ಮೂಡಿಸಿದೆ. ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ಅವರನ್ನು ಕೆಳಗಿಳಿಸಿದ ಬೆನ್ನಲ್ಲೇ ಚಡ್ಡಾ ಈ ನಿರ್ಧಾರ ಕೈಗೊಂಡಿರುವುದು ರಾಜಕೀಯ ಲಾಭದ ಉದ್ದೇಶವೇ ಎಂಬ ಚರ್ಚೆಗಳು ಶುರುವಾಗಿವೆ.
ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡಿದ್ದ ರಾಘವ್ ಚಡ್ಡಾ, ನಾನು ನನ್ನ ಯೌವನದ 15 ವರ್ಷಗಳನ್ನು ಪಕ್ಷಕ್ಕಾಗಿ ಸವೆಸಿದ್ದೇನೆ. ಆದರೆ ಈಗ ಆಮ್ ಆದ್ಮಿ ಪಾರ್ಟಿ ದೇಶದ ಹಿತಾಸಕ್ತಿ ಮರೆತು ಸ್ವಾರ್ಥ ರಾಜಕೀಯದತ್ತ ವಾಲಿಬಿಟ್ಟಿದೆ. ಇಷ್ಟು ದಿನ ನಾನು ಕೆಟ್ಟ ಪಕ್ಷದಲ್ಲಿದ್ದ ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದೆ. ನನ್ನ ಆಲೋಚನೆಗಳಿಗೆ ಹೊಂದಿಕೆಯಾಗದ ಜಾಗದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.
ಸದ್ಯ ಪ್ರಕಾಶ್ ರಾಜ್ ನೀಡಿರುವ ಈ ವಿವಾದಾತ್ಮಕ ಮತ್ತು ವ್ಯಂಗ್ಯಭರಿತ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ನೆಟ್ಟಿಗರು ಈ ವಿಚಾರವಾಗಿ ಪರ – ವಿರೋಧದ ಚರ್ಚೆಯಲ್ಲಿ ತೊಡಗಿದ್ದು, ರಾಘವ್ ಚಡ್ಡಾ ಅವರ ಸಿದ್ಧಾಂತ ಬದಲಾವಣೆಯನ್ನು ಕಟುವಾಗಿ ವಿಮರ್ಶಿಸುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಈ ಹೋಲಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.







