‘ಕೇಸರಿ’ ಮಾಸ್ಕ್ ಧರಿಸಿದ್ದಕ್ಕೆ ಆಕ್ಷೇಪ : ಕಾರ್ಯಕರ್ತರ ಕಿತ್ತಾಟ
ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣಾ ಮತದಾನದ ವೇಳೆ ಕೆಲವರು ಕೇಸರಿ ಮಾಸ್ಕ್ ಧಾರಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಆರ್ ಆರ್ ಕ್ಷೇತ್ರದ ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಪ್ಯಾರಾಮಿಲಿಟರಿ ಫೋರ್ಸ್ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಮಾಸ್ಕ್ ಬದಲಿಸುವಂತೆ ಪಟ್ಟು ಹಿಡಿದಿದ್ದಾರೆ. ಮೊದಲಿಗೆ ಕೇಸರಿ ಮಾಸ್ಕ್ ಬದಲಿಸಲು ಒಪ್ಪದ ಪ್ಯಾರಾ ಮಿಲಿಟರಿ ಸಿಬ್ಬಂದಿ, ಕೊನೆಗೆ ಅನಿವಾರ್ಯವಾಗಿ ಮಾಸ್ಕ್ ಬದಲಿಸಿದ್ದಾರೆ.
ಇದಲ್ಲದೇ ಇದೇ ಮತಗಟ್ಟೆಯಿಂದ ನೂರು ಮೀಟರ್ ಆಚೆ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಕೇಸರಿ ಮಾಸ್ಕ್ ಧರಿಸಿದ್ದರು. ಇದನ್ನು ಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ಬದಲಿಸುವಂತೆ ಹೇಳಿದ್ರು. ಈ ವೇಳೆ ವಾಗ್ವಾದ ಆರಂಭವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕೇಸರಿ ಮಾಸ್ಕ್ ತೆಗೆಸಿದ್ದಾರೆ.
ಆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಸರ್ಜಿಕಲ್ ಮಾಸ್ಕ್ ನೀಡಿದ್ರು.
ಟೇಬಲ್ ಹಾಕುವ ವಿಚಾರಕ್ಕೆ ಕಿತ್ತಾಟ
ಮಾಸ್ಕ್ ವಿಚಾರಕ್ಕೆ ಅಲ್ಲದೇ ಟೇಬಲ್ ಹಾಕುವ ವಿಚಾರಕ್ಕೂ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ಮಧ್ಯೆ ಗಲಾಟೆ ನಡೆದಿದೆ. ಆರ್. ಆರ್. ನಗರ ವ್ಯಾಪ್ತಿಯ ಕ್ಲಾರೆಂಟ್ ಶಾಲೆ ಮತಗಟ್ಟೆ ಸಮೀಪ ಟೇಬಲ್ ಹಾಕುವ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಆರ್. ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವಿ ಕೃಷ್ಣಮೂರ್ತಿ, ಕಾಂಗ್ರೆಸ್ನಿಂದ ಹೆಚ್. ಕುಸುಮಾ, ಬಿಜೆಪಿಯಿಂದ ಮುನಿರತ್ನ ಅಭ್ಯರ್ಥಿಗಳಾಗಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವನ್ನು ನೀಡಲಾಗಿದೆ.
ನ್ನು ರಾಜರಾಜೇಶ್ವರಿ ನಗರದಲ್ಲಿ ಈಗಾಗಲೇ ಮತದಾನ ಆರಂಭವಾಗಿದ್ದು, 11 ಗಂಟೆಯವರೆ 14.44 ರಷ್ಟು ಮತದಾನ ನಡೆದಿದೆ. ಕೊರೊನಾ ಹಿನ್ನೆಲೆ ಸಾಮಾಜಿಕ ಅಂತರಕ್ಕೆ ಮಾಕಿರ್ಂಗ್ ಹಾಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಮತದಾನಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಟೆಸ್ಟಿಂಗ್ ಮೂಲಕ ಜ್ವರ ತಪಾಸಣೆ ನಡೆಸಿ ಸ್ಯಾನಿಟೈಜರ್ ಹಾಕಿ ಮತಗಟ್ಟೆಗಳ ಒಳಗೆ ಬಿಡಲಾಗುತ್ತಿದೆ.
ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೂ ಒಂದು ಹ್ಯಾಂಡ್ ಗ್ಲೌಸ್ ನೀಡಲಾಗುತ್ತದೆ. ಜತೆಗೆ ಮತದಾನಕ್ಕೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮತದಾರರು ಮಾಸ್ಕ್ ತರದೇ ಹೋದರೆ ಅಲ್ಲೇ ಮಾಸ್ಕ್ ನೀಡಿ ಮತಗಟ್ಟೆಗೆ ಪ್ರವೇಶ ನೀಡಲಾಗುತ್ತಿದೆ.