ಕೊರೊನಾಗೆ ಬಲಿಯಾದ ಸ್ಯಾಂಡಲ್ ವುಡ್ ನ ಯುವ ನಿರ್ಮಾಪಕ ರಾಜಶೇಖರ್
ಕನ್ನಡ ಸಿನಿಮಾರಂಗದ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಸತೀಶ್ ನಟನೆಯ ನೀನಾಸಂ ಪೆಟ್ರೋಮ್ಯಾಕ್ಸ್ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದ ರಾಜಶೇಖರ್ ಪೆಟ್ರೋಮ್ಯಾಕ್ಸ್ ಬಿಡುಗಡೆಗೂ ಮೊದಲೇ ವಿಧಿವಶರಾಗಿದ್ದಾರೆ. ಇನ್ನೂ ರಾಜಶೇಖರ್ ನಿಧನಕ್ಕೆ ಸತೀಶ್ ನೀನಾಸಂ ಸಂತಾಪ ಸೂಚಿಸಿದ್ದಾರೆ.
‘ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಕಾಂಕ್ಷಿ. ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಜನಗಳ ಪ್ರೀತಿ ಎಲ್ಲವೂ ಇತ್ತು. ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಆಸೆ ಹೊತ್ತಿದ್ದರು. ಯಾವಾಗಲು ನಗುತ್ತ ಕೂರುತ್ತಿದ್ದ, ನೆನಪುಗಳನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂದೆ ಆಗುತ್ತೆ.’
‘ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು ಕಾರು ಹತ್ತಿಸಿ ನಾವು ಗೆಲ್ತೀವಿ, ನಡೀರಿ ಸಾರ್ ನೆಮ್ಮದಿಯಾಗಿ ನಿದ್ದೆ ಮಾಡಿ. ಎಂದು ಚಿರನಿದ್ರೆಗೆ ಜಾರಿದ ರಾಜು ಇದು ತಪ್ಪಲ್ಲವೇ. ಅಂತಿಮ ನಮನಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ. ಕ್ಷಮಿಸಿ’ ಎಂದು ಬರೆದುಕೊಂಡಿದ್ದಾರೆ.