ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾಲೆಳೆದು ಗೇಲಿ ಮಾಡಿದ್ದಾರೆ.
ಜುಲೈ 1 ರಂದು ಜನರು 8,500 ರೂ. ಬಂದಿದೆಯೋ ಇಲ್ವೋ ಅಂತಾ ಬ್ಯಾಂಕ್ ಖಾತೆ ಚೆಕ್ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಲೇವಡಿ ಮಾಡಿದ್ದಾರೆ.
ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ ವಿಪಕ್ಷಗಳ ಕಾಲೆಳೆದಿದ್ದಾರೆ. ಇದು ಕಾಂಗ್ರೆಸ್ ನ ಸುಳ್ಳಿನ ಸಂತೆ. ಅವರ ಸುಳ್ಳಿಗೆ ಇದೊಂದು ದೊಡ್ಡ ಉದಾಹರಣೆ. ಈ ಸುಳ್ಳಿನಿಂದ ಮಹಿಳೆಯರಿಗೆ ತುಂಬಾ ನೋವಾಗಿದೆ. ಮುಂದೆ ಮಹಿಳೆಯರೇ ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಮೀಸಲಾತಿ ವಿರೋಧಿಯಾಗಿಯೇ ಮಾತನಾಡುತ್ತಿತ್ತು. ಅಂದು ರಾಜ್ಯದ ಎಲ್ಲ ಸಿಎಂಗಳಿಗೆ ಪತ್ರ ಬರೆದು ನೆಹರು ಮೀಸಲಾತಿ ವಿರೋಧಿಸಿದ್ದರು. ಮಂಡಲ ಕಮಿಷನ್ ವರದಿ ತಡೆ ಹಿಡಿಯಲಾಗಿತ್ತು. ರಾಜೀವ್ ಗಾಂಧಿ ವಿರೋಧ ಪಕ್ಷದಲ್ಲಿದ್ದಾಗ ಮೀಸಲಾತಿ ವಿರುದ್ಧ ಮಾತನಾಡಿದ್ದರು. ಸಂಸತ್ ನ ರೆಕಾರ್ಡ್ ನಲ್ಲಿ ಕೂಡ ಈ ದಾಖಲೆ ಈಗಲೂ ಇದೆ ಎಂದು ವಾಗ್ದಾಳಿ ನಡೆಸಿದರು.
ಪರಿಸ್ಥಿತಿಯ ಐವತ್ತನೇ ವರ್ಷ. ಬಾಬು ಜಗಜೀವನ್ ರಾವ್ ಅವರಿಗೆ ಅವರ ಹಕ್ಕು ನೀಡಲಿಲ್ಲ. ತುರ್ತು ಪರಿಸ್ಥಿತಿ ಬಳಿಕ ಜಗಜೀವನ್ ರಾವ್ ಪ್ರಧಾನಿಯಾಗಬೇಕಿತ್ತು. ರಾವ್ ಪ್ರಧಾನಿಯಾಗಬಾರದು ಎಂದು ಇಂದಿರಾಗಾಂಧಿ ಹೇಳಿದ್ದರು. ಚೌಧರಿ ಚರಣ್ ಸಿಂಗ್ ವಿಚಾರದಲ್ಲಿ ಹೀಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾರೆ. ಅಧಿಕಾರಕ್ಕಾಗಿ ಸರ್ವಾಧಿಕಾರಿ ಶಾಸನ ಹೇರಲಾಯಿತು. ಕಾಂಗ್ರೆಸ್ (Congress) ಕ್ರೂರತೆಯ ಎಲ್ಲೆ ಮೀರಿ ಹೋಗಿತ್ತು. ಸರ್ಕಾರ ಬೀಳಿಸುವುದು, ಮಾಧ್ಯಮ ನಿಯಂತ್ರಣ ಮೂಲಕ ಸಂವಿಧಾನದ ವಿರುದ್ಧ ಕಾಂಗ್ರೆಸ್ ನಡೆದುಕೊಂಡಿದೆ. ದಲಿತರು, ಹಿಂದುಳಿದ ಜನರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಇದೇ ಕಾರಣಕ್ಕಾಗಿ ಅಂಬೇಡ್ಕರ್ ಅವರು ನೆಹರು ಸಂಪುಟದಿಂದ ರಾಜೀನಾಮೆ ನೀಡಿ ಹೊರ ಬಂದರು.
ಅಂಬೇಡ್ಕರ್ ರಾಜೀನಾಮೆ ನೀಡುವ ವೇಳೆ ಕಾರಣ ನೀಡಿದ್ದರು. ಆ ಕಾರಣ ಕಾಂಗ್ರೆಸ್ ಚರಿತ್ರೆ ಹೇಳುತ್ತದೆ. ಎಸ್ಸಿ, ಎಸ್ಟಿ ಜನರ ಮೇಲಿನ ದೌರ್ಜನ್ಯ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಬಳಿಕ ನೆಹರು ಅಂಬೇಡ್ಕರ್ ರಾಜಕೀಯ ಜೀವನ ಮುಗಿಸಲು ಎಲ್ಲ ಪ್ರಯತ್ನ ಮಾಡಿದರು. ಷಡ್ಯಂತ್ರ ಮಾಡಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಆ ಸೋಲಿಯ ವಿಜಯೋತ್ಸವ ಮಾಡಲಾಯಿತು, ಇದು ಒಂದು ಪತ್ರದಲ್ಲಿ ದಾಖಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
131 ವರ್ಷ ಹಿಂದೆ ಸ್ವಾಮಿ ವಿವೇಕಾನಂದ ಹೇಳಿದ್ದರು. ಇಡೀ ವಿಶ್ವಕ್ಕೆ ಸಹಿಷ್ಣುತೆ ಕಲಿಸಿದ ಧರ್ಮ ನನ್ನದು ಎಂದು. ಹಿಂದೂ ಸಹಿಷ್ಣುತೆಯ ಧರ್ಮ, ಎಲ್ಲರೂ ತನ್ನವರು ಎಂದು ಜೀವಿಸುವ ಧರ್ಮ ಅದಕ್ಕಾಗಿ ಭಾರತ ವೈವಿಧ್ಯಮಯವಾಗಿದೆ. ಆದರೆ ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ, ಗಂಭೀರ ಷಡ್ಯಂತ್ರ ಮಾಡಲಾಗುತ್ತಿದೆ. ಹಿಂದೂ ಹಿಂಸಕರು ಎಂದು ಹೇಳಿದ್ದಾರೆ. ಇದು ನಿಮ್ಮ ಆಲೋಚನೆಯಾ?. ಈ ದೇಶ ಇದನ್ನು ಎಂದಿಗೂ ಮರೆಯುವುದಿಲ್ಲ. ಶಕ್ತಿಯ ವಿನಾಶದ ಬಗ್ಗೆ ಮಾತನಾಡುತ್ತಾರೆ. ಹಿಂದೂ ಆತಂಕವಾದ ಶಬ್ದ ಬಳಕೆಯ ಪ್ರಯತ್ನ ಮಾಡಲಾಗಿದೆ. ಇವಿಎಂ, ಸಂವಿಧಾನ, ಮೀಸಲಾತಿ ಎಲ್ಲದರಲ್ಲೂ ಸುಳ್ಳು. ಇದಕ್ಕೂ ಮೊದಲು ಎಲ್ಐಸಿ, ಬಿಇಎಲ್, ರಫೇಲ್ ವಿಚಾರದಲ್ಲೂ ಸುಳ್ಳು ಹೇಳಿದರು. ಸೋಮವಾರ ಅಗ್ನಿವೀರ್ ವಿಚಾರದಲ್ಲಿ ಸದನದಲ್ಲಿ ಸುಳ್ಳು ಹೇಳಲಾಯಿತು. ಕನಿಷ್ಠ ಬೆಂಬಲ ಬೆಲೆ (MSP) ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಸದನದಲ್ಲಿ ಹೇಳುವ ಸುಳ್ಳು, ಅದರ ಗೌರವಕ್ಕೆ ಧಕ್ಕೆ ತಂದಿದೆ ಎಂದು ರಾಹುಲ್ ಗಾಂಧಿಯನ್ನು (Rahul Gandhi) ಟಾರ್ಗೆಟ್ ಮಾಡಿದರು ಎಂದು ಗುಡುಗಿದ್ದಾರೆ.