ಬೆಂಗಳೂರು: ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶನಿವಾರ ಮುಂದೂಡಿಕೆಯಾಗಿದೆ.
ಶನಿವಾರ ಬೆಳಗ್ಗೆ 10:30 ಕ್ಕೆ ವಿಚಾರಣೆ ನಿಗದಿಯಾಗಿದೆ. ಆಪಾದಿತ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಕುರಿತು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸ್ವಯಂ ಪ್ರೇರಣೆಯಿಂದ ವರ್ತಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಅವರು ಸಂಪುಟದ ಇಚ್ಛೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಸಿಎಂ ಪರ ಹಿರಿಯ ವಕೀಲ ಹಾಗೂ ಸಂಸದ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದು. ಈ ವೇಳೆ ದೂರುದಾರರಿಗೆ ದಂಡ ವಿಧಿಸುವಂತೆ ಕೋರ್ಟ್ ಗೆ ಮನವಿ ಮಾಡಿದರು.
ಕಳೆದ ಬಾರಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಬಗ್ಗೆ ವಾದ ಮಂಡನೆ ಮಾಡಿದ್ದೆ. 17ಎ ಬಗ್ಗೆ ಉಲ್ಲೇಖಿಸಿ ವಾದ ಮಂಡನೆ ಮಾಡಿದ್ದೆ. 17ಎ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೆಲಸ ಮಾಡುತ್ತದೆ ಎಂಬುದನ್ನು ಉಲ್ಲೇಖಿಸಿ ವಾದಿಸಿದರು. 17ಎ ಅನುಮತಿಯನ್ನು ತನಿಖಾ ಸಂಸ್ಥೆ ಪಡೆಯೋದು. ರಾಜ್ಯಪಾಲರಿಗೆ ಈ ಬಗ್ಗೆ ಅಧಿಕಾರ ಇರುವುದಿಲ್ಲ ಎಂದು ಅಭಿಷೇಕ್ ಮನುಸಿಂಘ್ವಿ, ಸುಪ್ರೀಂ ಕೋರ್ಟ್ ನ ಕೆಲವು ಆದೇಶಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.
ಸುಳ್ಳು ಮಾಹಿತಿ ನೀಡಿರೋ ಅಬ್ರಹಾಂಗೆ ರಾಜ್ಯಪಾಲರು ದಂಡ ವಿಧಿಸಬೇಕಿತ್ತು. ಅದನ್ನು ಬಿಟ್ಟು ದೂರುದಾರರಿಗೆ ಅವಕಾಶ ನೀಡಿದ್ದಾರೆ. ಸಮಯ ವ್ಯರ್ಥ ಮಾಡುತ್ತಿರುವುದಕ್ಕೆ ಅಬ್ರಹಾಂಗೆ ದಂಡ ವಿಧಿಸಬೇಕು. ಅಬ್ರಹಾಂಗೆ ಅರ್ಜಿ ಹಿಂಪಡೆಯಲು ಸೂಚಿಸಿ, ರಾಜ್ಯಪಾಲರು ದಂಡ ವಿಧಿಸಬೇಕು. ಆನಂತರ ಈ ನ್ಯಾಯಾಲಯ ದಂಡ ವಿಧಿಸಬೇಕು. ಲೋಕಾಯುಕ್ತರಿಗೂ ಅಬ್ರಹಾಂ ದೂರು ನೀಡಿದ್ದಾರೆ.
ಉಳಿದ ಇಬ್ಬರ ದೂರುಗಳಿಗೆ ಸಂಬಂಧಿಸಿ ಶೋಕಾಸ್ ನೋಟಿಸ್ ನೀಡಿಲ್ಲ. ತರಾತುರಿಯಲ್ಲಿ ವಿವೇಚನೆ ಬಳಸದೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ ಅವರ ಪ್ರಾಸಿಕ್ಯೂಷನ್ ಪರ್ಮಿಷನ್ ಆಗಿಲ್ಲ. ರಾಜ್ಯಪಾಲರು ಆ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಸಿಂಘ್ವಿ ಆರೋಪಿಸಿದ್ದಾರೆ.








