ರಾಜ್ಯ ಬಿಜೆಪಿಯ ಒಂಟಿ ಸಲಗ, ರಾಜಾಹುಲಿ, ಬಿ.ಎಸ್ ಯಡಿಯೂರಪ್ಪ ಅವರಿಗೆ ಸದ್ಯಕ್ಕೆ ಟೈಮೇ ಸರಿಯಿಲ್ಲ ಅನಿಸುತ್ತೆ. ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಿಲ್ಲ ಎಂಬಂತಾಗಿದೆ ರಾಜ್ಯ ಬಿಜೆಪಿಯ ಮಾಸ್ ಲೀಡರ್ ನ ಕಥೆ. ಇಷ್ಟು ದಿನ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ವಿಚಾರವಾಗಿ ನೊಂದು ಬೆಂದಿದ್ದ ಯಡಿಯೂರಪ್ಪ ಅವರಿಗೆ ಇದೀಗ “ಬೆಳಗಾವಿ ಸಂಕಷ್ಟ” ಎದುರಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಬೆಳಗಾವಿ ಸಂಕಷ್ಟ ಕಬ್ಬಿಣದ ಕಡಲೆಯೇ ಎನ್ನುತ್ತಿದ್ದಾರೆ. ಇಷ್ಟಕ್ಕೂ ಏನ್ ಆ ಸಂಕಷ್ಟ ಎಂದರೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ.
ಬೆಳಗಾವಿಯಲ್ಲಿ ಪ್ರತಿಷ್ಠೆಯ ರಾಜಕಾರಣ ಶುರು!
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರತಿಷ್ಠೆಯ ರಾಜಕಾರಣ ಆರಂಭವಾಗಿದೆ. ಆದ್ರೇ ಈ ಬಾರಿ ಬೆಳಗಾವಿ ಸಾಹುಕಾರ ವರ್ಸಸ್ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಅಲ್ಲ. ಬದಲಾಗಿ ಬಿಜೆಪಿಗರ ನಡುವೆಯೇ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಪೈಪೋಟಿ ಶುರುವಾಗಿದೆ. ಮಾರ್ಚ್ ನಲ್ಲಿ ನಡೆಯಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಗೆ ಈಗಿನಿಂದಲೇ ಗೇಮ್ ಪ್ಲಾನ್ ನಡೆಸಲಾಗುತ್ತಿದೆ
ಬೆಳಗಾವಿಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಮಾರ್ಚ್ ನಲ್ಲಿ ಚುನಾವಣೆ ನಡೆಯಲಿದೆ. ಇಂತಹ ಡಿಸಿಸಿ ಬ್ಯಾಂಕ್ ನಲ್ಲಿ ಸರ್ಕಾರದ ಇಬ್ಬರು ಸದಸ್ಯರು ಸೇರಿ 16 ನಿರ್ದೇಶಕರಿದ್ದಾರೆ. ಸವದಿ, ಉಮೇಶ್ ಕತ್ತಿ, ರಮೇಶ್ ಜಾರಕಿಹೊಳಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. 3 ಗುಂಪುಗಳಾಗಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಆರಂಭವಾಗಿದೆ.
ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಬ್ಯಾಂಕ್ ನ ಹಾಲಿ ಅಧ್ಯಕ್ಷರಾಗಿದ್ದಾರೆ. ಮತ್ತೆ ಅಧಿಕಾರದ ಗದ್ದುಗೆ ಏರಲು ಕತ್ತಿ ಬ್ರದರ್ಸ್ ಗೇಮ್ ಪ್ಲಾನ್ ಆರಂಭಿಸಿದ್ರೇ.. ರಮೇಶ್ ಜಾರಕಿಹೊಳಿ ಕುಮಟಳ್ಳಿಯನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಡಿಸಿಸಿ ಬ್ಯಾಂಕ್ ನಲ್ಲಿ ಹಿಡಿತ ಸಾಧಿಸಲು ಸವದಿಯಿಂದಲೂ ರಣತಂತ್ರ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಬೆಳಗಾವಿಯ ಈ ನಾಯಕರ ಹಗ್ಗಜಗ್ಗಾಟ ಸಿಎಂ ಅಂಗಳ ತಲುಪಿದ್ದು, ಬಿಎಸ್ ವೈಗೆ ಧರ್ಮ ಸಂಕಷ್ಟ ಎದುರಾಗಿದೆ. ಸಂಪುಟ ವಿಸ್ತರಣೆ ಬಳಿಕ ಪಕ್ಷದ ವಿರುದ್ಧ ಉಮೇಶ್ ಕತ್ತಿ ಮುನಿಸಿಕೊಂಡಿದ್ದಾರೆ. ಮತ್ತೊಂಡೆದೆ ಮಂತ್ರಿಗಿರಿ ತಪ್ಪಿರುವುದರಿಂದ ಮಹೇಶ್ ಕುಮಟಳ್ಳಿ ಬಹಿರಂಗವಾಗಿಯೇ ಬೇಸರ ಹೊರ ಹಾಕಿದ್ದಾರೆ. ಈ ಇಬ್ಬರ ಮನವೊಲಿಸಲು ಪಕ್ಷದಲ್ಲಿ ನಾನಾ ಪ್ರಯತ್ನಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಬಿಎಸ್ ವೈ ಯಾರೊಬ್ಬರಿಗೆ ಬೆಂಬಲ ನೀಡಿದರೂ ಮತ್ತೊಬ್ಬರು ಸಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಈ ವಿಚಾರದಲ್ಲಿ ಸುಮ್ಮನಿರುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ ಸಿಎಂ ಯಡಿಯೂರಪ್ಪ.
ಒಟ್ಟಾರೆ ಆತುರ ಆತುರವಾಗಿ ಸರ್ಕಾರ ರಚಿಸಿದ ಯಡಿಯೂರಪ್ಪ ಅವರಿಗೆ ರಾಜ್ಯದ ಸಮಸ್ಯೆಗಳಿಗಿಂತ ಪಕ್ಷದಲ್ಲಿರುವ ಸಮಸ್ಯೆಗಳೇ ಹೆಚ್ಚಾಗಿ ಕಾಡುತ್ತಿವೆ ಎನ್ನುವುದಂತೂ ಸುಳ್ಳಲ್ಲ.