ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ ಗೆ ಏಳು ಅಭ್ಯರ್ಥಿಗಳು ಅಧಿಕೃತವಾಗಿ ಅವಿರೋಧದಿಂದ ಆಯ್ಕೆಯಾಗಿದ್ದಾರೆ. ಜೂನ್ 29 ರಂದು ನಡೆಯಬೇಕಿದ್ದ ಚುನಾವಣೆಗೆ ಬಿಜೆಪಿ ಯಿಂದ ನಾಲ್ವರು, ಕಾಂಗ್ರೆಸ್ ನಿಂದ ಇಬ್ಬರು ಹಾಗೂ ಜೆಡಿಎಸ್ ನಿಂದ ಒಬ್ಬರು ಕಣದಲ್ಲಿದ್ದರು. ಮೂರು ಪಕ್ಷಗಳು ತಮ್ಮ ಸಂಖ್ಯಾಬಲದ ಆಧಾರ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿದ್ದವು. ಇದೀಗ ಆ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾಗಿರುವ ವಿಚಾರವನ್ನು ಚುನಾವಣಾಧಿಕಾರಿ ಹಾಗೂ ಕರ್ನಾಟಕ ವಿಧಾನ ಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಿಸಿದ್ದಾರೆ. ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಏಳು ಸದಸ್ಯರನ್ನು ಆಯ್ಕೆ ಮಾಡಲು ದೈವಾರ್ಷಿಕ ಚುನಾವಣೆಯನ್ನು ದಿನಾಂಕ 29ನೇ ಜೂನ್, 2020 ರಂದು ನಿಗದಿಪಡಿಸಲಾಗಿತ್ತು. ದಿನಾಂಕ: 22.06.2020 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿತ್ತು. ಭಾರತೀಯ ಜನತಾ ಪಾರ್ಟಿಯ ಎನ್. ನಾಗರಾಜು (ಎಂ.ಬಿ.ಬಿ), ಪ್ರತಾಪ್ ಸಿಂಹ ನಾಯಕ್ ಕೆ. ಆರ್. ಶಂಕರ್, ಸುನೀಲ್ ವಲ್ಯಾಪುರ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಸೀರ್ ಅಹ್ಮದ್, ಬಿ.ಕೆ. ಹರಿಪ್ರಸಾದ್ ಹಾಗೂ ಜನತಾದಳ(ಜಾ) ಪಕ್ಷದ ಗೋವಿಂದ ರಾಜು ರವರು ಮಾತ್ರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದರು ಈ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಘೋಷಿಸಿರುತ್ತೇನೆ ಎಂದು ಹೇಳಿದ್ದಾರೆ.