ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ ಬಾರಿ ರಾಜೀನಾಮೆ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಈಗ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಪಕ್ಷದ ನಾಯಕರಿಗೆ ದೊಡ್ಡ ಮುಜುಗರ ತಂದಿಟ್ಟಿದೆ.
ತನಿಖೆ ನಡೆಯುತ್ತಿರುವಾಗಲೇ ಸಂಪುಟಕ್ಕೆ ತಗೊಂಡಿದ್ದು ತಪ್ಪು
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ ಅವರು ಸರ್ಕಾರದ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ 185 ಕೋಟಿ ರೂ. ಹಗರಣದ ಕೇಸ್ ಇನ್ನೂ ಜೀವಂತವಾಗಿರುವಾಗಲೇ ನಾಗೇಂದ್ರ ಅವರನ್ನು ಮತ್ತೆ ಕ್ಯಾಬಿನೇಟ್ ಗೆ ಸೇರಿಸಿಕೊಳ್ಳಬಾರದಿತ್ತು. ಯಾವ ಹಗರಣದ ತನಿಖೆ ನಡೆಯುತ್ತಿದೆಯೋ, ಅದೇ ಕಾರಣಕ್ಕೆ ಅವರು ಹಿಂದೆ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಅದೇ ಪ್ರಕರಣದ ಆಧಾರದ ಮೇಲೆ ರಾಜೀನಾಮೆ ನೀಡುವಂತಾಗಿದೆ. ಅಂದು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು ಎಂದು ರಾಜಣ್ಣ ನೇರವಾಗಿಯೇ ಹೇಳಿದ್ದಾರೆ.
ನಾಗೇಂದ್ರರನ್ನು ಬಲಿಪಶು ಮಾಡಲಾಗಿದೆ
ನಾಗೇಂದ್ರ ಅವರ ಬಗ್ಗೆ ಕರುಣೆ ವ್ಯಕ್ತಪಡಿಸಿದ ರಾಜಣ್ಣ, ಅವರನ್ನು ವ್ಯವಸ್ಥಿತವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ನಾಗೇಂದ್ರ ಕಂಡರೆ ನನಗೆ ಮರುಕವಾಗುತ್ತದೆ. ಅವರನ್ನು ಈಗಾಗಲೇ ಎರಡು ಬಾರಿ ಬಲಿಪಶು ಮಾಡಿದಂತಾಗಿದೆ. ಮೊದಲ ಬಾರಿಯ ರಾಜೀನಾಮೆ ಹಿರಿಯರ ನಿರ್ಧಾರವಾಗಿತ್ತು, ಆದರೆ ಈ ಬಾರಿ ಅವರನ್ನು ಅನವಶ್ಯಕವಾಗಿ ಇಂತಹ ಪರಿಸ್ಥಿತಿಗೆ ದೂಡಲಾಗಿದೆ. ನಾಗೇಂದ್ರ ಇನ್ನೂ ಯುವ ನಾಯಕ, ಇಂತಹ ಬೆಳವಣಿಗೆಗಳಿಂದ ಅವರಿಗೆ ರಾಜಕೀಯದ ಮೇಲೆಯೇ ಜಿಗುಪ್ಸೆ ಬರುತ್ತದೆ. ಈ ಪ್ರಕ್ರಿಯೆ ಸರಿಯಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ ರಾಜಣ್ಣ, ನಾವು 50 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಹೋರಾಟ ಮಾಡಿಕೊಂಡು ಬಂದವರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಡಿಲಿಮಿಟೇಶನ್ ಆದ ನಂತರ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ನಾನು ಈಗಲೂ ಕಾಂಗ್ರೆಸ್ ನಲ್ಲಿದ್ದೇನೆ, ಮುಂದೆಯೂ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದರು.
ದೇವೇಗೌಡರ ಭೇಟಿ ಕೇವಲ ಸೌಜನ್ಯ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ವಿಚಾರಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ಅವರು ಮನವಿ ಮಾಡಿದರು. ಚೆನ್ನಮ್ಮನವರು ನಿಧನರಾದಾಗ ನಾನು ಹೊಳೆನರಸೀಪುರಕ್ಕೆ ಹೋಗಿದ್ದೆ. ಅವರು ವಿದೇಶದಿಂದ ಬಂದ ಮೇಲೆ ಸೌಜನ್ಯಕ್ಕಾಗಿ ಭೇಟಿ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ಸ್ವಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಾಜಣ್ಣ ಅವರ ಈ ಶಾಕಿಂಗ್ ಹೇಳಿಕೆ ಸರ್ಕಾರದ ಮುಂದಿನ ನಡೆಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.







