ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯ
ಪುನೀತ್ ರಾಜ್ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 11 ದಿನ ಆಗಿದೆ. ಇಂದು 11ನೇ ದಿನದ ಕಾರ್ಯವನ್ನು ದೊಡ್ಮನೆ ಕುಟುಂಬ ನೆರವೇರಿಸಲಿದೆ. ಇನ್ನೂ ಕಾರ್ಯದಲ್ಲಿ ಕೇವಲ ಕುಟುಂಬಸ್ಥರಿಗೆ ಮಾತ್ರವೇ ಪ್ರವೇಶಕ್ಕೆ ವಕಾಶ ಕಲ್ಪಿಸಲಾಗಿದೆ. ಈಗಾಗಲೇ ರಾಘವೇಂದ್ರ ರಾಜ್ಕುಮಾರ್ , ಶಿವಣ್ಣ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ನಡೆಸಿಕೊಂಡಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಮುಂದಾಳತ್ವದಲ್ಲಿ 11 ನೇ ದಿನದ ಕಾರ್ಯ ಮಾಡಲು ಸಲಕ ಸಿದ್ಧತೆ ನಡೆಯುತ್ತಿದೆ.
ಅಪ್ಪು ಸಮಾಧಿಯನ್ನು ಹೂವುಗಳಿಂದ ಅಲಂಕೃತಗೊಳಿಸಲಾಗಿದೆ. ಅಪ್ಪುವಿನ ಇಷ್ಟದ ಆಹಾರವನ್ನು ಸಮಾಧಿಯ ಎದುರು ಇಡಲಾಗಿದೆ. ಮಣ್ಣಿನ ಹಣತೆಯನ್ನು ಹಚ್ಚಲಾಗಿದೆ. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಮಕ್ಕಳಾದ ವಂದಿತಾ ಹಾಗೂ ಧೃತಿ ಸಮಾಧಿ ಬಳಿಯೇ ಇದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ವಂದಿತಾಗೆ ಇಂದು ಪರೀಕ್ಷೆ ಇದೆ. ಅಪ್ಪನಿಗೆ ಪೂಜೆ ಸಲ್ಲಿಸಿ ವಂದಿತಾ ಪರೀಕ್ಷೆಗೆ ತೆರಳುವ ಸಾಧ್ಯತೆಯಿದೆ.
ಇನ್ನೂ ಶಿವರಾಜ್ ಕುಮಾರ್ ದಂಪತಿ ಅವರ ಮಕ್ಕಳು ಸಹ ಸಮಾಧಿ ಬಳಿ ಆಗಮಿಸಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೇಗೌಡ ಕುಟುಂಬ, ಅವರ ಮಕ್ಕಳಾದ ಶ್ರೀಮುರಳಿ, ರಾಘವೇಂದ್ರ ರಾಜ್ಕುಮಾರ್ ಸಹ ಸಮಾಧಿ ಬಳಿ ಆಗಮಿಸಿದ್ದಾರೆ. ರಾಮ್ಕುಮಾರ್ ಕುಟುಂಬ , ಆಂಕರ್ ಅನುಶ್ರೀ ಸಮಾಧಿ ಬಳಿ ಆಗಮಿಸಿದ್ದಾರೆ.
ಇನ್ನೂ ಹಲವಾರು ಗಣ್ಯರು, ಪುನೀತ್ ಅವರ ಆಪ್ತರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಂಠೀರವ ಸ್ಟುಡಿಯೋಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ವರೆಗೆ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಮತ್ಯಾರ ಪ್ರವೇಶಕ್ಕೂ ಅನುಮತಿ ನೀಡಲಾಗಿಲ್ಲ. ಮಧ್ಯಾಹ್ನ 12 ಗಂಟೆಯ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ.