ಬೆಂಗಳೂರು, ಸೆ.24: ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್. ಎಲ್ ಭೈರಪ್ಪ (S. L. Bhyrappa) ಅವರು ನಿಧನರಾಗಿದ್ದಾರೆ. 94 ವರ್ಷದ ಎಸ್ ಎಲ್ ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್ ಇದ್ದಾರೆ.
ಎಸ್ ಎಲ್ ಬೈರಪ್ಪ ಅವರ ಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1934 ಆಗಸ್ಟ್ 20ರಂದು ಲಿಂಗಣ್ಣಯ್ಯ-ಗೌರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಎಸ್ ಎಲ್ ಭೈರಪ್ಪ ಅವರು ಐದು ವರ್ಷದವರಾಗಿದ್ದಾಗ ಅವರ ತಾಯಿ ಪ್ಲೇಗ್ಗೆ ಬಲಿಯಾದರು. ಇದಾದ ನಂತರ ಬೈರಪ್ಪ ಅವರಿಗೆ ಜೀವನದ ದಿಕ್ಕೇ ಕಾಣದಂತೆ ಆಯ್ತು. ಇದಾದ ನಂತರ ತಮ್ಮ ಜೀವನವನ್ನು ತಾವೇ ಕಟ್ಟಿಕೊಳ್ಳಲು ಮುಂದಾದರು. ಗಾಂಧೀಜಿಯವರಿಂದ ಪ್ರಭಾವಿತರಾದ ಇವರು ಸ್ವಾತಂತ್ರ್ಯ ಚಳುವಳಿಯಲ್ಲೂ ಸಹ ಭಾಗಿಯಾಗಿದ್ದರು.
ಬಾಗೂರು, ನುಗ್ಗೇಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ, ಮೈಸೂರಿನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಚಿನ್ನದ ಪದಕಗಳೊಂದಿಗೆ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ಬರೋಡದ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ‘ಸತ್ಯ ಮತ್ತು ಸೌಂದರ್ಯ’ ಪ್ರಬಂಧಕ್ಕೆ ಪಿ.ಎಚ್ಡಿ ಪದವಿ ಪಡೆದ ನಂತರ ಅವರು, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜು, ಗುಜರಾತ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ಇದಾದ ನಂತರ ಅವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದರು. 1961 ರಲ್ಲಿ ಧರ್ಮಶ್ರೀ ಎಂಬ ಕಾದಂಬರಿ ಪ್ರಕಟಿಸಿದರು. ಇದಾದ ನಂತರ ಒಟ್ಟು ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ. ಕೆಲವು ಪತ್ರಿಕೆಗಳಲ್ಲಿ ಪ್ರಕಟ ಆಗುತ್ತಿದ್ದ ಇವರ ಲೇಖನಗಳು ನಾಡಿನ ಜನರ ಅಂತಃಕರಣವನ್ನು ಮುಟ್ಟಿವೆ. ಇವರ ಈ ಎಲ್ಲಾ ಸಾಧನೆಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ನಡುವೆ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಪಡೆದಿವೆ. ಇದರೊಂದಿಗೆ ವಂಶವೃಕ್ಷಕ್ಕೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975 ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: ಎಸ್. ಎಲ್ ಭೈರಪ್ಪ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ಸಂತಾಪ
ಇವರು ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಅಪಾರ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಕಾದಂಬರಿಗಳು
- ಭೀಮಕಾಯ
- ಬೆಳಕು ಮೂಡಿತು
- ಧರ್ಮಶ್ರೀ – (1961)
- ದೂರ ಸರಿದರು- (1962)
- ಮತದಾನ – (1965)
- ವಂಶವೃಕ್ಷ- (1965)
- ಜಲಪಾತ – (1967)
- ನಾಯಿ ನೆರಳು- (1968)
- ತಬ್ಬಲಿಯು ನೀನಾದೆ ಮಗನೆ-(1968)
- ಗೃಹಭಂಗ-(1970)
- ನಿರಾಕರಣ-(1971)
- ಗ್ರಹಣ-(1972)
- ದಾಟು -(1973)
- ಅನ್ವೇಷಣ-(1976)
- ಪರ್ವ-(1979)
- ನೆಲೆ -(1983)
- ಸಾಕ್ಷಿ -(1986)
- ಅಂಚು-(1990)
- ತಂತು -(1993)
- ಸಾರ್ಥ-(1998)
- ಮಂದ್ರ-(2001)
- ಆವರಣ-(2007)
- ಕವಲು – (2010)
- ಯಾನ – (2014)
- ಉತ್ತರಕಾಂಡ-(2017)
ಆತ್ಮ ಚರಿತ್ರೆ
- ಭಿತ್ತಿ
ತತ್ತ್ವಶಾಸ್ತ್ರ
- ಸತ್ಯ ಮತ್ತು ಸೌಂದರ್ಯ (1966) – ಪಿ.ಎಚ್.ಡಿ ಪ್ರಬಂಧ
- ಸಾಹಿತ್ಯ ಮತ್ತು ಪ್ರತೀಕ (1967)
- ಕಥೆ ಮತ್ತು ಕಥಾವಸ್ತು (1979)
- ಸಂದರ್ಭ: ಸಂವಾದ (2011)
ಇತರೆ
- ನಾನೇಕೆ ಬರೆಯುತ್ತೇನೆ? (1980)
ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು
- ಧರ್ಮಶ್ರೀ – ಸಂಸ್ಕೃತ, ಮರಾಠಿ
- ವಂಶವೃಕ್ಷ – ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್ನಾ
- ಯಿ ನೆರಳು – ಗುಜರಾತಿ, ಹಿಂದಿ
- ತಬ್ಬಲಿಯು ನೀನಾದೆ ಮಗನೆ – ಹಿಂದಿ
- ಗೃಹಭಂಗ – ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
- ನಿರಾಕರಣ -ಹಿಂದಿ
- ದಾಟು – ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
- ಅನ್ವೇಷಣ -ಹಿಂದಿ, ಮರಾಠಿ
- ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು
- ನೆಲೆ -ಹಿಂದಿ
- ಸಾಕ್ಷಿ – ಹಿಂದಿ, ಇಂಗ್ಲೀಷ್
- ಅಂಚು -ಹಿಂದಿ, ಮರಾಠಿ
- ತಂತು -ಹಿಂದಿ, ಮರಾಠಿ
- ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ
- ನಾನೇಕೆ ಬರೆಯುತ್ತೇನೆ -ಮರಾಠಿ
- ಸತ್ಯ ಮತ್ತು ಸೌಂದರ್ಯ -ಇಂಗ್ಲೀಷ್ಭಿ
- ತ್ತಿ -ಹಿಂದಿ, ಮರಾಠಿ
ಚಲನಚಿತ್ರವಾಗಿರುವ ಕಾದಂಬರಿಗಳು
- ವಂಶವೃಕ್ಷ – 1972
- ತಬ್ಬಲಿಯು ನೀನಾದೆ ಮಗನೆ – 1977
- ಮತದಾನ – 2001
- ನಾಯಿ ನೆರಳು – 2006
ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು
- ಗೃಹಭಂಗ
- ದಾಟು (ಹಿಂದಿ)
ಪ್ರಶಸ್ತಿ/ಗೌರವಗಳು
- 2023 ರಲ್ಲಿ ಪದ್ಮಭೂಷಣ ಪ್ರಶಸ್ತಿ
- ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ – 2014
- ನಾಡೋಜ ಪ್ರಶಸ್ತಿ – 2011
- ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- 2010
- ಪಂಪ ಪ್ರಶಸ್ತಿ – 2005
- ಎನ್ ಟಿ ಆರ್ ರಾಷ್ಟ್ರೀಯ ಪ್ರಶಸ್ತಿ- 2007
- ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- 2007
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- 1975
- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -1966
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








