ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ಪಿಂಚಣಿ ಮಂಜೂರಾತಿ ಆದೇಶ
ದಾವಣಗೆರೆ : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ಬರಲಿದೆ.
ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ದಾವಣಗೆರೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದಾವಣಗೆರೆಯ ಸುರಹೊನ್ನೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್.ಅಶೋಕ್, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು.
ಹೀಗಾಗಿ ಅರವತ್ತು ವರ್ಷ ಮೇಲ್ಪಟ್ಟವರು ಪಿಂಚಣಿ ಮಂಜೂರಾತಿ ಆದೇಶ ಪಡೆಯಲು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ.
ಇನ್ನು ಮುಂದೆ ಅರ್ಹರ ಮನೆ ಬಾಗಿಲಿಗೇ ಪಿಂಚಣಿ ಮಂಜೂರಾತಿ ಆದೇಶ ದೊರೆಯುವಂತೆ ಮಾಡಲಾಗುವುದು ಎಂದು ಘೋಷಿಸಿದರು.
ರಾಜ್ಯ ಸರ್ಕಾರ 60 ವರ್ಷ ವಯಸ್ಸು ಮೀರಿದವರು ಪಿಂಚಣಿಗಾಗಿ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನಿರ್ಧರಿಸಿದೆ.
ಈಗಾಗಲೆ ಕಂದಾಯ ಇಲಾಖೆ ಬಳಿ ಜನರ ಆಧಾರ್ ದಾಖಲೆಗಳಿವೆ, ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ.
ಬಿಪಿಎಲ್, ಎಪಿಎಲ್ ಕುಟುಂಬಗಳ ಮಾಹಿತಿ ಲಭ್ಯವಿದೆ. ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಇನ್ನು ಮುಂದೆ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ಪಿಂಚಣಿ ಆದೇಶ ಪತ್ರ ತಲುಪಿಸಬೇಕು.
ದಾಖಲೆಗಳನ್ನು ಕೊಡಿ ಎಂದು ಸತಾಯಿಸುವ ಸ್ಥಿತಿ ಇರಬಾರದು ಎಂದು ಹೇಳಿದರು.