77ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಹಿನ್ನೆಲೆಯಲ್ಲಿ ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಲಾಗಿದ್ದು, ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನದಂದು ಶಾಂತಿಯನ್ನು ಕದಡಲು ಭಯೋತ್ಪಾದಕರು ನುಸುಳಲು ಪ್ರಯತ್ನಿಸಬಹುದು ಎನ್ನುವ ಆಲೋಚನೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಕಳೆದ ಒಂದು ತಿಂಗಳಲ್ಲಿ 12ಕ್ಕೂ ಅಧಿಕ ಜನರ ಒಳ ನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿವೆ. ಈ ಒಳನುಸುಳುವಿಕೆ ಪ್ರಯತ್ನಗಳಲ್ಲಿ 10ಕ್ಕೂ ಅಧಿಕ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಸಂಪೂರ್ಣ ನಿಯಂತ್ರಣ ರೇಖೆಯು ದಟ್ಟ ಅರಣ್ಯದಿಂದ ಆವೃತವಾಗಿದೆ. ಹೀಗಾಗಿ ಕಾಶ್ಮೀರ ಪ್ರದೇಶಕ್ಕೆ ಭಯೋತ್ಪಾದಕ ಗುಂಪುಗಳು ನುಸುಳಲು ಅವಕಾಶ ಸಿಗುತ್ತದೆ. ಕುಪ್ವಾರ ಜಿಲ್ಲೆ ಗಡಿಯಾಚೆಯಿಂದ ಅತಿ ಹೆಚ್ಚು ಭಯೋತ್ಪಾದಕರು ಒಳನುಸುಳುವಿಕೆ ಪ್ರಯತ್ನಗಳು ಕಂಡು ಬರುತ್ತಿವೆ. ಸ್ವಾತಂತ್ರ್ಯ ದಿನಾಚರಣೆಯನ್ನು ಸುಗಮವಾಗಿ ನಡೆಸಲು ವಿಸ್ತೃತವಾದ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಈ ಐತಿಹಾಸಿಕ ದಿನದ ಮುಖ್ಯ ಕಾರ್ಯಕ್ರಮವು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.








