ನದಿಗಳ ಸಂರಕ್ಷಣೆ ಎಲ್ಲರ ಹೊಣೆ : ಪ್ರಹ್ಲಾದ್ ಸಿಂಗ್ ಪಟೇಲ್ Prahlad Singh Patel saaksha tv
ನವದೆಹಲಿ : ಮಾನವರ ಅಸ್ತಿತ್ವ ನದಿಗಳ ಅಸ್ತಿತ್ವ ಅವಲಂಬಿಸಿದ್ದು, ನದಿಗಳು ಮಲಿನವಾಗದಂತೆ ಸಂರಕ್ಷಿಸುವ ಹೊಣೆ ಎಲ್ಲರದಾಗಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಪ್ರತಿಪಾದಿಸಿದ್ದಾರೆ.
ಗಂಗಾ ಉತ್ಸವ 2021ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರನ್ನು ವಿಜ್ಞಾನದಿಂದ ಮಾಡಲು ಸಾಧ್ಯವಿಲ್ಲ, ನೀರನ್ನು ಪ್ರಕೃತಿ ನೀಡುತ್ತದೆ. ಹೀಗಾಗಿ ಪ್ರಕೃತಿ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ನದಿಗಳಿಗೆ ಸ್ವತಂತ್ರವಾಗಿ ತಮ್ಮದೇ ರೀತಿಯಲ್ಲಿ ಹರಿಯಲು ಬಿಟ್ಟರೆ, ಅದು ತನ್ನ ಕೊಳೆಯನ್ನು ತಾನೇ ತೊಳೆದುಕೊಳ್ಳುತ್ತದೆ ಎಂದ ಅವರು, ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ನಾವು ಜಲ ಮೂಲಗಳನ್ನು, ನದಿಗಳನ್ನು ಮಾಲಿನ್ಯಗೊಳಿಸಬಾರದು ಎಂದು ಹೇಳಿದರು.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಕಿಷನ್ ರೆಡ್ಡಿ, ಗಂಗಾ ಉತ್ಸವ ಸರ್ಕಾರದ ಉತ್ಸವ ಆಗಬಾರದು, ಅದು ಜನರು ಪಾಲ್ಗೊಳ್ಳುವ ಉತ್ಸವ ಆಗಬೇಕು ಎಂಬುದು ಪ್ರಧಾನಿಯವರ ಕನಸಾಗಿದೆ ಎಂದರು.
ನದಿಗಳೊಂದಿಗೆ ಶ್ರೀಮಂತ ಸಾಮಾಜಿಕ, ಸಾಂಸ್ಕೃತಿಕ, ಇತಿಹಾಸಿಕ, ಧಾರ್ಮಿಕ ಪರಂಪರೆ ಇದೆ. ಭಾರತದಲ್ಲಿ ನದಿಗಳಿಗೆ ಮಾತೆಯ ಸ್ಥಾನ ನೀಡಲಾಗಿದೆ.
ಗಂಗಾ ಮಾತೆ, ಯಮುನಾ ಮಾತೆ, ಕಾವೇರಿ ಮಾತೆ, ಗೋದಾವರಿ ಮಾತೆ.. ಹೇಮಾವತಿ ಮಾತೆ ಎಂದು ಎಲ್ಲ ನದಿಗಳಿಗೂ ಮಾತೆಯ ಹೆಸರು ಇಡಲಾಗಿದೆ. ನದಿ ಇಲ್ಲದೆ ನಾಗರಿಕತೆಯೇ ಇಲ್ಲ. ಹೀಗಾಗಿ ನದಿಗಳ ಸಂರಕ್ಷಣೆ ಅತ್ಯಗತ್ಯ ಎಂದರು.
ಕೃಷಿ, ಪ್ರವಾಸೋದ್ಯಮದೊಂದಿಗೆ ನದಿಗಳ ನಂಟಿದೆ ಎಂದ ಅವರು, ಜನರು ಜಾಗರೂಕರಾಗಿ ಕ್ರಮ ವಹಿಸಿದರೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ನದಿಗಳನ್ನು ಉಳಿಸಬಹುದು, ಇಂತಹ ಉತ್ಸವಗಳು ಜಾಗೃತಿ ಮೂಡಿಸುತ್ತವೆ ಎಂದು ಹೇಳಿದರು.