ಸರ್ಕಾರಕ್ಕೆ , ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದ ದೊಡ್ಮನೆಯ ಕಿರಿ ಸೊಸೆ
ಬೆಂಗಳೂರು : ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾಗ್ತಿದ್ದಂತೆ ರಾಜ್ಯಾದ್ಯಂತದಿಂದ ಅಭಿಮಾನಿಗಳು ದುಃಖದಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಲೇ ಕಂಠೀರವ ಸ್ಟೇಡಿಯಮ್ ನತ್ತ ದೌಡಾಯಿಸಿದ್ದರು.. ಈ ನಡುವೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿ ಯಾವುದೇ ನೂಕು ನುಗ್ಗಲು , ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಅಂತಿಮ ಕ್ರಿಯೆಗೆ ಸಕಲ ಸಿದ್ಧತೆಗಳನ್ನ ನೆಡಸಲು ನೆರವಾಗಿತ್ತು.
ಇಂದಿಗೆ ಅಪ್ಪು ನಮ್ಮನ್ನೆಲ್ಲ ಅಗಲಿ 11 ದಿನಗಳು ಕಳೆದಿವೆ.. ಆದ್ರೂ ಅಪ್ಪು ಅಕಾಲಿಕ ನಿಧನದ ನೋವಿನಿಂದ ಅವರ ಕುಟುಂಬ ಹಾಗೂ ಕರುನಾಡು ಹೊರ ಬಂದಿಲ್ಲ. ಇಂದಿಗೂ ದೇವರ ಅನ್ಯಾಯ ನೆನಯುತ್ತಾ ವಿಧಿಗೆ ಶಾಪ ಹಾಕ್ತಾಯಿದ್ದಾರೆ ಅಭಿಮಾನಿಗಳು.. ಇಂದು ದೊಡ್ಮನೆ ಸದಸ್ಯರು ಅಪ್ಪು 11 ನೇ ಪುಣ್ಯರಾಧನೆ ನೆರವೇರಿಸಿದ್ರು.
ಈ ನಡುವೆ ದೊಡ್ಮನೆಯ ಕಿರಿ ಸೊಸೆ , ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸರ್ಕಾರಕ್ಕೆ , ಗೃಹ ಸಚಿವರಿಗೆ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.”ಪುನೀತ್ ರಾಜ್ಕುಮಾರ್ ಅಕಾಲಿಕ ಅಗಲಿಕೆ ನಮಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು.
ನಮ್ಮ ನೋವ್ನನು ಅಡಗಿಸಿಟ್ಟು ಅವರನ್ನು ಸಕಲ ಗೌರವಗಳೊಂದಿಗೆ ಕಳಿಸಿಕೊಡುವುದು ನಮ್ಮ ಜವಾಬ್ದಾರಿ ಆಗಿತ್ತು. ಇಂಥಹಾ ಸಂದರ್ಭದಲ್ಲಿ ಇಡೀಯ ಪೊಲೀಸ್ ಇಲಾಖೆ ನಮಗೆ ಬೆಂಬಲವಾಗಿ ನಿಂತು ಗೌರವಯುತವಾಗಿ ಅವರನ್ನು ಕಳಿಸಿಕೊಡಲು ಸಹಕರಿಸಿದೆ. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ, ಮೆರವಣಿಗೆ ಮತ್ತು ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ ಎಲ್ಲೂ ಕಾನೂನು ಸುವ್ಯವಸ್ಥೆಗೆ ನಮ್ಮಿಂದ ಧಕ್ಕೆಯಾಗದಂತೆ ನೋಡಿಕೊಂಡಿದ್ದೀರಿ. ನಿಮ್ಮ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲಾ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ನಿಮ್ಮ ಎಲ್ಲಾ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು” ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್ಕುಮಾರ್.
ಸರ್ಕಾರ ಮತ್ತು ವಿಶೇಷವಾಗಿ ಪೊಲೀಸ್ ಇಲಾಖೆ ಪುನಿತ್ ರಾಜ್ಕುಮಾರ್ ನಿಧನ ಸಂದರ್ಭದಲ್ಲಿ ಬಹಳ ಬೆಂಬಲ ನೀಡಿತು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಹೇಳಿದ ಪ್ರಕಾರ, ಸುಮಾರು 20,000 ಬೆಂಗಳೂರಿನ ಪೊಲೀಸ್ ಸಿಬ್ಬಂದಿ, 1500 ಕ್ಕಿಂತಲೂ ಹೆಚ್ಚು ಜನ ಬೇರೆ ಜಿಲ್ಲೆಗಳಿಂದ ಆಗಮಿಸಿದ ಪೊಲೀಸರು. ಎರಡು ಕಂಪೆನಿ ಸೆಂಟ್ರಲ್ ಫೋರ್ಸ್, 50 ಪ್ಲಾಟೂನ್, ಕೆಎಸ್ಆರ್ಪ ತುಕಡಿ ಇವರೆಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಸಾಮಾನ್ಯ ಕಾನ್ಸ್ಟೇಬಲ್, ಹೋಮ್ಗಾರ್ಡ್ನಿಂದ ಹಿಡಿದು ಆಫೀಸರ್ ವರೆಗೆ ಎಲ್ಲರೂ ಶ್ರಮ ಪಟ್ಟಿದ್ದಾರೆ ಎಂದಿದ್ದರು ಗೃಹ ಸಚಿವರು.
ಸಿಎಂ ಬಸವರಾಜ ಬೊಮ್ಮಾಯಿ ಸಹ ಪುನೀತ್ ರಾಜ್ಕುಮಾರ್ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಜೊತೆಗೆ ಇದ್ದರು. ಪುನೀತ್ ರಾಜ್ಕುಮಾರ್ ಅವರಿಗೆ ಆಪ್ತರಾಗಿದ್ದ ಬಸವರಾಜ ಬೊಮ್ಮಾಯಿ ಭಾವುಕದ ವಿದಾಯವನ್ನು ಅಪ್ಪುಗೆ ಹೇಳಿದರು. ಅಪ್ಪು ನಿಧನವಾದ ದಿನದಿಂದ ಸತತ ಮೂರು ದಿನ ಕುಟುಂಬದ ಜೊತೆಗಿದ್ದು ಎಲ್ಲ ಕಾರ್ಯಗಳು ಸುಲಲಿತವಾಗಿ ನೆರವೇರುವಂತೆ ನೋಡಿಕೊಂಡರು. ಕಳೆದ ಶುಕ್ರವಾರ ಸಹ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಸಿಎಂ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಮತ್ತು 11ನೇ ದಿನದ ಕಾರ್ಯದ ಬಗ್ಗೆ ಚರ್ಚೆ ನಡೆಸಿ ಹೋಗಿದ್ದಾರೆ ಎಂದಿದ್ದಾರೆ.