ಬೆಂಗಳೂರು: ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪೈಪೋಟಿಯೂ ಶುರುವಾಗಿದೆ.
ಶಿರಾ ಶಾಸಕರಾಗಿ ಜೆಡಿಎಸ್ನಿಂದ ಆಯ್ಕೆಯಾಗಿದ್ದ ಬಿ.ಸತ್ಯನಾರಾಯಣ ಹೆಮ್ಮಾರಿ ಕೊರೊನಾಗೆ ಮೃತಪಟ್ಟಿದ್ದರು. ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ನ.3ಕ್ಕೆ ಉಪ ಚುನಾವಣೆ ನಡೆಯಲಿದೆ. ಆದೇ ರೀತಿ ಮುನಿರತ್ನ ರಾಜೀನಾಮೆಯಿಂದ ತೆರವಾಗಿರುವ ಆರ್.ಆರ್ ನಗರಕ್ಕೂ ಅಂದೇ ಉಪಕದನ ನಡೆಯಲಿದೆ.
ಶಿರಾದಲ್ಲಿ ಟಿಕೆಟ್ ಲೆಕ್ಕಾಚಾರ
ಜೆಡಿಎಸ್ನಿಂದ ದಿವಂಗತ ಬಿ.ಸತ್ಯನಾರಾಯಾಣ ಅವರ ಪತ್ನಿ ಅಥವಾ ಪುತ್ರ ಸತ್ಯಪ್ರಕಾಶ್ಗೆ ಟಿಕೆಟ್ ನೀಡಲು ದೇವೇಗೌಡ ಹಾಗೂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು ಡಾ.ರಾಜೇಶ್ಗೌಡ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಶಿರಾಕ್ಕೆ ಭೇಟಿ ನೀಡಲಿದ್ದಾರೆ.


ನಾಳೆ ಬೆಳಿಗ್ಗೆ 11ಗಂಟೆಗೆ ಶಿರಾ ಜೆಡಿಎಸ್ ಕಚೇರಿಯಲ್ಲಿ ಸಭೆ ಕರೆದಿದ್ದು, ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ಸಂಜೆ ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ ಕರೆದಿರುವ ದೇವೇಗೌಡರು, ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲಿದ್ದಾರೆ.
ಕಾಂಗ್ರೆಸ್ನಿಂದ ಶಿರಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಹೆಸರು ಘೋಷಣೆಯಾಗಿದ್ದು, ಎಐಸಿಸಿಯಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ. ಆದರೆ, ಬಿಜೆಪಿಯಲ್ಲಿ ಇಬ್ಬರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಸ್.ಅರ್ ಗೌಡ, ಬಿ.ಕೆ ಮಂಜುನಾಥ್ ಶಿರಾ ಟಿಕೆಟ್ಗಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಜೆಡಿಎಸ್ ಡಾ. ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡದಿದ್ದರೆ ಅವರು ಬಿಜೆಪಿಗೆ ಜಂಪ್ ಮಾಡುವ ಸಾಧ್ಯತೆ ಇದೆ. ಬಿಜೆಪಿ ಸೇರಿದರೆ ರಾಜೇಶ್ಗೌಡಗೆ ಟಿಕೆಟ್ ಲೆಕ್ಕಾಚಾರ ಉಲ್ಟಾ ಆಗಲಿದೆ ಎನ್ನಲಾಗಿದೆ.
ಆರ್.ಆರ್ ನಗರಕ್ಕೆ ಆಕಾಂಕ್ಷಿಗಳು ಯಾರು..!
ಆರ್.ಆರ್ ನಗರ ನಿರ್ಮಾಪಕ ಮುನಿರತ್ನ ಆಯ್ಕೆಯಾಗಿದ್ದ ಕಾಂಗ್ರೆಸ್ನ ಭದ್ರಕೋಟೆ. ಶಾಸಕ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಆಪ್ತರಾಗಿದ್ದ ಮುನಿರತ್ನ ಆರ್.ಆರ್ ನಗರದಲ್ಲಿ ಸುಲಭವಾಗಿ ಗೆಲ್ಲುತ್ತಾ ಬಂದಿದ್ದರು.



ಆದರೆ, ತಮ್ಮ ರಾಜಕೀಯ ಗುರುಗಳಿಗೆ ಟಕ್ಕರ್ ಕೊಟ್ಟ ಮುನಿರತ್ನ, ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಆಪರೇಶನ್ ಕಮಲಕ್ಕೆ ಒಳಗಾದರು. ಮೈತ್ರಿ ಸರ್ಕಾರ ಬೀಳಿಸಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಯಲ್ಲಿ ಮುನಿರತ್ನ ಪಾತ್ರ ಇದೆ. ಹೀಗಾಗಿ ಆರ್.ಆರ್ ನಗರ ಕ್ಷೇತ್ರಕ್ಕೆ ನನಗೇ ಬಿಜೆಪಿ ಟಿಕೆಟ್ ಪಕ್ಕಾ ಎನ್ನುತ್ತಿದ್ದಾರೆ ಮುನಿರತ್ನ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗಲು ತನಗೆ ಟಿಕೆಟ್ ಪಕ್ಕಾ ಆಗಿದೆ ಎನ್ನುತ್ತಾರೆ.
ಮುನಿರತ್ನ ವಿರುದ್ಧ ಸೆಡ್ಡು ಹೊಡೆದಿದ್ದ ಬಿಜೆಪಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಕೂಡ ನಾನೇ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎನ್ನುತ್ತಿದ್ದಾರೆ. ಮುನಿರತ್ನ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ತುಳಸಿ ಮುನಿರಾಜುಗೌಡ ಮುನಿರತ್ನಗೆ ಬಿಸಿ ತುಪ್ಪ.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ನನಗೆ ಟಿಕೆಟ್ ಸಿಗುತ್ತೆ, ನಾನೇ ಬಿಜೆಪಿ ಅಭ್ಯರ್ಥಿ. ಮುನಿರತ್ನಗೆ ಬಿಜೆಪಿ ಟಿಕೆಟ್ ಕೊಡಲ್ಲ. ನಾನು ಸ್ಪರ್ಧೆ ಮಾಡುವುದಂತೂ ಪಕ್ಕಾ ಎನ್ನುತ್ತಿದ್ದಾರೆ ತುಳಸಿ ಮುನಿರಾಜಗೌಡ.
ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಹೇಳಿ ಕೇಳಿ ಆರ್.ಆರ್ ನಗರ ಸಂಸದ ಡಿ.ಕೆ ಸುರೇಶ್ ಪ್ರಭಾವ ಹೊಂದಿರುವ ಕ್ಷೇತ್ರ. ಹೀಗಾಗಿ ಸಿದ್ದರಾಮಯ್ಯ ಆಪ್ತ ರಾಜಕುಮಾರ್ ಅಥವಾ ಡಿಕೆಶಿ ಆಪ್ತ ಹನುಮಂತರಾಯಪ್ಪ ಟಿಕೆಟ್ ಆಕ್ಷಾಂಕ್ಷಿಗಳು ಎನ್ನಲಾಗಿದೆ. ಸಂಸದ ಡಿಕೆ ಸುರೇಶ್ ಆಪ್ತ ರವಿಗೌಡ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಜೆಡಿಎಸ್ನಿಂದ ಮಾಜಿ ಐಎಎಸ್ ಅಧಿಕಾರಿ ಡಿ.ಕೆ ರವಿ ಮಾವ ಹನುಮಂತರಾಯಪ್ಪಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. 2018ರಲ್ಲಿ 50 ಸಾವಿರ ಮತಗಳಿಂದ ಹನುಮಂತರಾಯಪ್ಪ ಸೋಲು ಕಂಡಿದ್ದರು. ಹೀಗಾಗಿ ನಾಳೆ ಸಂಜೆ ನಡೆಯುವ ಜೆಡಿಎಸ್ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುವ ಸಾಧ್ಯತೆ ಇದೆ.
ಡಿಕೆಶಿಗೆ ಅಗ್ನಿ ಪರೀಕ್ಷೆಯಾಗುತ್ತಾ ಉಪಚುನಾವಣೆ..!
ಹೌದು. ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಶಿರಾ ಹಾಗೂ ಆರ್.ಆರ್ ನಗರ ಕ್ಷೇತ್ರಗಳ ಉಪಚುನಾವಣೆ ಡಿ.ಕೆ ಶಿವಕುಮಾರ್ ಅವರಿಗೆ ಅಕ್ಷರಶಃ ಅಗ್ನಿ ಪರೀಕ್ಷೆಯಾಗಲಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲಿಸಿಕೊಂಡು ತಮ್ಮ ಸಾಮಥ್ರ್ಯ ಪ್ರದರ್ಶನಕ್ಕೆ ಉಪಚುನಾವಣೆ ವೇದಿಕೆಯಾಗಲಿದೆ.








