ಮಂಗಳೂರು: ಉತ್ತರ ಪತ್ರಿಕೆಯಲ್ಲಿ ಕಡಿಮೆ ಅಂಕ ಬಂದರೆ ಕೆಲವು ಹೊತ್ತು ಅಥವಾ ಒಂದೆರಡು ದಿನ ಬೇಸರ ಇರುತ್ತದೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿನಿ ಕೋಪವನ್ನು ಬೇರೆ ರೀತಿಯಲ್ಲಿ ತೀರಿಸಿಕೊಂಡಿದ್ದಾಳೆ.
ಸಿಟ್ಟಿನಿಂದ ಶಿಕ್ಷಕಿಯ ವಾಟರ್ ಬಾಟ್ಲಿಗೆ ಮಾತ್ರೆಯನ್ನು ವಿದ್ಯಾರ್ಥಿನಿ ಹಾಕಿದ್ದಾಳೆ. ಈ ಘಟನೆ ಮಂಗಳೂರಿನ ಉಳ್ಳಾಲದ ಶಾಲೆಯಲ್ಲಿ ನಡೆದಿದೆ. ಆ ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಗಣಿತ ವಿಷಯದಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಒಂದು ಅಂಕ ಕಡಿಮೆ ಕೊಟ್ಟಿದ್ದರು. ಇದರಿಂದ ವಿದ್ಯಾರ್ಥಿನಿ ಆಕ್ರೋಶಗೊಂಡಿದ್ದಳು.
ಸರಿ ಉತ್ತರಕ್ಕೆ ಮಾರ್ಕ್ಸ್ ನೀಡಿಲ್ಲ ಎಂದು ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಕೋಪದಲ್ಲಿದ್ದಳು. ಸಿಟ್ಟಿನಿಂದ ಶಿಕ್ಷಕಿಗೆ ಏನಾದರೂ ಮಾಡಬೇಕೆಂದು ಇನ್ನೊಬ್ಬ ವಿದ್ಯಾರ್ಥಿನಿಯ ಜೊತೆ ಸೇರಿ ಶಿಕ್ಷಕಿಯ ನೀರಿನ ಬಾಟಲ್ ಗೆ ಅವಧಿ ಮುಗಿದ ಮಾತ್ರೆ ಹಾಕಿದ್ದಾರೆ. ಅರಿಯದ ಗಣಿತ ಶಿಕ್ಷಕಿ ಹಾಗೂ ಸಹ ಶಿಕ್ಷಕಿ ನೀರು ಸೇವನೆ ಮಾಡಿದ್ದಾರೆ. ನೀರು ಕುಡಿದ ಕೆಲ ಹೊತ್ತಿನ ನಂತರ ಅವರ ಮುಖ ಊದಿಕೊಳ್ಳಲು ಆರಂಭವಾಗಿದೆ. ಇದೇ ನೀರು ಕುಡಿದಿದ್ದ ಮತ್ತೋರ್ವ ಶಿಕ್ಷಕಿ ಅಸ್ವಸ್ಥರಾಗಿದ್ದಾರೆ.
6 ನೇ ತರಗತಿ ವಿದ್ಯಾರ್ಥಿನಿಯರ ಈ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿನಿಯರ ವಿರುದ್ಧ ಕ್ರಮಕೊಳ್ಳಲಾಗಿದೆ.