ಮಹಾರಾಜ ಟ್ರೋಫಿಯಲ್ಲಿ ಬುಧವಾರ ಶಿವಮೊಗ್ಗ ಲಯನ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಶಿವಮೊಗ್ಗ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ.
ಶಿವಮೊಗ್ಗ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಬೆಂಗಳೂರು ತಂಡ ಟೇಬಲ್ ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ. 227 ರನ್ಗಳ ಬೃಹತ್ ಟಾರ್ಗೆಟ್ ನೀಡಿದ ಹೊರತಾಗಿಯೂ ಸೋಲಿನ ಮೂಲಕ ಶಿವಮೊಗ್ಗ ಟೂರ್ನಿಯಿಂದ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 227 ರನ್ ಗಳಿಸಿತ್ತು.
ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡ ಶುಭಾಂಗ್ ಹಾಗೂ ಸೂರಜ್ ಅವರ ಅಜೇಯ 169 ರನ್ ಗಳ ಜೊತೆಯಾಟದಿಂದಾಗಿ 6 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲಿನ ನಗೆ ಬೀರಿತು.
ಶಿವಮೊಗ್ಗ ತಂಡಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರು. ನಾಯಕ ನಿಹಾಲ್ 12 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮತ್ತೊಬ್ಬ ಆರಂಭಿಕ ಪ್ರಭಾಕರ್ 16 ರನ್ ಗಳಿಗೆ ಪೆವಿಲಿಯನ್ ಸೇರಿದರು. 4 ಮತ್ತು 5ನೇ ವಿಕೆಟ್ಗೆ ಜೊತೆಯಾದ ಮೋಹಿತ್ ಹಾಗೂ ಅಭಿನವ್ ಅರ್ಧಶತಕದ ಜೊತೆಯಾಟ ನಡೆಸಿದರು. ಈ ವೇಳೆ ಮೋಹಿತ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಗಳಿಸಿದರು.
ಆನಂತರ ಅಭಿನವ್ ಜೊತೆಯಾದ ರೋಹನ್ ಭರ್ಜರಿ ಆಟ ಪ್ರದರ್ಶಿಸಿದರು. 7 ಸಿಕ್ಸರ್ ಗಳನ್ನು ಸಿಡಿಸಿದ ಅಭಿನವ್ ಈ ಆವೃತ್ತಿಯಲ್ಲಿ ಸಿಕ್ಸರ್ಗಳಅರ್ಧಶತಕ ಪೂರೈಸಿದರು. ಒಟ್ಟಾರೆಯಾಗಿ ಈ ಆವೃತ್ತಿಯಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ದಾಖಲೆ ಬರೆದರು.
ಹಾಗೆಯೇ ಈ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 59 ರನ್ ಚಚ್ಚಿದ ಅಭಿನವ್ ಆರೆಂಜ್ ಕ್ಯಾಪನ್ನು ಮತ್ತೆ ತಮ್ಮದಾಗಿಸಿಕೊಂಡರು. ಅಭಿನವ್ಗೆ ಸಾಥ್ ನೀಡಿದ ರೋಹನ್ ಕೂಡ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 45 ರನ್ ಗಳನ್ನು ಗಳಿಸಿದರು. ಈ ಮೂಲಕ ತಂಡ 227 ರನ್ಗಳ ಬೃಹತ್ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಅಗ್ರಕ್ರಮಾಂಕ ಕೈಕೊಟ್ಟಿತು. ನಾಯಕ ಮಯಾಂಕ್ ಗಳಿಸಿದ 33 ರನ್ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಮೂಡಿಬರಲಿಲ್ಲ. ಹೀಗಾಗಿ ತಂಡದ ಸೋಲು ಖಚಿತವಾದಂತೆ ತೋರುತ್ತಿತ್ತು. ಆದರೆ ಐದು ಮತ್ತು ಆರನೇ ಕ್ರಮಾಂಕದಲ್ಲಿ ಜೊತೆಯಾದ ಶುಭಾಂಗ್ ಹಾಗೂ ಸೂರಜ್ ದಾಖಲೆಯ 169 ರನ್ಗಳ ಅಜೇಯ ಜೊತೆಯಾಟವನ್ನಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಶುಭಾಂಗ್ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 85 ರನ್ ಬಾರಿಸಿದರೆ, ಸೂರಜ್ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರು.








