ತೆಲಂಗಾಣದಲ್ಲಿ ಉದಯಿಸಲಿದೆ “ರಾಜಣ್ಣ ರಾಜ್ಯಂ”
ಹೈದರಾಬಾದ್ : ತೆಲಂಗಾಣದಲ್ಲಿ ಉದಯಿಸಲಿದೆ “ರಾಜಣ್ಣ ರಾಜ್ಯಂ”. ಕೆಸಿಆರ್ ಕೋಟೆಯಲ್ಲಿ ಬಿರುಗಾಳಿ ಎಬ್ಬಿಸೋಕೆ ಒಂಟಿಯಾಗಿ ಎಂಟ್ರಿ ಕೊಡಲಿದ್ದಾರೆ ವೈಎಸ್ ಆರ್ ಪುತ್ರಿ. ಬಂಗಾರು ತೆಲಂಗಾಣದಲ್ಲಿ ಗುಲಾಬಿ ಕಾರಿಗೆ ಡಿಚ್ಚಿ ಹೊಡೆಯೋಕೆ ಜಗನ್ ಸಹೋದರಿ ಅಖಾಡಕ್ಕೆ ಇಳಿಯಲಿದ್ದಾರೆ.
ಹೌದು..! ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸಿದ ಬಳಿಕ ಕೆ.ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಅನಭಿಶಕ್ತದೊರೆಯಂತೆ ರಾಜ್ಯವನ್ನಾಳುತ್ತಿದೆ. ಟಿಡಿಪಿ, ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೇ, ಬಿಜೆಪಿ ಇರುವ ಅವಕಾಶಗಳನ್ನ ಬಳಸಿಕೊಂಡು ಗಟ್ಟಿಯಾಗಿ ನೆಲೆಯೂರಲು ಪ್ರಯತ್ನ ನಡೆಸುತ್ತಿದೆ.
ಟಿಆರ್ ಎಸ್ ಗೆ ತೆಲಂಗಾಣದಲ್ಲಿ ಯಾವುದೇ ತೊಂದರೆ ಇಲ್ಲ. ಆದ್ರೆ ಕಮ್ಮಂ ಜಿಲ್ಲೆಯಲ್ಲಿ ನಡೆದ ಒಂದು ಸಭೆ ಕೆಸಿಆರ್ ನಿದ್ದೆಗೆಡಿಸಿದೆ. ಚಂದ್ರಶೇಖರ್ ರಾವ್ ಕಟ್ಟಿಕೊಂಡಿರುವ ಕೋಟೆ ಅಲುಗಾಡಲು ಶುರುವಾಗಿದೆ.
ಯಾಕೆಂದ್ರೆ ತೆಲಂಗಾಣ ರಾಜಕೀಯ ರಣರಂಗಕ್ಕೆ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್ ರಾಜಶೇಖರ್ ರೆಡ್ಡಿ ಅವರ ಮಗಳು ಹಾಗೂ ಈಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ತಂಗಿ ವೈಎಸ್ ಶರ್ಮಿಳಾ ಸಿಂಗಲ್ ಆಗಿ ಎಂಟ್ರಿ ಕೊಡಲಿದ್ದಾರೆ.
ಇದಕ್ಕಾಗಿ ಮೊದಲ ಹೆಜ್ಜೆಯಂಬಂತೆ ಶರ್ಮಿಳಾ ಹೈದರಾಬಾದ್ ನಿಂದ ಕಮ್ಮಂ ಜಿಲ್ಲೆಗೆ ಶುಕ್ರವಾರ ಕಾರ್ ಯಾತ್ರೆ ಮೂಲಕ ಸಂಕಲ್ಪ ಸಭಾ ಎಂಬ ಬೃಹತ್ ಸಮಾವೇಶ ನಡೆಸಿದ್ದಾರೆ.
ಈ ಸಮಾವೇಶಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಿರುವುದು ಮತ್ತು ಶರ್ಮಿಳಾ ತೆಲಂಗಾಣಕ್ಕೆ ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟಿಹಾಕುವುದಾಗಿ ಘೋಷಣೆ ಮಾಡಿರುವುದು ಭಾರಿ ಚರ್ಚೆ ಕಾರಣವಾಗಿದೆ.
ಮೂಲಗಳ ಪ್ರಕಾರ ಶರ್ಮಿಳಾ ‘ರಾಜಣ್ಣ ರಾಜ್ಯಂ’ ಎಂಬ ಪಕ್ಷವನ್ನು ಜುಲೈ 8 ರಂದು ವೈಎಸ್ ರಾಜಶೇಖರ್ ರೆಡ್ಡಿ ಅವರ ಜನ್ಮದಿನದಂದು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.