ಮೈಸೂರಿನ ಪಾರಂಪರಿಕ ಕಟ್ಟಡ, ದೇವರಾಜ ಮಾರುಕಟ್ಟೆ ನೆಲಸಮಕ್ಕೆ ವರ್ತಕರಿಂದ ವಿರೋಧ
ಇತಿಹಾಸ ಹಾಗೂ ಪರಂಪರೆಯ ರೂಪಕವಾಗಿ ಮೈಸೂರಿನಾದ್ಯಾಂತ ಹಲವು ಪಾರಂಪರಿಕ ಕಟ್ಟಡಗಳಿವೆ. ಒಂದೊಂದು ಕಟ್ಟಡಗಳು ರಾಜಮಹರಾಜರ ಆಡಳಿತಕ್ಕೆ ಸಾಕ್ಷಿಯಾಗಿ ನಿಂತಿವೆ. ಈಗಿರುವಾಗ ಮೈಸೂರಿನ ದೇವರಾಜ ಮಾರುಕಟ್ಟೆ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆಯಿಂದ ಅಂಗಡಿ ಬಂದ್ ಮಾಡಿರುವ ವರ್ತಕರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ದೇವರಾಜು ಮಾರುಕಟ್ಟೆಯ ಕಟ್ಟಡ ನೆಲಸಮಗೊಳಿಸದೇ ಅದನ್ನು ನವೀಕರಣಗೊಳಿಸಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ.
ಇನ್ನೂ ವರ್ತಕರ ಪ್ರತಿಭಟನೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಚಾಲನೆ ನೀಡಲಿದ್ದಾರೆ. ಹಾಗಾಗಿ ವರ್ತಕರ ಪ್ರತಿಭಟನೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ.
ದೇವರಾಜು ಮಾರುಕಟ್ಟೆ ಕಟ್ಟಡ ಶಿಥಿಲಗೊಂಡ ಹಿನ್ನೆಲೆ ಅದನ್ನು ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಮೈಸೂರಿನ ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಪಾರಂಪರಿಕ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ನೂರು ವರ್ಷಗಳಷ್ಟು ಹಳೆಯದಾದ ಕಟ್ಟಡ ನೆಲಸಮಕ್ಕೆ ವರ್ತಕರು ಸೇರಿದಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಕಟ್ಟಡ ಉಳಿಸಬೇಕು ಎಂದು ಆಗ್ರಹಿಸಿ ವರ್ತಕರು ಪ್ರತಿಭಟನೆ ನಡೆಸುತ್ತಿದ್ದಾರೆ.