ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಕರುನಾಡಿನಾದ್ಯಂತ ದುಃಖದ ವಾತಾವರಣವಿದೆ. ಅಭಿಮಾನಿಗಳಿನ್ನೂ ವರೆಗೂ ಈ ನೋವಿನಿಂದ ಹೊರಬಂದಿಲ್ಲ. ಈ ಕಹಿ ಸತ್ಯವನ್ನ ಒಪ್ಪಿಕೊಳ್ಳಲು ಕಷ್ಟಪಡ್ತಿದ್ದಾರೆ. ಈ ನಡುವೆ ಅನೇಕ ಪರ ಭಾಷೆ ಸೆಲೆಬ್ರಿಟಿಗಳು , ಗಣ್ಯರು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳ್ತಿದ್ದಾರೆ.. ಅಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಪುನೀತ್ ರಾಜ್ ಕುಮಾರ್ ಅವರ ಮನೆಗೆ ತೆರಳಿದ್ದರು. ಸಿಎಂಗೆ ಸಚಿವ ಆರ್.ಅಶೋಕ್, ಅಶ್ವತ್ಥನಾರಾಯಣ ಹಾಗೂ ಹಲವರು ಸಾಥ್ ನೀಡಿದ್ದರು. ಇವರೆಲ್ಲರ ಜೊತೆಗೆ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ತೆರಳಿದ ಸಿಎಂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ಜೊತೆಗೆ ಮಾತನಾಡಿ, ಅವರಿಗೆ ಸಾಂತ್ವನ ಹೇಳಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಪ್ಪು ಸರ್ವರಿಗೂ ಪ್ರಿಯರಾದವರು, ಅವರ ಕುಟುಂಬ ಅತೀವ ದುಃಖದಲ್ಲಿದೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಅವರಿಗೆ ಭರವಸೆ ನೀಡಿದ್ದೇವೆ. ಸರ್ಕಾರ ಅವರಿಗೆ ನೀಡಿದ ಭರವಸೆಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಆದರೆ ಅದು ನಮ್ಮ ಕರ್ತವ್ಯವಾಗಿತ್ತು ಎಂದು ಹೇಳಿದರು. ಅಪ್ಪು ಸಾವಿನ ತನಿಖೆ ಆಗಬೇಕೆಂದು ಕೆಲವರ ಒತ್ತಾಯದ ಬಗ್ಗೆ ಮಾತನಾಡಿದ ಸಿಎಂ, ಈಗ ಅವರ ಕುಟುಂಬದ ಸದಸ್ಯರು ಬಹಳ ದುಃಖದಲ್ಲಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡಿಲ್ಲ. ನವೆಂಬರ್ 16 ರ ಕಾರ್ಯಕ್ರಮದ ಬಳಿಕ ನಾನು ಅವರ ಜೊತೆ ಮಾತನಾಡುತ್ತೇನೆ ಎಂದರು.