ಇತ್ತೀಚೆಗೆ ಇಸ್ಲಾಂ ಧರ್ಮದ ಕುರಿತು ನೀಡಿದ್ದ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ, ಇದೀಗ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ತಮ್ಮ ಧಾರ್ಮಿಕ ನಿಲುವು, ರಾಜಕೀಯ ಭವಿಷ್ಯ ಹಾಗೂ ವಿರೋಧ ಪಕ್ಷದ ನಾಯಕರ ಕುರಿತು ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಾವೆಂಬುದು ಸಹಜ ಅದಕ್ಕೆ ಹೆದರುವವನಲ್ಲ ನಾನು
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಅಮರಯ್ಯ ಎಂಬುವವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಾವು ಎಂಬುದು ಮನುಷ್ಯನಿಗೆ ಅತ್ಯಂತ ಸಹಜ ಪ್ರಕ್ರಿಯೆ. ಅದು ಇಂದು ಬರಬಹುದು ಅಥವಾ ನಾಳೆ ಬರಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಸಾವಿಗೆ ಹೆದರುವ ವ್ಯಕ್ತಿಯಲ್ಲ ಎಂದು ದೃಢವಾಗಿ ಹೇಳಿದರು. ಇತ್ತೀಚಿನ ಟೀಕೆಗಳು ಮತ್ತು ವಾಗ್ದಾಳಿಗಳ ನಡುವೆಯೂ ತಮ್ಮ ಆತ್ಮವಿಶ್ವಾಸ ಕುಂದಿಲ್ಲ ಎಂಬುದನ್ನು ಅವರು ಈ ಮೂಲಕ ಸಾರಿದರು.
ಸೌದಿ ಅರೇಬಿಯಾ ಮತ್ತು ಇರಾನ್ ನಲ್ಲೂ ನನ್ನದೇ ಪ್ರಚಾರ
ತಮ್ಮ ಹೇಳಿಕೆಯನ್ನು ವಿವಾದ ಮಾಡಿದ ಮಾಧ್ಯಮಗಳಿಗೆ ವ್ಯಂಗ್ಯವಾಗಿಯೇ ಧನ್ಯವಾದ ಅರ್ಪಿಸಿದ ಸಚಿವರು, ನಾನು ಪ್ರಚಾರಕ್ಕಾಗಿ ಹೀಗೆ ಮಾತನಾಡಿದ್ದೇನೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಹೌದು, ಕಳೆದ ಎರಡು ದಿನಗಳಿಂದ ನನಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಚಾರ ಸಿಕ್ಕಿದೆ. ಸೌದಿ ಅರೇಬಿಯಾ, ಇರಾನ್ ಹಾಗೂ ಅಲ್ ಜಝೀರಾ ನ್ಯೂಸ್ ನಲ್ಲೂ ನನ್ನ ಬಗ್ಗೆ ಸುದ್ದಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಬಿಹಾರದ ಸಂಸದ ಡ್ಯಾನಿಶ್ ಅಲಿ ಮತ್ತು ಡಿಕೆ ಶಿವಕುಮಾರ್ ಅವರು ಕೂಡ ಫೋನ್ ಮಾಡಿ ಮಾತನಾಡಿದ್ದಾರೆ ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದರು.
ಆರ್ ಅಶೋಕ್ ಗೂಢಚಾರ
ಇದೇ ವೇಳೆ ಹಳೆಯ ನೆನಪೊಂದನ್ನು ಕೆದಕಿದ ರಾಯರೆಡ್ಡಿ, ನಾನು, ಲಕ್ಷ್ಮಣ ಸವದಿ ಮತ್ತು ಆರ್. ಅಶೋಕ್ ಸೇರಿ ವೈಷ್ಣವಿ ದೇವಿ ದರ್ಶನಕ್ಕೆ ಹೋಗಿದ್ದೆವು. ಅಂದು ಶಕ್ತಿ ಪೀಠದಲ್ಲಿದ್ದಾಗ ದೆಹಲಿಯ ಬಿಜೆಪಿ ನಾಯಕರು ಅಶೋಕ್ ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತಾರೆ ಎಂಬ ಸುದ್ದಿ ನನಗೆ ಮೊದಲೇ ತಿಳಿದಿತ್ತು. ಆ ಕ್ಷಣದಲ್ಲೇ ನಾನು ಅಶೋಕ್ ಅವರಿಗೆ ಶುಭಾಶಯ ತಿಳಿಸಿದ್ದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ನಾನು ಮತಾಂತರವಾಗುವ ಪ್ರಶ್ನೆಯೇ ಇಲ್ಲ
ನಾನು ಸರ್ವ ಧರ್ಮಗಳು ಶ್ರೇಷ್ಠ ಎಂದು ಹೇಳಿದ್ದೇನೆಯೇ ಹೊರತು ಯಾರನ್ನೂ ನಿಂದಿಸಿಲ್ಲ. ಹಜ್ ಅಥವಾ ಉಮ್ರಾಗೆ ಹೋಗಲು ನಾನು ಮುಸ್ಲಿಂ ಅಲ್ಲ. ನಾನು ಬೇರೆ ಯಾವುದೇ ಧರ್ಮಕ್ಕೂ ಮತಾಂತರಗೊಳ್ಳುವ ವ್ಯಕ್ತಿಯೂ ಅಲ್ಲ. ನಾನು ಶರಣ ತತ್ವವನ್ನು ನಂಬುವವನು ಮತ್ತು ಆ ಹಾದಿಯಲ್ಲೇ ಸಾಗುವವನು ಎಂದು ಸ್ಪಷ್ಟಪಡಿಸಿದರು. ಜುಡಾಯಿಸಂ, ಜೈನಿಸಂ, ಬೌದ್ಧ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳನ್ನು ಅಧ್ಯಯನ ಮಾಡಿದ್ದೇನೆ. ಏಸು ಕ್ರಿಸ್ತನ ಸಮಾಧಿಗೂ ಭೇಟಿ ನೀಡಿ ಅಲ್ಲಿನ ಸಾರವನ್ನು ಅರಿತಿದ್ದೇನೆ ಎಂದರು.
ಸ್ವಾರ್ಥಕ್ಕಾಗಿ ದೇವಸ್ಥಾನದ ಮೆಟ್ಟಿಲು ಹತ್ತಲ್ಲ
ನನ್ನನ್ನು ಮಂತ್ರಿ ಮಾಡು ಅಥವಾ ಅಧಿಕಾರ ನೀಡು ಎಂದು ಕೇಳಿಕೊಳ್ಳಲು ನಾನು ದೇವಸ್ಥಾನಗಳಿಗೆ ಹೋಗುವುದಿಲ್ಲ ಅಥವಾ ಸ್ವಾಮೀಜಿಗಳ ಕಾಲು ಬೀಳುವುದಿಲ್ಲ. ದೇವರು ನಮ್ಮ ಮನಸ್ಸಿನಲ್ಲೇ ಇದ್ದಾನೆ. ನಾಡಿಗೆ ಮಳೆ ಬೆಳೆ ಚೆನ್ನಾಗಿ ಆಗಲಿ, ಜನರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಮಾತ್ರ ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಜನರೇ ನಮಗೆ ದೇವರು ಎಂದು ಹೇಳುತ್ತಾ, ಮಗಳು ಮತ್ತು ಹೆಂಡತಿಯ ಇಚ್ಛೆಯಂತೆ ಚಾಮುಂಡೇಶ್ವರಿ ದರ್ಶನಕ್ಕೆ ಮತ್ತು ಸುತ್ತೂರು ಮಠಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು.








