ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಎಂಬ ಶಕ್ತಿಯುತ ನಾಯಕನ ಯುಗಾಂತ್ಯಕ್ಕೆ ಅವರ ವಿರೋಧಿಗಳಿಗಿಂತಲೂ ಅವರ ಸ್ವಂತ ಆಪ್ತರೇ ಕಾರಣವಾದರೇ ಎಂಬ ಬಲವಾದ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರ ರಾಜಕೀಯ ಅಸ್ತಿತ್ವವನ್ನು ಉಳಿಸಲು ಹೋದ ಆಪ್ತ ಬಳಗದ ಅತಿಯಾದ ಬಾಯಿಬಡಕತನವೇ ಇಂದು ಅವರಿಗೆ ಮುಳುವಾಗಿದೆ ಎಂಬ ಶಾಪ ಸಿದ್ದರಾಮಯ್ಯ ಬಣದಲ್ಲೇ ಕೇಳಿಬರುತ್ತಿದೆ.
ಪಟಾಲಂನ ಉದ್ಧಟತನ ಮತ್ತು ನಾಯಕತ್ವದ ಸಂಘರ್ಷ
ಸಿದ್ದರಾಮಯ್ಯ ಅವರ ಪರಮಾಪ್ತರಾದ ಜಮೀರ್ ಅಹಮದ್ ಖಾನ್, ಕೆ.ಎನ್. ರಾಜಣ್ಣ, ಬಸವರಾಜ ರಾಯರೆಡ್ಡಿ ಮತ್ತು ಸ್ವತಃ ಪುತ್ರ ಡಾ. ಯತೀಂದ್ರ ಅವರು ನೀಡಿದ ಹೇಳಿಕೆಗಳು ಡಿ.ಕೆ. ಶಿವಕುಮಾರ್ ಬಣವನ್ನು ಕೆಣಕುವಂತೆ ಇದ್ದವು. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ, ಅವರನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಜಮೀರ್ ಅವರ ಹೇಳಿಕೆಗಳು ಮತ್ತು ಸಿದ್ದರಾಮಯ್ಯ ಅವರನ್ನು ಹುಲಿಗೆ ಹೋಲಿಸಿದ ರೀತಿ ಡಿ.ಕೆ. ಶಿವಕುಮಾರ್ ಅವರ ತಾಳ್ಮೆಯನ್ನು ಪರೀಕ್ಷಿಸಿದವು.
ಇನ್ನೊಂದೆಡೆ ಕೆ.ಎನ್. ರಾಜಣ್ಣ ಅವರು ಹೈಕಮಾಂಡ್ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಒಬ್ಬರಿಗೆ ಒಂದೇ ಹುದ್ದೆ ಎಂಬ ವಾದ ಎತ್ತಿದ್ದರು. ಇದು ನೇರವಾಗಿ ಡಿ.ಕೆ. ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಹಾಕಿದ ಸವಾಲಾಗಿತ್ತು. ಅಷ್ಟೇ ಅಲ್ಲದೆ, ಲೋಕಸಭೆ ಚುನಾವಣೆಗೂ ಮುನ್ನ ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕಕ್ಕೆ ಒತ್ತಾಯಿಸುವ ಮೂಲಕ ಡಿಕೆಶಿಯವರ ಏಕಪಕ್ಷೀಯ ಪ್ರಭಾವವನ್ನು ಕುಗ್ಗಿಸಲು ಆಪ್ತ ಬಣ ನಡೆಸಿದ ತಂತ್ರ ಈಗ ತಿರುಗುಬಾಣವಾಗಿದೆ.
ನಿಯಂತ್ರಣ ತಪ್ಪಿದ ನಾಯಕತ್ವ ಮತ್ತು ಮೌನದ ಮುನಿಸು
ಪಕ್ಷದಲ್ಲಿ ಶಿಸ್ತು ಕಾಪಾಡುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಬೆಂಬಲಿಗರಿಗೆ ನೋಟಿಸ್ ನೀಡಿ ಬಾಯಿ ಮುಚ್ಚಿಸಿದ್ದರು. ಆದರೆ ಇದೇ ರೀತಿಯ ಹಿಡಿತ ಸಿದ್ದರಾಮಯ್ಯ ಅವರಿಂದ ಕಂಡುಬರಲಿಲ್ಲ. ಕೆ.ಎನ್. ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವ್ಯಕ್ತಿಗತ ಟೀಕೆಗಳನ್ನು ಮಾಡುತ್ತಿದ್ದರೂ ಸಿದ್ದರಾಮಯ್ಯ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ರಾಜಣ್ಣ ಅವರ ಕಚೇರಿ ಬಾಗಿಲಿಗೆ ಡಿ.ಕೆ. ಶಿವಕುಮಾರ್ ಅವರೇ ಹೋದರೂ ಅವರಿಗೆ ಗೌರವ ನೀಡದ ಉದ್ಧಟತನವನ್ನು ಸಿದ್ದರಾಮಯ್ಯ ಪರೋಕ್ಷವಾಗಿ ಬೆಂಬಲಿಸಿದರೇ ಎಂಬ ಮಾತುಗಳು ಕೇಳಿಬರುತ್ತಿವೆ.
ವಲಸಿಗರು ಮತ್ತು ಮೂಲ ಕಾಂಗ್ರೆಸಿಗರ ನಡುವಿನ ಸಮರ
ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಇದ್ದ ಮೂಲ ಕಾಂಗ್ರೆಸಿಗರು ಸಮಾಧಾನದಿಂದ ತೂಗಿ ಅಳೆದು ಮಾತನಾಡುತ್ತಿದ್ದರೆ, ವಲಸೆ ಬಂದ ನಾಯಕರು ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನೀಡಿದ ಹೇಳಿಕೆಗಳು ಪಕ್ಷದಲ್ಲಿ ಭಾರಿ ಗೊಂದಲ ಸೃಷ್ಟಿಸಿದವು. 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಬೆಳೆಸಿದ ಪಟಾಲಂ, 2023 ರಲ್ಲಿ ಅಧಿಕಾರ ಬಂದಾಗ ಮತ್ತೆ ಅತಿರೇಕದ ವರ್ತನೆ ತೋರಿತು. ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ ಎಂಬಂತೆ ಬಿಂಬಿಸಿದ್ದು ಹೈಕಮಾಂಡ್ ಮಟ್ಟದಲ್ಲಿ ನಕಾರಾತ್ಮಕವಾಗಿ ಪರಿಣಮಿಸಿತು.
ರೋಷನ್ ಬೇಗ್ ಅವರಂತಹ ನಾಯಕರನ್ನು ಪಕ್ಷದಿಂದ ಹೊರಹಾಕಲು ಸಿದ್ದರಾಮಯ್ಯ ತೋರಿದ ಆಸಕ್ತಿ, ತಮ್ಮ ಆಪ್ತ ರಾಜಣ್ಣ ಅವರನ್ನು ರಕ್ಷಿಸಿಕೊಳ್ಳುವಲ್ಲಿ ತೋರಿದ ಉತ್ಸಾಹ ಮೂಲ ಕಾಂಗ್ರೆಸಿಗರಲ್ಲಿ ಅಸಮಾಧಾನ ಮೂಡಿಸಿತ್ತು. ಇದರ ಪರಿಣಾಮವಾಗಿ ಹೊರಗೆ ಮೌನವಾಗಿದ್ದ ಡಿ.ಕೆ. ಶಿವಕುಮಾರ್ ಅವರು ಒಳಗೊಳಗೆ ರೂಪಿಸಿದ ತಣ್ಣನೆಯ ಕಾರ್ಯತಂತ್ರ ಕೊನೆಗೂ ಜಯಗಳಿಸಿದೆ.
ಮುಕ್ತಾಯವಾದ ಅಧ್ಯಾಯ ಮತ್ತು ಅನಿಶ್ಚಿತ ಭವಿಷ್ಯ
ರಾಜ್ಯಪಾಲರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸುವ ಮೂಲಕ ಕರ್ನಾಟಕ ರಾಜಕೀಯದಲ್ಲಿ ಒಂದು ದೊಡ್ಡ ಪರ್ವ ಅಂತ್ಯಗೊಂಡಿದೆ. ಕಾಂಗ್ರೆಸ್ ಸೇರಿ ಕೇವಲ 20 ವರ್ಷಗಳಲ್ಲಿ 17 ವರ್ಷಗಳ ಕಾಲ ಪ್ರಭಾವಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ ಅವರು, ಈಗ ಸ್ವಯಂಕೃತ ಅಪರಾಧದಂತೆ ಕಂಡಬರುತ್ತಿರುವ ತಮ್ಮ ಆಪ್ತರ ಹೇಳಿಕೆಗಳಿಂದಲೇ ಕುರ್ಚಿಯನ್ನು ಕಳೆದುಕೊಳ್ಳುವಂತಾಗಿದೆ. ನಿನ್ನೆವರೆಗೆ ಸಿದ್ದರಾಮಯ್ಯ ಅವರನ್ನು ಓಲೈಸುತ್ತಿದ್ದ ಅದೇ ಪಟಾಲಂ ಈಗ ಮುಂದಿನ ದಿನಗಳಲ್ಲಿ ಯಾವ ಕಡೆ ವಾಲುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲಿ ಮುಂದಿನ ಸ್ಥಾನಮಾನವೇನು ಎಂಬುದು ಈಗಿರುವ ದೊಡ್ಡ ಪ್ರಶ್ನೆ.







