ಚಿನ್ನದ ಚಿಗರೆ ಪಿ.ಟಿ. ಉಷಾ ಅವರ ಗುರು ನಂಬಿಯಾರ್ ಸರ್ ನಿಧನ
ಭಾರತದ ಖ್ಯಾತ ಓಟಗಾರ್ತಿ ಪಿ.ಟಿ. ಉಷಾ ಅವರ ಗುರು ಒ.ಎಂ. ನಂಬಿಯಾರ್ ಅವರು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 89ರ ಹರೆಯದ ನಂಬಿಯಾರ್ ಅವರಿಗೆ ಹತ್ತು ದಿನಗಳ ಹಿಂದೆ ಹೃದಯಾಘಾತಕ್ಕಿಡಾಗಿದ್ದರು. ಅಲ್ಲದೆ ಅವರಿಗೆ ಪಾರ್ಕಿನ್ ಸನ್ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ನಂಬಿಯಾರ್ ಅವರು ಪತ್ನಿ ಲೀಲಾ, ಹಾಗೂ ಓರ್ವ ಪುತ್ರಿ ಮತ್ತು ಮೂವರು ಪುತ್ರರನ್ನು ಆಗಲಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದ ನಂಬಿಯಾರ್, ಈ ವರ್ಷ ಪದ್ಮ ಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ಭಾರತೀಯ ವಾಯು ಸೇನೆಯ ಮಾಜಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ನಂಬಿಯಾರ್ ಅವರು ಪಿ. ಟಿ. ಉಷಾ ಅವರನ್ನು ಚಿನ್ನದ ಚಿಗರೆಯಂತೆ ಓಡಲು ತರಬೇತಿ ನೀಡಿದ್ದರು. ಜೊತೆಗೆ ನೂರಾರು ಕ್ರೀಡಾಪಟುಗಳಿಗೂ ತರಬೇತಿ ನೀಡಿದ್ದರು.
ಗುರುವಿನ ನಿಧನಕ್ಕೆ ಪಿ. ಟಿ. ಉಷಾ ಅವರು ಸಂತಾಪ ಸೂಚಿಸಿದ್ದಾರೆ. ನನಗೆ ನಂಬಿಯಾರ್ ಸರ್ ಅವರು ತಂದೆಯ ಸಮಾನರಾಗಿದ್ದರು. ಅವರ ಸಲಹೆ, ಮಾರ್ಗದರ್ಶನ, ಬೆಂಬಲವಿರದೇ ಇರುತ್ತಿದ್ರೆ ನಾನು ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ನೆರಳಿನ ಹಿಂದೆ ಹೆಜ್ಜೆಯನ್ನಿಟ್ಟುಕೊಂಡು ಬೆಳೆದವಳು ನಾನು. ಹೀಗಾಗಿಯೇ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯ್ತು. ಅವರ ನಿಧನ ನನಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಪಿ.ಟಿ. ಉಷಾ ಹೇಳಿದ್ದಾರೆ.
1977ರಲ್ಲಿ ಕಣ್ಣೂರಿನಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್ ನಲ್ಲಿ ನಂಬಿಯಾರ್ ಅವರ ಕಣ್ಣಿಗೆ ಬಿದ್ದಿದ್ದ ಪಿ.ಟಿ. ಉಷಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಅವರ ತರಬೇತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಿ.ಟಿ. ಉಷಾ ಅವರು ಭಾರತದ ಅದ್ಭುತ ಓಟಗಾರ್ತಿಯಾಗಿ ರೂಪುಗೊಂಡಿದ್ದರು.
13 ವರ್ಷಗಳ ಕಾಲ ಅಂದ್ರೆ 1977ರಿಂದ 1990ರ ವರೆಗೆ ಪಿ.ಟಿ. ಉಷಾ ಅವರಿಗೆ ತರಬೇತಿ ನೀಡಿದ್ದ ನಂಬಿಯಾರ್, 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಪದಕ ಕೈ ತಪ್ಪಿದಾಗ ಕೋಚ್ ಅನ್ನೋದನ್ನು ಮರೆತು ನಂಬಿಯಾರ್ ಕಣ್ಣೀರು ಹಾಕಿದ್ದರು. ಶಿಷ್ಯೆ ಅದ್ಭುತವಾಗಿ ಓಡಿದ್ರೂ ಒಲಿಂಪಿಕ್ಸ್ ಪದಕ ಸಿಕ್ಕಿಲ್ಲ ನೋವು ಅವರಿಗಿತ್ತು. 100 ಮೀಟರ್, 200 ಮೀಟರ್, 400 ಮೀಟರ್ ಮತ್ತು 400 ಮೀಟರ್ ಹರ್ಡಲ್ಸ್ ನಲ್ಲಿ ಪಿ. ಟಿ. ಉಷಾ ಅವರು ಏಷ್ಯಾ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದರು. ಈ ಸಾಧನೆಗಳ ಹಿಂದೆ ನಂಬಿಯಾರ್ ಅವರ ತರಬೇತಿ, ಮಾರ್ಗದರ್ಶನ ಮತ್ತು ಸಲಹೆಗಳು ಇದ್ದವು. ಇದನ್ನೆಲ್ಲಾ ಪಿ. ಟಿ. ಉಷಾ ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
ಗುರು ವಿನ ಆರೋಗ್ಯವನ್ನು ಆಗಾರ ವಿಚಾರಿಸಿಕೊಳ್ಳುತ್ತಿದ್ದ ಪಿ.ಟಿ. ಉಷಾ ಅವರು ಇತ್ತೀಚೆಗೆ ನಂಬಿಯಾರ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು. ಆಗ ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವುದನ್ನು ಗುರುವಿನ ಬಳಿ ಹೇಳಿದ್ದರು. ಆದ್ರೆ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಆರ್ಥವಾಗುತ್ತಿತ್ತು ಎಂದು ಪಿ. ಟಿ. ಉಷಾ ಹೇಳಿದ್ದಾರೆ. \








