ಮೈಸೂರು : ನಾನೊಬ್ಬ ಬರಹಗಾರ, ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ. ಯಾಕೆಂದರೆ 40 ವರ್ಷಗಳ ಕಾಲದಿಂದ ಈ ರಾಜಕಾರಣದ ಏರು-ಪೇರು, ಒಳ್ಳೆಯದ್ದು-ಕೆಟ್ಟದ್ದು, ಅವಕಾಶ-ಅವಕಾಶ ವಂಚನೆ ಎಲ್ಲವನ್ನೂ ನಾವು ಅನುಭವಿಸಿಕೊಂಡು ಬಂದಿದ್ದೇವೆ. ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿರುವುದು ಸ್ವಾಗತಾರ್ಹ. ಕೆಲವೊಮ್ಮೆ ನಾವು ಅಂದುಕೊಂಡಿದ್ದಕ್ಕಿಂತ ದೊಡ್ಡದು ಸಿಗುತ್ತೆ. ಕೆಲವೊಮ್ಮೆ ಏನೂ ಸಿಗುವುದಿಲ್ಲ. ರಾಜಕಾರಣ ಅಂದರೆ ಸಿಗುವುದು, ಪಡೆದುಕೊಳ್ಳೋದಲ್ಲ. ನಾಮ ನಿರ್ದೇಶನದ ಮೂಲಕ ಪರಿಷತ್ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ನನಗೂ ಕಾನೂನಿನ ಅರಿವಿದೆ. ನನ್ನನ್ನ ನಾಮನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ. ಎಂಟಿಬಿ ನಾಗರಾಜ್ ಆಯ್ಕೆಗೆ ತೊಡಕಿಲ್ಲ ಅನ್ನೋದಾದರೆ ನನಗೆ ಏಕೆ ತೊಡಕಾಗುತ್ತೆ ಎಂದು ಪ್ರಶ್ನಿಸಿದ ಅವರು, ನಮ್ಮ ಅನರ್ಹತೆ ಇದ್ದದ್ದು ಕೇವಲ ಕೆಳ ಮನೆಗೆ ಮಾತ್ರ. ಮೇಲ್ಮನೆಗೆ ಆಯ್ಕೆಯಾಗೋಕೆ ಯಾವುದೇ ಕಾನೂನಿನ ಅಡೆ-ತಡೆ ಇಲ್ಲ. ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ನಾಮ ನಿರ್ದೇಶನ ಮಾಡುವ ವಿಶ್ವಾಸ ಇದೆ ಎಂದು ಹೆಚ್.ವಿಶ್ವನಾಥ್ ಹೇಳಿದರು.